ಕೆ.ಆರ್.ಪೇಟೆ,ಏ.05: . ತಾಲೂಕಿನ ನೂರಾರು ರೈತರು ಅಕ್ರಮ-ಸಕ್ರಮಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ನಮೂನೆ 50 ರ ಅಡಿ ಅರ್ಜಿಗಳನ್ನು ತಾಲೂಕು ದರಕಾಸು ಸಮಿತಿಯ ಸದಸ್ಯರು ಸ್ವೀಕರಿಸಿದರು. ಈ ಕಾರ್ಯಚಟುವಟಿಕೆಯನ್ನು ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್. ದೇವರಾಜು ನೇತೃತ್ವದಲ್ಲಿ , ಪಟ್ಟಣದ ತಾಲೂಕು ಆಡಳಿತ ಸೌಧದ ಹೊರ ಆವರಣದಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2.30ರವರೆಗೆ ನಡೆಸಲಾಯಿತು.
ಗೋಮಾಳ ಸೇರಿದಂತೆ ಸರ್ಕಾರಿ ಭೂಮಿಯನ್ನು ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಭೂ ಸ್ವಾಧೀನದಲ್ಲಿರುವ ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ 1992 ರಲ್ಲಿ ಅಕ್ರಮ ಸಕ್ರಮಕ್ಕಾಗಿ ನಮೂನೆ 50 ಅಡಿ ಅರ್ಜಿ ಆಹ್ವಾನಿಸಿತ್ತು. ಸರ್ಕಾರದ ಸೂಚನೆಯ ಮೇರೆಗೆ ತಾಲೂಕಿನ ಸಾವಿರಾರು ರೈತರು ತಾವು ಸ್ವಾಧೀನದಲ್ಲಿರುವ ಸರ್ಕಾರಿ ಭೂಮಿಯ ಸಕ್ರಮಾತಿಗಾಗಿ ರಾಜ್ಯ ಸರ್ಕಾರ ನೇಮಿಸಿದ ಅಕ್ರಮ-ಸಕ್ರಮ ಸಮಿತಿ(ದರಕಾಸು ಸಮಿತಿ) ಮುಂದೆ ಅರ್ಜಿ ಸಲ್ಲಿಸಿದ್ದರು.

ನಿಗಧಿತ ಸಮಯದಲ್ಲಿ ದರಕಾಸು ಸಮಿತಿಯ ಮುಂದೆ ಇದ್ದ ಅರ್ಜಿಗಳು ವಿಲೇ ಆಗಿರಲ್ಲಿಲ್ಲ. ರೈತರ ಅನುಕೂಲಕ್ಕೆ ಮತ್ತಷ್ಟು ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ 1998 ರಲ್ಲಿ ನಮೂನೆ 53 ಮತ್ತು 2017-18 ನೇ ಸಾಲಿನಲ್ಲಿ ನಮೂನೆ 57 ರ ಅಡಿಯಲ್ಲಿ ರೈತರಿಂದ ಅಕ್ರಮ-ಸಕ್ರಮಕ್ಕೆ ಮತ್ತೆ ಅರ್ಜಿ ಆಹ್ವಾನಿಸಿ ದರಕಾಸು ಸಮಿತಿ ರಚನೆ ಮಾಡಿತ್ತು. ಸರ್ಕಾರದ ಅಕ್ರಮ-ಸಕ್ರಮ ಸಮಿತಿಯ ಮುಂದೆ ನಮೂನೆ 50, 53 ಮತ್ತು 57 ರ ಅರ್ಜಿಗಳು ಪರಿಶೀಲನೆಗೆ ಬರಬೇಕಾಗಿತ್ತು. ಆದರೆ ಈ ಹಿಂದೆ ಕೆ.ಆರ್.ಪೇಟೆ ತಾಲೂಕಿನ ತಹಸೀಲ್ದಾರ್ ಆಗಿದ್ದ ವ್ಯಕ್ತಿಯೊಬ್ಬರು ಕೆ.ಆರ್.ಪೇಟೆ ತಾಲೂಕಿನಲ್ಲಿ ನಮೂನೆ 50 ರ ಅಡಿಯಲ್ಲಿ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದ ಎಲ್ಲಾ ರೈತರ ಅರ್ಜಿಗಳನ್ನು ವಿಲೇ ಮಾಡಿದ್ದು ನಮೂನೆ 50 ರ ಯಾವುದೇ ಅರ್ಜಿಗಳು ಬಾಕಿಯಿಲ್ಲ ಎಂದು ತಪ್ಪು ವರದಿ ಮಾಡಿದ್ದಾರೆ.

ಇದರ ಪರಿಣಾಮ ನಮೂನೆ 50 ರ ಅಡಿಯಲ್ಲಿ ಸಲ್ಲಿಕೆಯಾಗಿರುವ ರೈತರ ಯಾವುದೇ ಅರ್ಜಿಗಳನ್ನು ಅಕ್ರಮ-ಸಕ್ರಮ ಸಮಿತಿಯ ಮುಂದೆ ತರಲಾಗುತ್ತಿಲ್ಲ. ಗ್ರಾಮೀಣ ಪ್ರದೆಶದಲ್ಲಿರುವ ರಾಸುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳವನ್ನು ಮೀಸಲಿಡಬೇಕೆಂಬ ಸುಪ್ರಿಂ ಕೋರ್ಟ್ ಆದೇಶದಿಂದ ನಮೂನೆ 53 ಮತ್ತು 57 ರ ಅರ್ಜಿಗಳ ವಿಲೇ ಮಾಡುವಿಕೆಗೂ ಅಡಚಣೆಯಾಗಿದೆ.
ಈ ಹಿಂದ ತಹಸೀಲ್ದಾರರ ತಪ್ಪು ವರದಿಯಿಂದ ನಮೂನೆ 50 ರ ಅಡಿ ಅಕ್ರಮ-ಸಕ್ರಮಕ್ಕೆ ಅರ್ಜಿ ಹಾಕಿರುವ ರೈತರು ವಂಚಿತರಾಗಿರುವುದನ್ನು ಮನಗಂಡ ತಾಲೂಕು ದರಕಾಸು ಸಮಿತಿಯ ಸದಸ್ಯರಾದ ಬಿ.ಎಲ್.ದೇವರಾಜು, ಬಸ್ತಿ ರಂಗಪ್ಪ ಮತ್ತು ಕೋಮಲ ರಾಯಪ್ಪಗೌಡ ಅವರು ಈ ಹಿಂದೆ ಪತ್ರಿಕಾ ಗೋಷ್ಠಿ ನಡೆಸಿ ಮೇ,05 ರಂದು ತಾಲೂಕು ಕಛೇರಿಯ ಬಳಿ ನಮೂನೆ 50 ರ ವಂಚಿತ ರೈತರಿಂದ ಅರ್ಜಿ ಸ್ವೀಕರಿಸಿ ತಹಸೀಲ್ದಾರರ ತಪ್ಪು ವರದಿಯಿಂದ ಅನ್ಯಾಯಕ್ಕೊಳಗಾಗಿರುವ ರೈತರ ನೆರವಿಗೆ ಮುಂದಾಗುವುದಾಗಿ ತಿಳಿಸಿದ್ದರು. ಅದರಂತೆ ಇಂದು ತಾಲೂಕು ಆಡಳಿತ ಸೌಧದ ಮುಂದೆ ಅರ್ಜಿ ಸ್ವೀಕಾರ ಆರಂಭಿಸಿದರು.

ಈ ಹಿಂದಿನ ತಹಸೀಲ್ದಾರರ ತಪ್ಪು ವರದಿಯಿಂದ ನಮೂನೆ 50 ರ ಯಾವುದೇ ಅರ್ಜಿಗಳು ದರಕಾಸು ಸಮಿತಿಯ ಮುಂದೆ ಬರದಂತಾಗಿದೆ. ತಹಸೀಲ್ದಾರರ ಸುಳ್ಳು ವರದಿಯಿಂದ ತಾಲೂಕಿನ ನೂರಾರು ರೈತರಿಗೆ ಆಗಿರುವ ಅನ್ಯಾಯದ ವಿರುದ್ದ ಸರ್ಕಾರದ ಗಮನ ಸೆಳೆಯಲಾಗುವುದು. ಇಂದು ಸ್ವೀಕರಿಸಿದ ಎಲ್ಲಾ ಅರ್ಜಿಗಳನ್ನು ಜಿಲ್ಲಧಿಕಾರಿಗಳಿಗೆ ನೀಡಿ ಹಿಂದಿನ ತಹಸೀಲ್ದಾರರ ಸುಳ್ಳು ವರದಿಯಿಂದ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನಮೂನೆ 50 ಅರ್ಜಿಗಳನ್ನು ದರಕಾಸು ಸಮಿತಿಯ ಮುಂದೆ ಪರಿಶೀಲನೆಗೆ ಮತ್ತೆ ಮಂಡಿಸುವಂತೆ ಕೋರಲಾಗುವುದಲ್ಲದೆ ತಪ್ಪು ವರದಿ ನೀಡಿ ತಾಲೂಕಿನ ರೈತರ ಬದುಕಿನ ಜೊತೆ ಚೆಲ್ಲಾಟ ನಡೆಸಿರುವ ಈ ಹಿಂದಿನ ತಹಸೀಲ್ದಾರರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲು ಒತ್ತಾಯಿಸಲಾಗುವುದೆಂದು ಬಿ.ಎಲ್.ದೇವರಾಜು ಪತ್ರಿಕೆಗೆ ತಿಳಿಸಿದರು.

ದರಕಾಸು ಸಮಿತಿಯ ಸದಸ್ಯರಾದ ಬಿ.ಎಲ್.ದೇವರಾಜು, ಬಸ್ತಿ ರಂಗಪ್ಪ ಮತ್ತು ಸದಸ್ಯೆ ಕೋಮಲ ಅವರ ಪತಿ ಗುಡುಗನಹಳ್ಳಿ ರಾಯಪ್ಪ ನಮೂನೆ 50 ರ ಅರ್ಜಿ ಸ್ವೀಕಾರ ಕಾರ್ಯದಲ್ಲಿ ಇದ್ದರು.
– ಶ್ರೀನಿವಾಸ್ ಆರ್.