ಚಿಕ್ಕಮಗಳೂರು, ಮೇ.07:- ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ರೆಡ್ಕ್ರಾಸ್, ಯುದ್ಧ ಮತ್ತು ಪ್ರವಾಹ ಇನ್ನಿತರ ಪ್ರಾಕೃತಿಕ ವಿಕೋಪಗಳಿಗೀಡಾದ ಜನಸಾಮಾನ್ಯರಿಗೆ ನೆರವು ನೀಡುತ್ತಿದೆ ಎಂದು ಭಾರತೀಯ ರೆಡ್ಕ್ರಾಸ್ ಜಿಲ್ಲಾಧ್ಯಕ್ಷ ಪ್ರದೀಪ್ಗೌಡ ಹೇಳಿದರು.
ನಗರದ ಜಿಲ್ಲಾ ರೆಡ್ಕ್ರಾಸ್ ಕಚೇರಿಯಲ್ಲಿ ಗುರುವಾರ ನಡೆದ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ ಯ ಸಂಸ್ಥಾಪಕ ‘ಜೀನ್ ಹೆನ್ರಿ ಡ್ಯುನಾಂಟ್’ ಅವರ ಜನ್ಮದಿನ ಕಾರ್ಯಕ್ರಮವನ್ನು ಪಾಲ್ಗೊಂಡು ಅವರು ಮಾತನಾಡಿದರು.
ಈಗಾಗಲೇ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಸಂಸ್ಥೆ ಮೂಲಭೂತ ಸೌಕರ್ಯ ವಂಚಿತ, ಅಶಕ್ತ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಶ್ರವಣ ದೋಷ ಹೊಂದಿರುವವರಿಗೆ ಶ್ರವಣ ಸಾಧನಗಳು, ಗಾಲಿಕುರ್ಚಿಗಳು ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹಿರಿಯರ ಸದಸ್ಯರ ಹಾಗೂ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. ಈ ಉಪಕ್ರಮವು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಉದಾರ ಬೆಂಬಲವಾಗಿದ್ದು ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದು ಮಾನವೀಯತೆಡೆಗೆ ಒಟ್ಟಾಗಿ ಸಾಗುವುದರೊಂದಿಗೆ ಹೆಚ್ಚು ಅಗತ್ಯ ವಿರುವವರ ಜೀವನದಲ್ಲಿ ನಾವು ಬದಲಾವಣೆಯನ್ನು ತರಬಹುದಾಗಿದೆ ಎಂದರು.

ರೆಡ್ ಕ್ರಾಸ್ ಸಂಸ್ಥೆ ಮಾನವೀಯತೆಗೆ ಸೇವೆ ಸಲ್ಲಿಸಲು ಮತ್ತು ಮೌಲ್ಯಗಳನ್ನು ಎತ್ತಿಹಿಡಿಯಲು ಬದ್ಧ ವಾಗಿದೆ. ಕೋವಿಡ್ ಹಾಗೂ ಅನೇಕ ಸಂಕಷ್ಟಗಳ ಸಮಯದಲ್ಲಿ ರೆಡ್ಕ್ರಾಸ್ ಧೈರ್ಯವಾಗಿ ಮುನ್ನುಗ್ಗಿ ಸಾರ್ವಜನಿಕರು ಕೊರತೆಯಾಗದಂತೆ ಮೂಲಸೌಕರ್ಯಕ್ಕೆ ನಿರಂತರವಾಗಿ ಪೂರೈಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆ ಕಾರ್ಯಕಾರಿ ಸಮಿತಿ ಸದಸ್ಯ ಆರ್. ಶ್ರೀನಿವಾಸ, ಕಾರ್ಯದರ್ಶಿ. ರಸೂಲ್ ಖಾನ್, ನಿರ್ದೇಶಕರುಗಳಾದ ವಿಲಿಯಂ ಪೆರೆರಾ, ಚಂದನ್ ಕುಮಾರ್, ಡಾ. ಸುಂದರೇಗೌಡ, ಸದಸ್ಯರುಗಳಾದ ಪ್ರಸನ್ನಗೌಡ, ಮಂಜುನಾಥ್ ಅರಸ್ ಮತ್ತು ಆರ್. ಶಿವ ಪ್ರಕಾಶ್ಗೌಡ ಉಪಸ್ಥಿತರಿದ್ದರು.
- ಸುರೇಶ್ ಎನ್.