ತುಮಕೂರು : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 1956ರ ಕಂಡಿಕೆ 3(ಐ)(1) ಮತ್ತು (3)ರ ಅಡಿಯಲ್ಲಿ ಬರುವ ಭಾರತ್ ಮಾಲಾ ಪರಿ ಯೋಜನೆ ಯಡಿಯಲ್ಲಿ ಗ್ರೀನ್ ಫೀಲ್ಡ್ ಸ್ಟಾಂಡ್ ಅನ್ನು ತುಮಕೂರು ಬೈಪಾಸ್ ಎನ್.ಹೆಚ್.48ರ ನಂದಿಹಳ್ಳಿ ಬಳಿ ಪ್ರಾರಂಭಗೊಂಡಿದ್ದು ಎನ್.ಹೆಚ್.206 ಮಲ್ಲಸಂದ್ರ ಗ್ರಾಮಗಳಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತಪಡಿಸಿ ಇಂದು ತುಮಕೂರು ನಗರದ ರಾಷ್ಟ್ರೀಯ ಪ್ರಾಧಿಕಾರ ಕಛೇರಿಯ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ರೈತರು ಮತ್ತು ಸ್ಥಳೀಯ ಜನರು ಜಮಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡು ಮನವಿಯನ್ನು ಸಲ್ಲಿಸಿದರು.
ಮನವಿ ಸಲ್ಲಿಸಲು ಬಂದಿದ್ದ ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾ ರೈತರೊಬ್ಬರು ಮಾತನಾಡಿ ಇಲ್ಲಿನ ಬಹುತೇಕ ಜನರು ಹಲವಾರು ದಶಕಗಳಿಂದ ಭೂಮಿಯನ್ನೇ ನಂಬಿಕೊಂಡು, ವ್ಯವಸಾಯವನ್ನೇ ಮೂಲ ಕಸುಬನ್ನಾಗಿಸಿಕೊಂಡು ಜೀವನ ನಡೆಸುತ್ತಿದ್ದು, ಇದೀಗ ತಮ್ಮ ಪ್ರಾಧಿಕಾರದಿಂದ ರಸ್ತೆ ನಿರ್ಮಾಣದ ಹೆಸರಿನಲ್ಲಿ ನಮ್ಮ ವ್ಯವಸಾಯ ಉಪಯೋಗಿ ಜಮೀನುಗಳನ್ನು ತಾವು ಸ್ವಾಧೀನ ಪಡಿಸಿಕೊಳ್ಳುವುದಾಗಿ ಪ್ರಕಟಣೆಯನ್ನು ಹೊರಡಿಸಿದ್ದೀರಿ, ನೀವುಗಳು ನಮ್ಮ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡರೇ ನಾವು ಜೀವನ ನಡೆಸುವುದಾದರೂ ಹೇಗೆ, ಈಗಾಗಲೇ ನಮ್ಮ ಭೂಮಿಯ ತಾಪಮಾನ ಗರಿಷ್ಠ ಮಟ್ಟ ತಲುಪಿದೆ, ಅಂತಹದರಲ್ಲಿ ನಮ್ಮ ಫಲವತ್ತಾದ ಜಮೀನುಗಳನ್ನು ನಿಮಗೆ ನಾವು ಕೊಡಲು ಸಿದ್ಧರಿಲ್ಲ, ಪ್ರಾಣವನ್ನಾದರೂ ಕೊಡುತ್ತೇವೆ.

ಭೂಮಿಯನ್ನು ನೀಡುವುದಿಲ್ಲ ಎಂದು ಒಕ್ಕೊರಲಿನಿಂದ ಇಂದು ರಾಷ್ಟ್ರೀಯ ರಸ್ತೆ ಪ್ರಾಧಿಕಾರದ ಕಛೇರಿಗೆ ಆಗಮಿಸಿ ನಾವುಗಳು ತಕರಾರು ಅರ್ಜಿಯನ್ನು ಸಲ್ಲಿಸುತ್ತಿದ್ದೇವೆ, ದಯಮಾಡಿ ನಮ್ಮ ಅರ್ಜಿಯನ್ನು ಪುರಸ್ಕರಿಸಿ, ನಮ್ಮದು ಫಲವತ್ತಾದ ಭೂಮಿ ನಮಗೆ ಇದರಿಂದಲೇ ಜೀವನ, ಇದನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ, ನಾವುಗಳೆಲ್ಲಾ ಬೀದಿ ಪಾಲಾಗುತ್ತೇವೆ ಎಂದು ಅಳಲನ್ನು ತೋಡಿಕೊಂಡರಲ್ಲದೇ, ಈಗಾಗಲೇ ನಕಾಶೆ ಹೊಂದಿರುವ ಅಂದರೆ ದಾಬಸ್ಪೇಟೆಯಿಂದ ಗುಬ್ಬಿ ಮಾರ್ಗದ ರಸ್ತೆಯನ್ನೇ ಮಾಡಿಕೊಂಡರೇ ನಮ್ಮಗಳ ಅಭ್ಯಂತರವೇನು ಇರುವುದಿಲ್ಲವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಹೊನ್ನೇದಾಸೇಗೌಡರು, ಭರತ್, ಚಿಕ್ಕಣ್ಣ, ಶಿವರಾಜು, ಭೈರಪ್ಪ, ತರುಣ್, ಹೆಚ್.ಎಸ್.ಲಿಂಗರಾಜು, ಕುಮಾರಯ್ಯ, ಚಿಕ್ಕರುದ್ರಯ್ಯ, ಚಂದ್ರಶೇಖರ್ ಸೇರಿದಂತೆ ನಂದಿಹಳ್ಳಿ, ದೇವರಹೊಸಹಳ್ಳಿ, ಕೋಳಿಹಳ್ಳಿ, ಗೊಲ್ಲರಹಟ್ಟಿ, ಭೈರಸಂದ್ರ, ನೇರಳಾಪುರ ಸೇರಿದಂತೆ ಸುಮಾರು 200ಕ್ಕೂ ಅಧಿಕ ಜನರು ಫಾಲ್ಗೊಂಡಿದ್ದರು.
–