ಚಿಕ್ಕಮಗಳೂರು– ಸ್ವಾಭಿಮಾನದಿಂದ ಜೀವಿಸುವ, ಎಲ್ಲರಂತೆ ಸಮಾಜದಲ್ಲಿ ಕಾರ್ಯ ನಿರ್ವಹಿಸುವ ಹೆಣ್ಣು ದುರ್ಬಲಳಲ್ಲ. ಜೊತೆಗೆ ಗಂಡಿನ ಯಶಸ್ಸಿನ ಹಿಂದೆ ಹೆಣ್ಣಿನ ಶಕ್ತಿ ಅಗಾಧವಾಗಿದೆ ಎಂದು ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಭಾನುಮತಿ ಹೇಳಿದರು.
ನಗರದ ಟಿಎಂಎಸ್ ಶಾಲೆಯ ಸಭಾಂಗಣದಲ್ಲಿ ಚಿಕ್ಕಮಗಳೂರು ವಕೀಲರ ಸಂಘದಿಂದ ಏರ್ಪಡಿಸಿದ್ಧ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿ ಮಂಗಳವಾರ ಸಂಜೆ ಅವರು ಮಾತನಾಡಿದರು.
ಸಮಾಜದ ಬಹುತೇಕ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಹೆಣ್ಣು, ಮಡದಿ, ತಾಯಿ ಹಾಗೂ ಅಕ್ಕತಂಗಿಯರ ಬಾಂಧವ್ಯ ನಿಭಾಯಿಸುವ ಶಕ್ತಿ ಹೊಂದಿದ್ದಾಳೆ. ಅಲ್ಲದೇ ಶಿಕ್ಷಕಿ, ಗಾಯನ ಹಾಗೂ ನ್ಯಾಯಾಧೀಶರಾಗಿ ನೊಂದವರ ಬಾಳಿಗೆ ನ್ಯಾಯ ಒದಗಿಸುವ ಮೂಲಕ ಬಡವರ ಪಾಲಿಗೆ ಆಶಾದಾಯಕವಾಗಿದ್ದಾಳೆ ಎಂದರು.

ಕುಟುಂಬದ ಸದಸ್ಯರಲ್ಲಿ ಅನಾರೋಗ್ಯ ಕಂಡು ಬಂದಲ್ಲಿ ಮೊದಲು ಆರೈಕೆಯ ಗುಣ ಮಹಿಳೆಯರು ಬೆಳೆಸಿಕೊಂಡಿದ್ದಾರೆ. ರೋಗ ಗುಣಮುಖವಾಗಲು ಹಲವಾರು ಪ್ರಯತ್ನಗಳು ನಡೆಸಿ ಸುರಕ್ಷತೆಯಿಂದ ಕುಟುಂಬವನ್ನು ಕಾಪಾಡುವ ಜವಾಬ್ದಾರಿ ಹೊತ್ತಿರುವ ಹೆಣ್ಣು ಕರುಣಾಮಯಿ ಎಂದು ತಿಳಿಸಿದರು.
ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಮಾತನಾಡಿ ಹಿಂದಿನ ಕಾಲದಲ್ಲಿ ಗಂಡು, ಹೆಣ್ಣು ಎಂಬ ಬೇಧವಿತ್ತು. ಈ ಪದ್ಧತಿ ಆಧುನಿಕತೆಯಲ್ಲೂ ಕೆಲವರು ಮುಂದುವರೆದಿರುವುದು ಬೇಸರದ ಸಂಗತಿ. ಹೀಗಾಗಿ ಪ್ರತಿ ಕುಟುಂಬದಲ್ಲಿ ಹೆಣ್ಣೊಂದು ಹುಟ್ಟಿದರೆ ಖುಷಿಪಟ್ಟು ತಾಯಿಯಂತೆ ಗೌರ ವಿಸಬೇಕು ಎಂದರು.
ಹೆಣ್ಣಲ್ಲಿ ಧೈರ್ಯ, ಸಹನೆ ಹಾಗೂ ಆತ್ಮವಿಶ್ವಾಸ ಕೂಡಿರುವ ಹಿನ್ನೆಲೆಯಲ್ಲಿ ಭಗವಂತನು ಪವಿತ್ರ ಗರ್ಭಕೋಶವನ್ನು ಹೆಣ್ಣಿಗೆ ಕರುಣಿಸಿದ್ದೇನೆ. ಇಂತಹ ಪುಣ್ಯವನ್ನು ಪಡೆದಿರುವ ಮಹಿಳೆಯರು ಹೆಮ್ಮೆಪಡಬೇಕು. ನಾಗರೀಕರು ಒಂದು ದಿನಕ್ಕೆ ಮಹಿಳಾ ದಿನಾಚರಣೆ ಆಚರಿಸದೇ, ಪ್ರತಿನಿತ್ಯವು ಹೆಣ್ಣಿಗೆ ಗೌರವಿಸುವ ಮುಖೇ ನಾ ಆಚರಣೆ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ದೈನಂ ದಿನ ವಕೀಲರ ವೃತ್ತಿಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ವಕೀಲರಿಗೆ ಮಹಿಳಾ ದಿನಾ ಅಂಗವಾಗಿ ವಿವಿಧ ಕ್ರೀಡಾಕೂಟ, ಮನರಂಜನೆ ಕಾರ್ಯಕ್ರಮ ಹಮ್ಮಿಕೊಂಡು ಕೊಂಚ ಮನಸ್ಸನ್ನು ಒತ್ತಡದಿಂದ ಹಗುರಗೊಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಮಂಜುನಾಥ್, ಮೂರನೇ ಹೆಚ್ಚುವರಿ ನ್ಯಾಯಾಧೀಶೆ ನಂದಿನಿ, ವಕೀಲರ ಸಂಘದ ಉಪಾಧ್ಯಕ್ಷ ಶರತ್ಚಂದ್ರ, ಕಾರ್ಯದರ್ಶಿ ಅನಿಲ್, ಸಹ ಕಾ ರ್ಯದರ್ಶಿ ಪ್ರಿಯದರ್ಶಿನಿ, ಖಜಾಂಚಿ ದೀಪಕ್ ಹಾಗೂ ವಕೀಲರುಗಳು ಉಪಸ್ಥಿತರಿದ್ದರು.
-ಸುರೇಶ್ ಎನ್.