ತುಮಕೂರು: ಕರ್ನಾಟಕ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಮುರುಳೀಧರ ಹಾಲಪ್ಪ ಅವರಿಗೆ ವಿವಿಧ ಮಠಗಳ ಹತ್ತಾರು ಸ್ವಾಮೀಜಿಗಳು ಭೇಟಿ ನೀಡಿ ಪಾದಪೂಜೆಯಲ್ಲಿ ಪಾಲ್ಗೊಂಡು,ಗುರುವಂದನೆ ಸ್ವೀಕರಿಸಿ, ದಂಪತಿಗಳಿಬ್ಬರನ್ನು ಹರಸಿ, ಆಶೀರ್ವದಿಸಿದರು.
ಮಠಾಧೀಶರುಗಳಾದ ಕನಕ ಗುರುಪೀಠದ ಶ್ರೀನಿರಂಜನಾನಂದಪುರಿ ಸ್ವಾಮೀಜಿ,ಬೋವಿ ಮಠದ ಶ್ರೀಸಿದ್ದರಾಮ ಚೈತನ್ಯ ಸ್ವಾಮೀಜಿ,ರಾಜನಹಳ್ಳಿ ಮಠದ ಡಾ.ಶ್ರೀವಾಲ್ಮೀಕಿ ಪ್ರಸ್ನನಾನಂದ ಮಹಾಸ್ವಾಮೀಜಿ,ಹೊಸದುರ್ಗ ಕುಂಚಟಿಗ ಮಹಾಸಂಸ್ಥಾನ ಮಠದ ಶ್ರೀಶಾಂತವೀರ ಮಹಾಸ್ವಾಮಿಜೀ,ಲಿಂಗಾಯಿತ ಪಂಚಮಶಾಲಿ ಮಠದ ಶ್ರೀವಚನಾನಂದಸ್ವಾಮೀಜಿ, ಮಧುರೆ ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ, ಚಿತ್ರದುರ್ಗ ಮಡಿವಾಳ ಮಠದ ಶ್ರೀಬಸವ ಮಡಿವಾಳ ಮಾಚಿದೇವಸ್ವಾಮೀಜಿ,ಚಿತ್ರದುರ್ಗದ ಕೇತೇಶ್ವರ ಸ್ವಾಮೀಜಿ,ಚಿತ್ರದುರ್ಗದ ಶ್ರೀಕುಂಬಾರ ಗುಂಡಯ್ಯ ಸ್ವಾಮೀಜಿ, ಶ್ರೀಉದಯಾನಂದಸ್ವಾಮೀಜಿ,ಶ್ರೀರೇಣುಕಾನಂದಸ್ವಾಮೀಜಿ, ಬಸವ ಬೃಂಗೇಶ್ವರ ಸ್ವಾಮೀಜಿಗಳು ಭೇಟಿ ನೀಡಿ ಪಾದಪೂಜೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಸ್ವಾಮೀಜಿಗಳ ಬಳಿ ರಾಜ್ಯದಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿದ್ದು,ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸಲು ಮಠಾಧೀಶರು ಸರಕಾರ ಹಾಗೂ ಸಾರ್ವಜನಿಕರೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿರುವುದಾಗಿ ಮುರುಳೀಧರ ಹಾಲಪ್ಪ ತಿಳಿಸಿದರು.
ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾದಂತೆ ಕರ್ನಾಟಕವಲ್ಲದೆ ಹೊರ ರಾಜ್ಯ ಮತ್ತು ಹೊರದೇಶಗಳ ವಿದ್ಯಾರ್ಥಿಗಳು ಇಂಜನಿಯರಿಂಗ್, ಮೆಡಿಕಲ್, ಇನ್ನಿತರ ಉದ್ಯೋಗಾಧಾರಿತ ಕೋರ್ಸುಗಳನ್ನು ಕಲಿಯಲು ಆಗಮಿಸುತಿದ್ದು, ಶ್ರೀಮಂತ ಕ್ಯಾಂಪಸ್ಗಳನ್ನು ಗುರಿಯಾಗಿಸಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ಹೆಚ್ಚಾಗಿದೆ.

ತುಮಕೂರು ಜಿಲ್ಲೆಯಲ್ಲಿಯೂ ಸಹ ಮಾದಕ ವಸ್ತುಗಳು ಶಾಲೆ, ಕಾಲೇಜು ಅಕ್ಕಪಕ್ಕದ ಸಣ್ಣಪುಟ್ಟ ಅಂಗಡಿಗಳಲ್ಲಿ, ಮೆಡಿಕಲ್ ಶಾಫ್ಗಳಲ್ಲಿ ಚಾಕಲೇಟ್ ರೂಪದಲ್ಲಿ ದೊರೆಯುತ್ತಿರುವುದು ಬಳಸುವವರಿಗೆ ಅನಾಯಾಸವಾಗಿ ದೊರೆಯುವಂತಾಗಿದೆ.ಹೈಸ್ಕೂಲ್ ಮಕ್ಕಳು ಸಹ ಇಂತಹ ಡ್ರಗ್ಸ್ ಚಟಕ್ಕೆ ಬಲಿಯಾಗುತ್ತಿದ್ದಾರೆ. ಹಾಗಾಗಿ ವಿವಿಧ ಜನಾಂಗಗಳನ್ನು ಸ್ವಾಮೀಜಿಗಳು ಪ್ರತಿನಿಧಿಸುತಿದ್ದು, ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದ ಸಂದರ್ಭಗಳಲ್ಲಿ ಜನಾಂಗದ ಯುವಕರು ಡ್ರಗ್ಸ್ ಚಟಗಳಿಗೆ ಬಲಿಯಾಗದಂತೆ ತಿಳಿ ಹೇಳುವ ಮೂಲಕ, ಸರಕಾರ ಕೈಗೊಳ್ಳುವ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿ ಕರ್ನಾಟಕವನ್ನು ಡ್ರಗ್ಸ್ ಮುಕ್ತ ಮಾಡಲು ಸಹಕರಿಸುವಂತೆ ಮನವಿ ಮಾಡಿದ್ದು,ಮಠಾಧೀಶರು ಸಹ ಮುಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ ನಡೆಯುವ ಯುವಜನರ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಡ್ರಗ್ಸ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುವ ಭರವಸೆ ನೀಡಿದ್ದಾರೆ ಎಂದು ಮುರುಳೀಧರ ಹಾಲಪ್ಪ ನುಡಿದರು.

ಈ ವೇಳೆ ಮಾಜಿ ಶಾಸಕರಾದ ಗಂಗಹನುಮಯ್ಯ,ಡಾ.ಎಂ.ಆರ್.ಹುಲಿನಾಯ್ಕರ್,ಮುಖಂಡರಾದ ಗೋವಿಂದೇಗೌಡ, ಮರಿಚನ್ನಮ್ಮ, ಸಿದ್ದಲಿಂಗೇಗೌಡ, ಕೊಪ್ಪಲ್ ನಾಗರಾಜು, ಸಿಮೆಂಟ್ ಮಂಜುನಾಥ್,ವಸುಂಧರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ