ಕೆ.ಆರ್.ಪೇಟೆ,ಮೇ.26: ಗ್ರಾಮ ಪಂಚಾಯಿತಿಗಳು ಚುನಾಯಿತ ಜನಪ್ರತಿನಿಧಿಗಳನ್ನು ಒಳಗೊಂಡ ಸ್ಥಳೀಯ ಸರ್ಕಾರಗಳಾಗಿವೆ. ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾಮ ಪಂಚಾಯಿತಿಗಳು ನಡೆಸುವ ಕೆಡಿಪಿ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳ ಅಧಿಕಾರಿಗಳು ಹಾಜರಾಗಿ ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಮಂಡಿಸಬೇಕು. ಆದರೆ ಕೆಲವು ಇಲಾಖೆಗಳು ಕೆಡಿಪಿ ಸಭೆಗೆ ಹಾಜರಾಗದೇ ಇರುವುದು ಸರಿಯಲ್ಲ. ಇದು ಮುಂದಿನ ದಿನಗಳಲ್ಲಿ ಮರುಕಳಿಸಿದರೆ ನಾನು ಸಹಿಸುವುದಿಲ್ಲ ಎಂದು ಶಾಸಕರಾದ ಹೆಚ್.ಟಿ.ಮಂಜು ಹೇಳಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಚಿಲ್ಲದಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಘನತ್ಯಾಜ್ಯ ಘಟಕ ಉದ್ಘಾಟಿಸಿ, ನಂತರ ಶ್ರೀ ಮರಡಿಲಿಂಗೇಶ್ವರ ಕ್ಷೇತ್ರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕೆ.ಡಿ.ಪಿ ಸಭೆಯನ್ನು ಉದ್ಘಾಟಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದರು.
ಶಾಸಕರು ಶಾಸನ ಸಭೆಯ ಚುನಾಯಿತ ಪ್ರತಿನಿಧಿಗಳಾಗಿರುತ್ತಾರೆ. ಅದೇ ರೀತಿ ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳೀಯ ಸರ್ಕಾರದ ಚುನಾಯಿತಿ ಜನಪ್ರತಿನಿಧಿಗಳಾಗಿರುತ್ತಾರೆ.

ಶಾಸನ ಸಭೆಗೆ ಎಷ್ಟು ಗೌರವ ಇದೆಯೋ, ಗ್ರಾಮ ಪಂಚಾಯಿತಿಗಳು ನಡೆಸುವ ಕೆಡಿಪಿ ಸಭೆಗೂ ಅಷ್ಟೇ ಗೌರವ ಇರುತ್ತದೆ. ಹಾಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಗಳು, ಸಹಕಾರ ಸಂಸ್ಥೆಗಳು, ಸರ್ಕಾರಿ ಅನುಧಾನ ಪಡೆಯುವ ಎಲ್ಲಾ ಸಂಸ್ಥೆಗಳು ಸಹ ಕೆಡಿಪಿ ಸಭೆಗೆ ಬಂದು ತಮ್ಮ ಸಂಸ್ಥೆಯ ಪ್ರಗತಿಯ ಬಗ್ಗೆ ವರದಿಯನ್ನು ಮಂಡಿಸಬೇಕು. ಆದರೆ ಹಾಲು ಉತ್ಪಾದಕರ ಸಹಕಾರ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು ಸಭೆಗೆ ಬಾರದೇ ಇರುವುದು ಸರಿಯಲ್ಲ.

ಸರ್ಕಾರದಿಂದ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹ ಧನ ಬರುತ್ತದೆ ಇದನ್ನು ಸರಿಯಾಗಿ ತಲುಪುತ್ತಿದೆಯೋ ಇಲ್ಲವೋ ಎಂಬುದನ್ನು ಕೇಳುವ ಹಕ್ಕು ಗ್ರಾಮ ಪಂಚಾಯಿತಿ ಕೆಡಿಪಿ ಸಭೆಗೆ ಇದೆ ಹಾಗೂ ತಾಲೂಕು ಮಟ್ಟದಲ್ಲಿ ನಡೆಯುವ ಶಾಸಕರ ನೇತೃತ್ವದ ಸಭೆಗೂ ಇರುತ್ತದೆ ಆದರೂ ಸಭೆಯ ಆಹ್ವಾನದ ನೋಟೀಸ್ ನೀಡಿದ್ದರೂ ಬಾರದೇ ಇರುವ ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡುವಂತೆ ಪಿಡಿಓ ಅವರಿಗೆ ಸೂಚನೆ ನೀಡಿದರು. ಮುಂದಿನ ಮೂರು ತಿಂಗಳ ನಂತರ ನಡೆಯುವ ಕೆಡಿಪಿ ಸಭೆಗೆ ಕಡ್ಡಾಯವಾಗಿ ಡೇರಿಗಳ ಕಾರ್ಯದರ್ಶಿಗಳು, ಸೊಸೈಟಿಗಳ ಸಿಇಓಗಳು ಭಾಗವಹಿಸಿ ತಮ್ಮ ಸಂಸ್ಥೆಯ ಪ್ರಗತಿಯ ವರದಿಯನ್ನು ಸಭೆಯಲ್ಲಿ ಮಂಡಿಸುವAತೆ ಶಾಸಕರು ಸಲಹೆ ನೀಡಿದರು.

ಸಭೆಯಲ್ಲಿ ಅರಣ್ಯ ಇಲಾಖೆಯ ತಾಲ್ಲೂಕು ಅಧಿಕಾರಿ ಅನಿತಾ, ಕೃಷಿ ಇಲಾಖೆಯ ಅಧಿಕಾರಿ ಶ್ರೀಧರ್, ಚೆಸ್ಕಾಂ ಇಂಜಿನಿಯರ್ ಸುನಿಲ್ಕುಮಾರ್, ಗ್ರಾಮ ಆಡಳಿತ ಅಧಿಕಾರಿ ಸುನಿಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಮಂಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮಾ, ತಾಲ್ಲೂಕು ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಜಿಲ್ಲಾ ದಿಶಾ ಸಮಿತಿ ಸದಸ್ಯ ನರಸನಾಯಕ್ ಮತ್ತಿತರರು ಕಾರ್ಯಕ್ರಮ ಕುರಿತು ಮಾತನಾಡಿದರು. ಗ್ರಾಮ ಪಂಚಾಯಿತಿ ಪಿಡಿಓ ಶಿಲ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಿಲ್ಲದಹಳ್ಳಿ ಗ್ರಾ.ಪಂ.ಸದಸ್ಯ ಆರ್.ಶ್ರೀನಿವಾಸ್ ಚಿಲ್ಲದಹಳ್ಳಿ ಗ್ರಾಮದ ಸಮಸ್ಯೆಗಳು ಸಭೆಯಲ್ಲಿ ಓದಿ ಶಾಸಕರಿಗೆ ಗ್ರಾಮಸ್ಥರೊಡಗೂಡಿ ಮನವಿ ಸಲ್ಲಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುನಿತಾದ್ಯಾವಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಆರ್.ರಮೇಶ್, ಚನ್ನೇಗೌಡ, ನಂಜೇಗೌಡ, ಶ್ರೀನಿವಾಸ್.ಆರ್, ಫಯಾಜ್ ಉಲ್ಲಾಖಾನ್, ಎ.ಎಸ್.ದಿನೇಶ್, ಚಿಕ್ಕೋಸಹಳ್ಳಿ ಕುಮಾರಗೌಡ, ರಮಾನಂದ್, ಗುಡ್ಡೇನಹಳ್ಳಿ ಕುಮಾರ್, ರೇಣುಕಾ, ನೇತ್ರಾವತಿ, ಸಾವಿತ್ರಮ್ಮ, ಎಂ.ಟಿ.ಶಶಿರೇಖಾ, ಜಯಂತಿ, ಆಶಾ, ಪ್ರೇಮ, ರೇವತಿ, ಭಾಗ್ಯ, ವೈ.ಎಂ.ನೇತ್ರಾವತಿ, ಗ್ರಾ.ಪಂ.ಕಾರ್ಯದರ್ಶಿ ಕೆ.ಚಂದ್ರಕುಮಾರ್, ಲೆಕ್ಕ ಸಹಾಯಕಿ ಟಿ.ಗೀತಾ, ಬಿಲ್ ಕಲೆಕ್ಟರ್ ನರಸಿಂಹಯ್ಯ, ಡಿಇಓ ಎ.ತ್ರಿವೇಣಿ, ಮುಖಂಡರಾದ ಹರೀನಹಳ್ಳಿ ರಘು, ಚಿಕ್ಕೋಸಹಳ್ಳಿ ನಾಗೇಶ್, ಚಿಲ್ಲದಹಳ್ಳಿ ರಮೇಶ್, ಮಹೇಂದ್ರ ಹಾಗೂ ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಗ್ರಾಮಗಳ ನೀರುಗಂಟಿಗಳು ಹಾಗೂ ವಿವಿಧ ಗ್ರಾಮಗಳ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.