ಕೆ.ಆರ್.ಪೇಟೆ,ಜೂ.15: ತಾಲ್ಲೂಕಿನ ಮುರುಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬರೋಬ್ಬರಿ 8ಸ್ಥಾನಗಳಲ್ಲಿ ಭರ್ಜರಿ ಜಯಗಳಿಸುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಜೆ.ಡಿ.ಎಸ್. ಮತ್ತು ಬಿಜೆಪಿ ಮೈತ್ರಿ ಕೂಟದ ಅಭ್ಯರ್ಥಿಗಳು 3ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂ.ಪಿ.ಪ್ರತಾಪ್, ಯೋಗೇಗೌಡ, ಎಂ.ಸಿ.ಶಿವಕುಮಾರ್, ಎಂ.ದಿವಾಕರ್, ಎಸ್.ಶಿವಪ್ರಕಾಶ್, ಬಿಸಿಎಂಎ ಮೀಸಲು ಕ್ಷೇತ್ರದಿಂದ ಎಂ.ಸುನಿಲ್ಕುಮಾರ್, ಬಿಸಿಎಂಬಿ ಮೀಸಲು ಕ್ಷೇತ್ರದಿಂದ ಎಂ.ಆರ್.ರಾಜೇಶ್, ಮಹಿಳಾ ಮೀಸಲು ಕ್ಷೇತ್ರದಿಂದ ಲಲಿತಮ್ಮ, ಪದ್ಮ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ರಮೇಶ್ ಅವರು ನಿರ್ದೇಶಕರುಗಳಾಗಿ ಗೆಲುವು ಸಾಧಿಸಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಪ್ರೇಮ ಐಯ್ಯಣ್ಣನಾಯಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಬಿ.ಭರತ್ಕುಮಾರ್ ಘೋಷಣೆ ಮಾಡಿದರು. ಸಹ ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ದೇವೇಗೌಡ ಕಾರ್ಯನಿರ್ವಹಣೆ ಮಾಡಿದರು.

ನೂತನ ನಿರ್ದೇಶಕರುಗಳನ್ನು ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಜಿ.ಪಂ.ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಕಾಂಗ್ರೆಸ್ ಮುಖಂಡರಾದ ವಿಜಯ್ರಾಮೇಗೌಡ, ತಾ.ಪಂ.ಮಾಜಿ ಸದಸ್ಯ ಎಂ.ಎನ್.ವಿಜಯ್ಕುಮಾರ್, ಗ್ರಾಮ ಪಂಚಾಯಿತಿ ಶಿವಸಾಗರ್, ಶಿವಕುಮಾರ್, ಪರಮೇಶ್, ರಮೇಶ್, ಪುನೀತ್, ಬಿ.ಜಯರಾಂ, ಬಳ್ಳೇಕೆರೆ ಗ್ರಾ.ಪಂ.ಮಾಜಿ ಅಧ್ಯಕ್ಷ ವಿಜಯ್ಕುಮಾರ್ ಸೇರಿದಂತೆ ಹಲವು ಮುಖಂಡರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪರಮೇಶ್ ಅವರು ನಮ್ಮ ಕಾಂಗ್ರೆಸ್ ಪಕ್ಷದ 8ಮಂದಿ ನಿರ್ದೇಶಕರನ್ನು ಗೆಲ್ಲಿಸಿದ ಸಂಘದ ಶೇರುದಾರ ಮತದಾರರಿಗೆ ಹಾಗೂ ಗ್ರಾಮದ ಮುಖಂಡರಿಗೆ ಹಾಗೂ ಗೆಲುವಿಗೆ ಸಹಕಾರ ನೀಡಿದ ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಜಿ.ಪಂ.ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಕಾಂಗ್ರೆಸ್ ಮುಖಂಡರಾದ ವಿಜಯ್ರಾಮೇಗೌಡ, ತಾ.ಪಂ.ಮಾಜಿ ಸದಸ್ಯ ಎಂ.ಎನ್.ವಿಜಯ್ಕುಮಾರ್ ಅವರುಗಳಿಗೆ ಮುರುಕನಹಳ್ಳಿ ಗ್ರಾಮದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
- ಶ್ರೀನಿವಾಸ್ ಆರ್.