
ತುಮಕೂರು-ಸಿ.ಇ.ಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಗಾಯತ್ರಿ ದೀಕ್ಷೆ ಪಡೆದು ಧರಿಸಿದ್ದ ಜನಿವಾರವನ್ನು ತೆರವುಗೊಳಿಸಿದ್ದನ್ನು ಖಂಡಿಸಿ ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಲು ಹಾಜರಾಗಿದ್ದ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ತೆಗೆಸಿರುವ ಬಗ್ಗೆ ಕೂಲoಕುಷ ತನಿಖೆ ನಡೆಸುವಂತೆ ಬ್ರಾಹ್ಮಣ ಸಭಾದ ಪದಾಧಿಕಾರಿಗಳು ಪ್ರತಿಭಟಿಸಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿರವರ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಶಿವಮೊಗ್ಗ ಹಾಗೂ ಬೀದರ್ ನಗರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳು ಸಿ.ಇ.ಟಿ.ಪರೀಕ್ಷೆ ಬರೆಯಲು ಬಂದಾಗ ಆತನು ಗಾಯತ್ರಿ ದೀಕ್ಷೆ ಪಡೆದು ಧರಿಸಿದ್ದ ಜನಿವಾರವನ್ನು ತೆಗೆಸಿ ಹಾಕಿರುವ ಘಟನೆ ನಡೆದಿರುವುದು ಅಕ್ಷಮ್ಯ ಅಪರಾಧ. ಇದು ನಮ್ಮ ನಂಬಿಕೆ, ಧರ್ಮಕ್ಕೆ, ಜೀವನಶೈಲಿ, ಸಂಸ್ಕಾರ, ಪದ್ದತಿಗಳಿಗೆ ಮಾಡಿರುವ ಅಪಮಾನ. ಕೂಡಲೇ ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಹೆಚ್.ಎನ್. ಚಂದ್ರಶೇಖರ್, ಮಾಧವ ಮಹಾಮಂಡಳ ಅಧ್ಯಕ್ಷರಾದ ಜಿ.ಕೆ. ಶ್ರೀನಿವಾಸ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ತುಮಕೂರು ಜಿಲ್ಲಾ ಪ್ರತಿನಿಧಿ ಡಾ. ಹರೀಶ್, ಶಂಕರ ಸೇವಾ ಸಮಿತಿಯ ಉಪಾಧ್ಯಕ್ಷ ಎಚ್. ಕೆ. ರಮೇಶ್ ಸೇರಿದಂತೆ ವಿವಿಧ ಸಂಘಟನೆ ಹಾಗೂ ಸಮಾಜದ ಮುಖಂಡರುಗಳು ಪಾಲ್ಗೊಂಡಿದ್ದರು.