ಎಚ್.ಡಿ.ಕೋಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಹಲವಾರು ಕುಟುಂಬಗಳು ಬೆಳಕು ಕಂಡಿದೆ ಎಂದು ತಾಲ್ಲೂಕು ಯೋಜನಾಧಿಕಾರಿ ಭಾಸ್ಕರ್ ತಿಳಿಸಿದರು.
ತಾಲೂಕಿನ ಹೊಸತೊರವಳ್ಳಿ ಗ್ರಾಮದಲ್ಲಿ ವಾತ್ಸಲ್ಯ ಯೋಜನೆಯಡಿ ವಿಶೇಷ ಚೇತನ ಸ್ವಾಮಿನಾಯಕರಿಗೆ ಮನೆ ನಿರ್ಮಿಸಿ ಕೀಯನ್ನು ಹಸ್ತಾಂತರಿಸಿ ಮಾತನಾಡಿದರು.
ಸ್ವಾಮಿ ನಾಯಕ ಚೇತನಾಗಿದ್ದು ತಾಯಿ ದೇವಮ್ಮನೊಂದಿಗೆ ಗುಡಿಸಲಿನಲ್ಲಿದ್ದು ಮಳೆಗಾಲದಲ್ಲಿ ವಾಸಕ್ಕೆ ಕಷ್ಟವಾಗಿತ್ತು. ಹಾಗಾಗಿ ಜ್ಞಾನವಿಕಾಸದಿಂದ ವಾತ್ಸಲ್ಯ ಯೋಜನೆಯಡಿ ಒಂದು ಲಕ್ಷದ ಇಪ್ಪತ್ತು ಸಾವಿರ ವೆಚ್ಚದಲ್ಲಿ ಮನೆ ನಿರ್ಮಿಸಿ ನೀಡಲಾಗಿದೆ. ಈ ರೀತಿ ರಾಜ್ಯದಲಿ ಅಸಹಾಯಕರಿಗೆ ಆಸರೆಯಾಗಿ 750ಕ್ಕೂ ಹೆಚ್ಚು ಮನೆ ಹಾಗೂ ತಾಲ್ಲೂಕಿನಲ್ಲಿ 4 ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಇದಲ್ಲದೆ ತಾಲ್ಲೂಕಿನಲ್ಲಿ 170 ಜನ ಅಸಕ್ತರಿಗೆ ಮಾಸಾಶನ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಜನಜಾಗೃತಿ ಸದಸ್ಯ ಕನ್ನಡ ಪ್ರಮೋದ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಸಹಾಯಧನ, ದೇವಸ್ಥಾನ ಮತ್ತು ಸಮುದಾಯ ಭವನಗಳಿಗೆ ನೆರವು, ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಅನುಧಾನ ಸೇರಿದಂತೆ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಲಾಗಿದೆ. ಯುವಕರು ದುಶ್ಚಟಕ್ಕೆ ಬಲಿಯಾಗದಂತೆ ಮದ್ಯವರ್ಜನ ಶಿಬಿರಗಳು ಸೇರಿದಂತೆ ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಜೆ.ಪಿ.ಶಿವರಾಜಪ್ಪ, ಜ್ಞಾನವಿಕಾಸ ಸಮನ್ವಯಾಧಿಕಾರಿ ಮಲ್ಲಮ್ಮ ಸೇವಾ ಪ್ರತಿನಿಧಿಗಳಾದ ಮಂಗಳಮ್ಮ, ಜಯಮ್ಮ, ಗ್ರಾಮ ಪಂಚಾಯ್ತಿ ಸದಸ್ಯೆ ಚಿಕ್ಕಮ್ಮ, ಮಾಜಿ ಸದಸ್ಯ ಚನ್ನನಾಯಕ, ಯಜಮಾನ ಚನ್ನನಾಯಕ, ಗ್ರಾಮಸ್ಥರಾದ ಸಂಜೀವಶೆಟ್ಟಿ, ಮಹೇಶ್, ಸೋಮಣ್ಣ ಸೇರಿದಂತೆ ಮತ್ತಿತರರಿದ್ದರು.
– ಶಿವಕುಮಾರ