ಕೆ.ಆರ್.ಪೇಟೆ: ಮಕ್ಕಳ ಭವಿಷ್ಯವನ್ನು ಸುಭದ್ರಗೊಳಿಸಲು ಗ್ರಾಮೀಣರ ಜೀವನದ ಬಗೆಗೆ ಗೌರವ ಬರುವ ರೀತಿಯ ಶಿಕ್ಷಣವನ್ನು ಕೊಡಬೇಕಾಗಿದೆ. ಇಂತಹ ಶಿಕ್ಷಣವನ್ನು ಕಳೆದ ಹತ್ತಾರು ದಶಕಗಳಿಂದ ನೀಡಲು ವೇದಿಕೆಯನ್ನು ಒದಗಿಸಿರುವ ರಾಷ್ಟ್ರೀಯ ಸೇವಾ ಯೋಜನೆಯು ಬಹಳ ಅತ್ಯುತ್ತಮ ಯೋಜನೆಯಾಗಿದೆ ಎಂದು ಮಿತ್ರ ಫೌಂಡೇಷನ್ ಅಧ್ಯಕ್ಷ ಬೂಕನಕೆರೆ ವಿಜಯ್ ರಾಮೇಗೌಡ ಹೇಳಿದರು.
ಅವರು ಬೂಕನಕೆರೆ ಗ್ರಾಮದಲ್ಲಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನವರು ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಾತ್ಮಗಾಂಧಿ ಜೀವನದ ಮಹಾತ್ವಕಾಂಕ್ಷೆಯ ಈ ಯೋಜನೆಯು ದೇಶದಾದ್ಯಂತ ಕೋಟ್ಯಾಂತರ ನಾಯಕರುಗಳನ್ನು ಸೃಷ್ಠಿಸಿದೆ. ನಾಯಕತ್ವವು ಸುಖಾ ಸುಮ್ಮನೆ ಬರುವಂತಹದ್ದಲ್ಲ. ಅದಕ್ಕಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕೂಡಾ ಗೌರವಿಸುವ ಪ್ರೀತಿಸುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಗ್ರಾಮ ಸ್ವರಾಜ್ಯದ ಕಲ್ಪನೆಯೆ ಅತ್ಯಂತ ಸುಂದರವಾದದ್ದು. ನಗರ ಪ್ರದೇಶದ ಜನರಿಗಿಂತ ಅತಿ ಹೆಚ್ಚು ಸೌಲಭ್ಯ ವಂಚಿತರಾಗಿರುವ ಗ್ರಾಮೀಣ ಜನರ ಬಳಿಗೆ ತೆರಳಿ ಅವರಿಗೆ ಸೇವೆಯನ್ನು ಒದಗಿಸಬೇಕು. ಶಿಬಿರದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರು ಕೂಡಾ ಸಮಾಜದ ಯೋಧರಂತೆ. ಯೋಧರು ಗಡಿಯನ್ನು ಕಾದರೆ ರಾಷ್ಟ್ರೀಯ ಸೇವಾ ಯೋಜನೆಯಡಿಯಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳು ಸಮಾಜವನ್ನು ಸದಾ ಕಾಪಾಡುವ ಯೋಧರಂತೆ ಕೆಲಸ ಮಾಡಬೇಕು ಎಂದು ವಿಜಯರಾಮೇಗೌಡ ಕರೆ ನೀಡಿದರು.
ಸಮಾಜದಲ್ಲಿ ಬಡವ ಮತ್ತು ಶ್ರೀಮಂತ ಎಂಬೆರಡು ವರ್ಗಗಳಿದ್ದರೆ ಸಾಕಿತ್ತು. ಆದರೆ ಜಾತಿ ಧರ್ಮದ ಹೆಸರಿನಲ್ಲಿ ಸಮಾಜವು ಒಡೆದು ಹೋಗಿದ್ದು ಬಡವ ಬಲ್ಲಿದರ ಅಂತರದ ಬಗೆಗೆ ಯಾರೂ ಕೂಡಾ ಚರ್ಚೆಯನ್ನೆ ನಡೆಸುತ್ತಿಲ್ಲ. ಬುದ್ದಿವಂತರು ಸಮಾಜಕ್ಕೆ ಬೇಡವಾದ ವಿಷಯವನ್ನು ಮುನ್ನೆಲೆಗೆ ಬಿಟ್ಟು ಅಸಲಿ ವಿಷಯವನ್ನು ಮರೆಮಾಚುತ್ತಿದ್ದಾರೆ. ಇಂತಹ ವಿಷಯಗಳ ಬಗೆಗೆ ವಿದ್ಯಾರ್ಥಿಗಳು ಹೆಚ್ಚು ಚರ್ಚೆಯನ್ನು ನಡೆಸಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದ ಆರ್ಥಿಕ ಸಮಾನತೆಯ ನೋಟಗಳನ್ನು ಎಲ್ಲರೂ ತಿಳಿಯುವಂತೆ ಮಾಡಬೇಕು. ಕೋಟಿ ಜನರು ಮಾಡದ ಕೆಲಸವನ್ನು ಒಬ್ಬ ಶುದ್ದ ಮನಸ್ಸುಳ್ಳ ವ್ಯಕ್ತಿಯು ಮಾಡಬಹುದಾಗಿದೆ. ಇದರ ಬಗೆಗೆ ಯುವ ಸಮೂಹವು ಚಿಂತಿಸಿ ಶುದ್ದ ಮನಸ್ಸನ್ನು ಹೊಂದಬೇಕು ಎಂದು ವಿಜಯರಾಮೇಗೌಡ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ವಿ.ವಿ.ಜಗದೀಶ್ ಮಾತನಾಡಿ ಕಾಲೇಜಿನ ವಿದ್ಯಾರ್ಥಿಗಳ ಕಾರ್ಯಚಟುವಟಿಕೆಗಳು ಬೂಕನಕೆರೆ ಗ್ರಾಮದಲ್ಲಿ ಸಾಕಾರಗೊಂಡಿವೆ. ಇದಕ್ಕೆ ಗ್ರಾಮದ ಎಲ್ಲಾ ಮುಖಮಡರ ಸಹಕಾರವು ಕೂಡಾ ಮುಖ್ಯವಾಗಿದೆ. ಅದರಲ್ಲಿಯೂ ಸಮಾಜ ಸೇವಕ ವಿಜಯರಾಮೇಗೌಡ ನಮ್ಮ 120ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಟ್ರ್ಯಾ ಕ್ ಸೂಟ್ ಮತ್ತು ಹ್ಯಾಟ್ಗಳಿಗಾಗಿ ಲಕ್ಷಕ್ಕೂ ಹೆಚ್ಚು ಹಣವನ್ನು ವಿನಿಯೋಗಿಸಿದ್ದಾರೆ. ಇವರಿಗ ಕಾಲೇಜು ಎಂದೆಂದಿಗೂ ಋಣಿಯಾಗಿರುತ್ತದೆ ಎಂದು ತಿಳಿಸಿದರು.
ಕಾಲೇಜಿನ ಪತ್ರಾಂಕಿತ ವ್ಯವಸ್ಥಪಕ ಬಿ.ಎ.ಮಂಜುನಾಥ್, ಸಹಾಯಕ ಪ್ರಾಧ್ಯಾಪಕ ಡಾ.ಜಯಕೀರ್ತಿ, ಪ್ರಗತಿಪರ ರೈತ ವಿಠಲಾಪುರ ಸುಬ್ಬೇಗೌಡ, ಕೆಡಿಪಿ ಸದಸ್ಯ ಮಲ್ಲಿಕಾರ್ಜುನ್, ವಿಎಸ್ಎಸ್ಎನ್ ನಿರ್ದೇಶಕ ಅಡಿಕೆ ಸ್ವಾಮಿಗೌಡ ಮಹೇಶ್, ಗ್ರಂಥಾಲಯ ಅಧಿಕಾರಿ ಮಂಜುನಾಥ್, ಎನ್ಎಸ್ಎಸ್ ಅಧಿಕಾರಿಗಳಾದ ಬೂವನಹಳ್ಳಿ ಪ್ರಕಾಸ್, ಪುಷ್ಪಲತಾ, ಕಿರಣ್, ಆನಂದ್, ಉಪನ್ಯಾಸಕರುಗಳಾದ ಟಿ.ಜೆ.ದೀಪಾ, ಉಮಾ, ಕಾಲೇಜಿನ ಆಡಳಿತ ವರ್ಗದ ಶಿವರಾಮು, ಮಂಜುನಾಥ್, ಅಭಿಲಾಷ್, ನಂದಿನಿ ಸೇರಿದಂತೆ ಹಲವರಿದ್ದರು.
– ಶ್ರೀನಿವಾಸ್ ಆರ್.