ಕೆ.ಆರ್.ಪೇಟೆ: ತಾಲ್ಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆ ಮತ್ತು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಜ್ಞಾನ ಭಾರತಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಮುರುಕನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಸಂಘಗಳಿಗೆ ಸಾಲದ ಚೆಕ್ ವಿತರಣೆ ಹಾಗೂ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮವು ಮುರುಕನಹಳ್ಳಿ ಗ್ರಾಮದಲ್ಲಿ ನಡೆಯಿತು.
ಶಾಸಕ ಹೆಚ್.ಟಿ.ಮಂಜು ಅವರು ಮಹಾಸಭೆ ಹಾಗೂ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸಿ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲದ ಚೆಕ್ಕುಗಳನ್ನು ವಿತರಣೆ ಮಾಡಿ ಮಾತನಾಡಿದರು. ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಬೇಕು. ಗ್ರಾಮ ಪಂಚಾಯಿತಿ ಹಾಗೂ ಸರ್ಕಾರದಿಂದ ನೀಡಲಾಗುವ ಸಾಲದ ಮೊತ್ತವನ್ನು ಸ್ವಯಂ ಉದ್ಯೋಗ ಕೈಗೊಳ್ಳಲು ಬಳಕೆ ಮಾಡಬೇಕು. ಪ್ರಮುಖವಾಗಿ ಗುಡಿ ಕೈಗಾರಿಕೆಗಳಾದ ಮೇಣದ ಬತ್ತಿ ತಯಾರಿಕೆ, ಗಂದದ ಕಡ್ಡಿ ತಯಾರಿಕೆ, ಊಟದ ಎಲೆ, ಊಟದ ಪ್ಲೇಟ್ ತಯಾರಿಕೆ, ಫೆನಾಯಿಲ್, ಬ್ಲೀಚಿಂಗ್ ಪೌಡರ್ ತಯಾರಿಕೆಯಂತಹ ಸಣ್ಣ ಉದ್ಯಮವನ್ನು ಸ್ಥಾಪನೆ ಮಾಡಿ ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಗಳಿಸಬಹುದು. ಇದರಿಂದ ಹೆಚ್ಚು ಹೆಚ್ಚು ಲಾಭ ಗಳಿಸಿ ಮಹಿಳೆಯರು ಆರ್ಥಿಕ ಸಬಲೀಕರಣ ಸಾಧಿಸಬೇಕು ಎಂದು ಸಲಹೆ ನೀಡಿದರು.
ಇಂದು ಬರೋಡ ಬ್ಯಾಂಕ್ ಕಳೆದ ೨೫ವರ್ಷಗಳಿಂದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯ ತರಬೇತಿ ನೀಡುತ್ತಿದೆ. 18 ರಿಂದ 45 ವರ್ಷ ಒಳಪಟ್ಟ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ತರಬೇತಿಯ ನಂತರ ಬರೋಡ ಬ್ಯಾಂಕಿನಿಂದಲೇ ಸಬ್ಸಿಡಿ ರೂಪದಲ್ಲಿ ಸಾಲವನ್ನು ನೀಡಲಾಗುತ್ತದೆ ಹಾಗಾಗಿ ಆಸಕ್ತ ನಿರುದ್ಯೋಗಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕರು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಶೇಖರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕರ ಧರ್ಮಪತ್ನಿ ರಮಾಮಂಜು ಮಹಿಳಾ ಸಂಘಗಳಿಗೆ ಸಾಲದ ಚೆಕ್ಕುಗಳನ್ನು ವಿತರಣೆ ಮಾಡಿದರು. ಬರೋಡಾ ಬ್ಯಾಂಕಿನ ವೆಬ್ಸಿಟಿ ಸಂಸ್ಥೆಯ ಪ್ರಸನ್ನಕುಮಾರ್, ರವಿ, ತಾಲೂಕು ಆರ್ಥಿಕ ಸಾಕ್ಷರತಾ ಅಧಿಕಾರಿ ಪ್ರಮೋದ್ ತರಬೇತಿ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕರ ಧರ್ಮಪತ್ನಿ ರಮಾ ಮಂಜು, ಗ್ರಾ.ಪಂ.ಉಪಾಧ್ಯಕ್ಷ ಪುನೀತ್ಕುಮಾರ್, ಪಿಡಿಓ ಮುಜಾಕಿರ್, ಒಕ್ಕೂಟದ ಅಧ್ಯಕ್ಷೆ ಪೂರ್ಣಿಮ ಆನಂದ್, ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೀಶ್, ದೇವರಾಜು, ಹೆಚ್.ಟಿ.ಜಗದೀಶ್, ಧನಂಜಯ, ಕುಮಾರಸ್ವಾಮಿ, ಪೂರ್ಣಿಮಾ, ರತ್ನಮ್ಮ, ಲಲಿತಾ, ಪುಷ್ಪ, ನಂದಿನಿ, ಲೀಲಾವತಿ, ಶೋಭ, ತಾಲ್ಲೂಕು ಸಂಜೀವಿನಿ ಯೋಜನೆಯ ಮಹಿಳಾ ಒಕ್ಕೂಟದ ಮೇಲ್ವಿಚಾರಕ ನಂಜುಂಡಯ್ಯ, ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷೆ ಬೇಬಿ, ಕಾರ್ಯದರ್ಶಿ ಕುಮಾರಿ, ಸಹ ಕಾರ್ಯದರ್ಶಿ ಗುಲ್ನಾಜ್ ಭಾನು, ಖಜಾಂಚಿ ಗಂಗಮ್ಮ ಹಾಗೂ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ನೂರಾರು ಮಂದಿ ಸಾರ್ವಜನಿಕರು ಭಾಗವಹಿಸಿದ್ದರು.
-ಶ್ರೀನಿವಾಸ ಕೆ.ಆರ್.ಪೇಟೆ