ಕೊರಟಗೆರೆ-ಅತ್ಯಂತ ವಿಜೃಂಭಣೆಯಿಂದ ಜರುಗಿದ ಶ್ರೀ ಕಾವಲಮ್ಮ ದೇವರ ಜಲಧಿ ಮತ್ತು ಜಾತ್ರಾ ಮಹೋತ್ಸವ-ಶಕ್ತಿ ದೇವತೆಯ ಜಲಧಿ ಕಾರ್ಯಕ್ರಮಕ್ಕೆ ಸವಿರಾರು ಸಂಖ್ಯೆಯಲ್ಲಿ ಹರಿದು ಬಂದ ಜನಸಾಗರ 

ಕೊರಟಗೆರೆ : ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇಗಲಾಲ ಗ್ರಾಮದಲ್ಲಿ ನೆಲೆಸಿರುವ ಶಕ್ತಿ ದೇವತೆಯ ಇತಿಹಾಸ ಪ್ರಸಿದ್ಧ ಶ್ರೀ ಕಾವಲಮ್ಮ ದೇವರ ಜಲಧಿ ಮತ್ತು ಜಾತ್ರಾ ಮಹೋತ್ಸವವು ಒಂಬತ್ತು ವರ್ಷಗಳ ಬಳಿಕ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಮರೇನಾಯಕನಹಳ್ಳಿ,ನೇಗಲಾಲ, ಸಿದ್ದರಬೆಟ್ಟ,ಮಾರಿಪಾಳ್ಯ, ಅನುಪಲು,ಗಟ್ಟಿತಿಮ್ಮನಹಳ್ಳಿ  ಗ್ರಾಮಗಳ ಗ್ರಾಮಸ್ಥರು ಮತ್ತು ಅಮ್ಮನವರ ಭಕ್ತರ ಸಹಕಾರ ದೊಂದಿಗೆ ಅತ್ಯಂತ ವೈಭವದಿಂದ ಜಲಧಿ ಕಾರ್ಯಕ್ರಮ ಮತ್ತು ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. 

13 ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವಕ್ಕೆ ಪ್ರತಿ ದಿನವೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸುತ್ತಿದ್ದಾರೆ. ಆರು ಗ್ರಾಮಗಳ ಗ್ರಾಮಸ್ಥರು ಗಳಿಂದ ಮತ್ತು ಭಕ್ತಾದಿಗಳಿಂದ ಶ್ರೀ ಕಾವಲಮ್ಮ ದೇವರ ಉತ್ಸವ ಮೂರ್ತಿಯು ಆರತಿಗಳ ಸಮೇತವಾಗಿ ಶ್ರೀ ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ, ಎಡೆ ಪೂಜೆ ನೆರವೇರಿದ ನಂತರ ಅಮ್ಮನವರಿಗೆ ಕಂಕಣ ಕಟ್ಟಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ನೇಗಲಾಲ ಗ್ರಾಮದಲ್ಲಿರುವ ದೇವಸ್ಥಾನದಿಂದ ಅಮ್ಮನವರು ತೋಪಿನಲ್ಲಿರುವ ಮೂಲ ದೇವಸ್ಥಾನಕ್ಕೆ ಬಂದು ವಿವಿಧ ಪೂಜಾ ಕೈಂಕರ್ಯ ಗಳನ್ನು ಮುಗಿಸಿಕೊಂಡು ನಂತರ ಜಲಧಿ ಕಾರ್ಯಕ್ರಮ ನಡೆಸಲಾಯಿತು.

*ಸಂಪ್ರದಾಯದಂತೆ ಸಿದ್ದರಬೆಟ್ಟ ಸುತ್ತುವ ಶಕ್ತಿ ದೇವತೆ.

ಜಾತ್ರಾ ಮಹೋತ್ಸವದ ದಿನಗಳಲ್ಲಿ ವಿಶೇಷವಾಗಿ ಅಮ್ಮನವರ ಉತ್ಸವ ಮೂರ್ತಿಯು ಸಂಪ್ರದಾಯದಂತೆ  ಶ್ರೀ ಸಿದ್ದೇಶ್ವರ ಸ್ವಾಮಿಯ ತಪೋವನದ ಬೆಟ್ಟವನ್ನು ಸುತ್ತುವುದು ವಿಶೇಷವಾಗಿರುತ್ತದೆ, ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿಯ ಆರತಿ ಕಾರ್ಯಕ್ರಮದಲ್ಲಿ ಅಮ್ಮನವರು ಭಾಗವಹಿಸುವುದು, ಎಡೆಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆಯಾಗಿದೆ.

*ಜಲಧಿ ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ..* 

ರಾಜ್ಯದ ಮೂಲೆ ಮೂಲೆಗಳಿಂದ ಮತ್ತು ಜಿಲ್ಲೆಯ ಹಲವು ಭಾಗಗಳಿಂದ ಅಮ್ಮನವರ ಭಕ್ತರು ಕಳೆದ 9 ವರ್ಷಗಳ ಬಳಿಕ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಜಲಧಿ ಕಾರ್ಯಕ್ರಮಕ್ಕೆ ನಾಮುಂದು ತಾಮುಂದು ಎಂಬುವಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಇಷ್ಟಾರ್ಥಗಳನ್ನು ಪೂರೈಸುವಂತೆ ಶಕ್ತಿ ದೇವತೆಗೆ ಮನವಿ ಮಾಡಿದರು. ಅನಾರೋಗ್ಯ ಪೀಡಿತ ಭಕ್ತರು ಮತ್ತು ಮಕ್ಕಳಾಗದ ಹೆಣ್ಣು ಮಕ್ಕಳು ತಮಗೆ ಸಂತಾನ ಭಾಗ್ಯ ನೀಡಮ್ಮ ಕರುಣಾಮಯಿ ಎಂದು ಪರಿಪರಿಯಾಗಿ ಅಮ್ಮನವರನ್ನು ಬೇಡಿಕೊಂಡರು. ಸುಮಾರು 9 ವರ್ಷಗಳ ಬಳಿಕ ನಡೆದ ಜಾತ್ರಾ ಮಹೋತ್ಸವದಲ್ಲಿ ಸುಮಾರು ಹತ್ತು ಸಾವಿರ ಭಕ್ತರು ಭಾಗಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ ಎನ್ನುತ್ತಾರೆ ಸ್ಥಳೀಯರು.

*ಗವಿ ದೇವತೆಗೆ ವಿಶೇಷ ಪೂಜೆ ಸಲ್ಲಿಸುವ ಸೇವಕರ್ತರು.* 

ಪುರಾತನ ಕಾಲದಿಂದಲೂ ಪದ್ಧತಿಯಂತೆ ಕಾಟಗಾನಹಟ್ಟಿ, ಸುದ್ದೇಕುಂಟೆ,ಮುದಿಗೌಡನಹಳ್ಳಿ, ದಿನ್ನೇಹಟ್ಟಿ ಗ್ರಾಮಸ್ಥರಿಂದ ದಿನಾಂಕ:14/05/2025 ರ ಬುಧವಾರ ರಥೋತ್ಸವ ನಡೆದ ನಂತರ ಉಯ್ಯಾಲೆಗೆ ಮೀಸಲು ಹಾಲು ಹಾಕುವ ಕಾರ್ಯಕ್ರಮ ನಡೆಯಲಿದೆ. ಬಂದಂತಹ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.

ದಿನಾಂಕ ;15/05/2025ರ ಗುರುವಾರ ರಾತ್ರಿ 8 ಗಂಟೆಗೆ ಅಮ್ಮನವರ ಪಟ್ಟ ಹಾಗೂ ಅಮ್ಮನವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. 17ರಂದು ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಓಕುಳಿ ಶಾಸ್ತ್ರ ನೆರೆವೇರಿಸಲಾಗುವುದು.

ದಿನಾಂಕ : 19/05/2025ರ ಸೋಮವಾರ ಶಕ್ತಿ ದೇವತೆಗೆ ವಿಜೃಂಭಣೆಯಿಂದ ಮರುಪೂಜೆ  ಕಾರ್ಯ ನಂತರ ನೇಗಲಾಲ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಮೂಲ ದೇವಸ್ಥಾನದಿಂದ ಅಮ್ಮನವರು ಮಂಗಳವಾರ ಬಂದು ತಲುಪುತ್ತಾರೆ.

ಈ ಎಲ್ಲಾ ಕಾರ್ಯಕ್ರಮಗಳನ್ನು ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಕಾತುರದಿಂದ ಕಾಯುತ್ತಾರೆ.

  • ಶ್ರೀನಿವಾಸ್‌ ಟಿ. ಕೊರಟಗೆರೆ

Leave a Reply

Your email address will not be published. Required fields are marked *