ಕೆ.ಆರ್.ಪೇಟೆ: ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ತಾಲೂಕಿನ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಸಮರ್ಪಕವಾಗಿ ಮಾಡುತ್ತಿಲ್ಲ. ಗ್ರಾಮಾಭಿವೃದ್ದಿಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕಾದ ಪಿ.ಡಿ.ಓ ಗಳು ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷö್ಯ ತೋರಿಸಿದರೆ ಸಾರ್ವಜನಿಕರ ಸಮಸ್ಯೆಗಳು ಬಗೆ ಹರಿಯುವುದಾರೂ ಹೇಗೆ? ಎಂದು ಶಾಸಕ ಹೆಚ್.ಟಿ.ಮಂಜು ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಅನುಷ್ಠಾನವಾಗುವ ಎಲ್ಲಾ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಗಾಗಿ ಸಭೆ ನಡೆಸಲಾಗುತ್ತದೆ. ಆದರೆ ಸಭೆಗೆ ತಾಲೂಕಿನ 34 ಗ್ರಾಮ ಪಂಚಾಯತಿಗಳ ಪೈಕಿ ಕೇವಲ ಎರಡು ಗ್ರಾಮ ಪಂಚಾಯತಿಗಳ ಪಿ.ಡಿ.ಓ ಗಳು ಮಾತ್ರ ಪ್ರಗತಿ ಅನುಪಾಲನಾ ವರದಿಯನ್ನು ತಂದಿದ್ದಾರೆ. ಇತರ ಪಿ.ಡಿ.ಓಗಳಿಗೆ ಸಾರ್ವಜನಿಕ ಜವಾಬ್ದಾರಿ ಇಲ್ಲವೇ? ಪ್ರತಿ ಸಭೆಯಲ್ಲಿಯೂ ಪಿ.ಡಿ.ಓ ಗಳ ನಿರ್ಲಕ್ಷ್ಯ ಧೋರಣೆ ಪುನರಾವರ್ತನೆಯಾಗುತ್ತಿದೆ.

ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ಕರ್ತವ್ಯದಲ್ಲಿ ಸಡಿಲ ನೀತಿ ಅನುಸರಿಸುತ್ತಿರುವುದು ಇದಕ್ಕೆ ಕಾರಣ. ಪ್ರತಿ ಮೀಟಿಂಗ್ನಲ್ಲೂ ಪಿ.ಡಿ.ಓ ಗಳು ಮುಂದಿನ ಸಭೆಗಳಲ್ಲಿ ಪೂರ್ಣ ಮಾಹಿತಿಯೊಂದಿಗೆ ಬರುತ್ತೇವೆ ಎಂದು ಸಬೂಬು ಹೇಳುತ್ತಾರೆ. ಆದರೆ ತಾಲೂಕಿನಲ್ಲಿ ಪಿ.ಡಿ.ಓಗಳ ಕಾರ್ಯ ವೈಖರಿ ಬದಲಾಗುತ್ತಿಲ್ಲ. ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು ಆಡಳಿತದಲ್ಲಿ ಬಿಗಿ ಧೋರಣೆ ಪ್ರದರ್ಶಿಸಬೇಕು. ಕರ್ತವ್ಯ ಲೋಪ ಹಾಗೂ ಸಬಾ ಗೌರವ ಪಾಲಿಸದ ಪಿ.ಡಿ.ಓ ಗಳ ವಿರುದ್ದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ತಾಲೂಕಿಗೆ 4600 ಮನೆ ಮಜೂರಾಗಿದೆ. ಆದರೆ 34 ಗ್ರಾಮ ಪಂಚಾಯತಿಗಳ ಮೂಲಕ ಕೇವಲ 1300 ಫಲಾನುಭವಿಗಳನ್ನು ಮಾತ್ರ ಗುರುತಿಸಲಾಗಿದೆ. ಬಸವ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ತಾಲೂಕಿನ ದಬ್ಬೇಘಟ್ಟ ಗ್ರಾ.ಪಂ 100, ಹಿರೀಕಳಲೆ ಗ್ರಾ.ಪಂ 100, ವಿಠಲಾಪುರ ಗ್ರಾ.ಪಂ 112 ಮತ್ತು ಅಘಲಯ ಗ್ರಾಮ ಪಂಚಾಯತಿ ವತಿಯಿಂದ 75 ಫಲಾನುಭವಿಗಳನ್ನು ಗುರುತಿಸಲಾಗಿದೆ. ಉಳಿದ ಗ್ರಾಮ ಪಂಚಾಯತಿಗಳು ಇದುವೆರಗೂ ಫಲಾನುಭವಿಗಳ ಆಯ್ಕೆಗೆ ಮುಂದಾಗಿಲ್ಲ. ಆಶ್ರಯ ಸಮಿತಿಗೆ ಆಯಾ ಭಾಗದ ಶಿರಸ್ತೆದಾರರು ಮುಖ್ಯಸ್ಥರಾಗಿದ್ದು ಕಾಲ ಕಾಲಕ್ಕೆ ಸಭೆ ನಡೆಸಿ ನಿವೆಶನ ರಹಿತರನ್ನು ಗುರುತಿಸಿ ನಿವೇಶನ ಹಂಚಿಕೆಗೆ ಕ್ರಮ ವಹಿಸಬೇಕು.

ಆರ್.ಐ ಗಳು ಮತ್ತು ಪಿ.ಡಿ.ಓ ಗಳು ಸಮನ್ವದಿಂದ ಕೆಲಸ ಮಾಡಿ ಸರ್ಕಾರಿ ಜಾಗವನ್ನು ಗುರುತಿಸಿ ಆಶ್ರಯ ಸಮಿತಿಗೆ ಪಡೆದುಕೊಂಡು ನಿವೇಶನಗಳ ಹಂಚಿಕೆ ಮಾಡಬೇಕು ಆದರೆ ತಾಲೂಕಿನ ಯಾವುದೇ ಒಂದು ಗ್ರಾಮ ಪಂಚಾಯತಿ ಜಾಗ ಗುರುತಿಸಿ ನಿವೇಶನ ರಹಿತರಿಗೆ ಹಕ್ಕು ವಿತರಿಸಲು ಕ್ರಮ ವಹಿಸಿಲ್ಲ. ಗ್ರಾಮೀಣ ಭಾಗದಲ್ಲಿ ಘನತ್ಯಾಜ್ಯ ವಿಲೇ ಮಾಡುತ್ತಿಲ್ಲ. ಶುದ್ದ ಕುಡಿಯುಇವ ನೀರು ಪೂರೈಕೆಗೆ ಅಗತ್ಯ ಕ್ರಮ ವಹಿಸುತ್ತಿಲ್ಲ. ಕುಡಿಯುವ ನೀರು ಪೂರೈಕೆ ಮಡುವ ವಾಟರ್ ಟ್ಯಂಕ್ ಗಳ ಸುತ್ತ ಗಿಡಗೆಂಟೆಗಳು ಬೆಳೆದು ಕೊಂಡಿವೆ. ಸ್ವಚ್ಚ ಪರಿಸರ ನಿರ್ಮಾಣಕ್ಕೂ ಪಿ.ಡಿ.ಓಗಳು ಮುಂದಾಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಪಿ.ಡಿ.ಓಗಳು ನಿರ್ವಹಿಸಬಹುದಾದ ಸಣ್ಣಪುಟ್ಟ ಸಮಸ್ಯೆಗಳಿಗೂ ಜನ ಶಾಸಕರ ಬಳಿಗೆ ಬರುವಂತಾಗಿದೆ. ಪಿ.ಡಿ.ಓ ಗಳ ಕರ್ತವ್ಯ ಲೋಪವೇ ಇದಕ್ಕೆ ಮುಖ್ಯ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕ ಹೆಚ್.ಟಿ.ಮಂಜು ನರೇಗಾ ಸಪ್ಲೆ ಬಿಲ್ ಪಾವತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡಯುತ್ತಿದೆ.
ನರೇಗಾ ಮೂಲಕ ಕೆಲಸ ಮಾಡಿದ ರೈತರ ಖಾತೆಗೆ ಸಪ್ಲೆ ಬಿಲ್ ಹಣ ಪಾವತಿಸಿದೆ ಪಿ.ಡಿ.ಓ ಗಳು ಏಜೆನ್ಸಿ ಖಾತೆಗೆ ಹಣ ಹಾಕಿ ಪರ್ಸಂಟೇಜ್ ಪಡೆಯುತ್ತಿದ್ದಾರೆ. ರೈತರಿಗೆ ತಿಳಿಯದಂತೆ ಹೆಚ್ಚುವರಿ ಜಾಬ್ ಕಾರ್ಡುಗಳನ್ನು ಸೃಷ್ಠಿಸಿ ಸರ್ಕಾರದ ಹಣವನ್ನು ದೋಚುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳಿವೆ. ಇದರ ಬಗ್ಗೆ ನಿಗಾ ವಹಿಸುವಂತೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ ಅವರಿಗೆ ಸೂಚಿಸಿದರು.
ದನದ ಕೊಟ್ಟಿಗೆ, ಬದು ನಿರ್ಮಾಣ, ಅರಣ್ಯೀಕರಣ, ಶಾಲಾ ಶೌಚಾಲಯ, ಕೆರೆಗಳ ಅಭಿವೃದ್ದಿ ಮುಂತಾದ 26 ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾ.ಪಂ.ಕಾರ್ಯನಿರ್ವಹಕ ಅಧಿಕಾರಿ ಕೆ.ಸುಷ್ಮಾ, ಜಿ.ಪಂ ಕುಡಿಯುವ ನೀರು ವಿಭಾಗದ ಸಹಾಯಕ ಎಂಜಿನಿಯರ್ ರಶ್ಮಿ, ತಾ.ಪಂ.ಯೋಜನಾಧಿಕಾರಿ ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪಿ.ಡಿ.ಓಗಳು ಸಭೆಯಲ್ಲಿದ್ದರು.
-ಶ್ರೀನಿವಾಸ್ ಆರ್.