ತುಮಕೂರು: ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಹತ್ಯೆಗೀಡಾಗಿ ಮೃತರಾದ ವಿಷಯ ದೇಶವನ್ನು ದಿಗ್ಭ್ರಮೆಗೊಳಿಸಿದೆ. ಮೊನ್ನೆ ನಡೆದ ಉಗ್ರರ ಭಯೋತ್ಪಾದಕ ದಾಳಿಯಲ್ಲಿ ಅಮಾಯಕರಾಗಿದ್ದ ನಾಗರೀಕರು ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಂಡ ದುಃಖದ ಸುದ್ದಿ ಅತ್ಯಂತ ಹೃದಯವಿದ್ರಾವಕವಾಗಿದೆ ಎಂದು ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆಂಪರಾಜಯ್ಯ ಹೇಳಿದರು.
ಅವರು ಮಾಧ್ಯಮದೊಂದಿಗೆ ಮಾತನಾಡಿ, ಈ ಮಾನವೀಯ ದುರಂತವು ದೇಶದ ಸಂಕಷ್ಟದ ಕ್ಷಣವಾಗಿದೆ, ಪ್ರತಿ ಮನುಷ್ಯನ ಜೀವನವು ಅಮೂಲ್ಯವಾದದ್ದು, ಈ ದಾಳಿಯಲ್ಲಿ ಬಲಿಯಾದ ನಾಗರೀಕರ ನಷ್ಟವನ್ನು ಯಾವುದೇ ಪದಗಳು ಪೂರೈಸಲಾಗದು, ಇಂತಹ ಹೀನ ಕೃತ್ಯವನ್ನು ನಮ್ಮ ಸಂಘವು ಖಂಡಿಸುತ್ತಾ ಈ ದುಷ್ಕೃತ್ಯದಲ್ಲಿ ಜೀವವನ್ನು ಕಳೆದುಕೊಂಡ ಅವರ ಕುಟುಂಬಕ್ಕೆ ಭಗವಂತನು ದುಃಖ ಭರಿಸುವ ಶಕ್ತಿಯನ್ನು ನೀಡಲೇಂದು ದೇವರಲ್ಲಿ ಸಂಘದ ಪರವಾಗಿ ಪ್ರಾರ್ಥಿಸುತ್ತೇವೆ.

ಇಂತಹ ಕ್ರೂರ ಕೃತ್ಯಗಳು ಮಾನವೀಯತೆ ವಿರುದ್ಧ ನಡೆದ ದಾಳಿಯಾಗಿದ್ದು, ನಾವು ಎಲ್ಲಾರೂ ಶಾಂತಿ, ಸಹಿಷ್ಣುತೆ ಮತ್ತು ಸಾಮರಸ್ಯದ ಬಲದಿಂದ ಇವುಗಳಿಗೆ ತಿರುಗುಬಾಣ ನೀಡಬೇಕೆಂದು ಸಂಘದ ಪರವಾಗಿ ಪ್ರಾರ್ಥಿಸಿಕೊಳ್ಳುತ್ತೇವೆ ಮತ್ತು ಮೃತ ಕುಟುಂಬದ ಸದಸ್ಯರುಗಳ ಜೊತೆಗೆ ವಕೀಲರು ಸದಾ ಇರುತ್ತೇವೆ ಎಂದು ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕೆ.ಬಿ.ಚಂದ್ರಚೂಡ