ಬೇಲೂರು: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಇಂದು ಬೇಲೂರು ತಾಲ್ಲೂಕಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಚಲವಾದಿ ಬಂಧುಗಳ ಮಹಾ ವೇದಿಕೆ, ತಾಲ್ಲೂಕಿನ ಎಲ್ಲಾ ದಲಿತ ಪರ ಸಂಘಟನೆಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ಮಹಾ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, “ಅಸಮಾನತೆ ಹಾಗೂ ಅಸ್ಪೃಶ್ಯತೆ ತುಂಬಿದ ಕಾಲದಲ್ಲಿ, ಎಲ್ಲ ವರ್ಗದ ಜನತೆಗೆ ಸಮಾನ ಹಕ್ಕು ನೀಡಲು ತಮ್ಮ ಜೀವನವನ್ನೇ ಅರ್ಪಿಸಿದ ಮಹಾನ್ ಚಿಂತಕ ಡಾ. ಅಂಬೇಡ್ಕರ್, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಾತ್ಮಕ ಸಂವಿಧಾನ ರಚಿಸಿದರು. ಅವರು ನೀಡಿದ ಮಾರ್ಗದರ್ಶನವನ್ನು ಅನುಸರಿಸಿ, ನಾವು ಎಲ್ಲರೂ ಸಮಾನತೆಗೆ ಸಾಥ್ ನೀಡುವ ಜೀವನವನ್ನು ಕಟ್ಟಿಕೊಳ್ಳೋಣ,” ಎಂದು ಕರೆ ನೀಡಿದರು.

ಅವರು ಮುಂದುವರೆದು, “ಸಿದ್ಧರಾಮಯ್ಯನವರ ನೇತೃತ್ವದ ಕರ್ನಾಟಕ ಸರ್ಕಾರ ಸಂವಿಧಾನದ ಆಶಯದಂತೆ ಕೆಲಸ ಮಾಡುತ್ತಿದೆ. ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ಸಂವಿಧಾನ ಪೀಠಿಕೆ ಓದುವುದನ್ನು ಹಾಗೂ ಅಂಬೇಡ್ಕರ್ ಭಾವಚಿತ್ರ ಪ್ರದರ್ಶನ ಮಾಡುವ ನಿಯಮ ಜಾರಿಗೆ ತರಲಾಗಿದೆ,” ಎಂದು ಹೇಳಿದರು.
ಅಲ್ಲದೆ, ಚಾಮರಾಜನಗರದಿಂದ ಬೀದರ ತನಕ ಸುಮಾರು 25 ಲಕ್ಷ ಜನರನ್ನು ಒಳಗೊಂಡ ಮಾನವ ಸರಪಳಿಯ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸಂವಿಧಾನಾಭಿಮಾನಿಗಳ ಶಕ್ತಿ ತೋರಿಸಲಾಗಿದೆ ಎಂದು ಹೇಳಿದರು. ಬೇಲೂರು ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಈ ಸಭೆಯಲ್ಲಿ ಶ್ರೀ ಶ್ರೀ ಶ್ರೀ ಬಸವನಾಗಿದೇವ ಶರಣರು (ಜಗದ್ಗುರು ಚಲವಾದಿ ಗುರುಪೀಠ, ಚಿತ್ರದುರ್ಗ), ಶ್ರೀ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ (ಉರಿ ಪೆದ್ದಿಲಿಂಗ ಮಠ, ಮೈಸೂರು), ಮಕ್ಕಳ ಧಾರಾವಾಹಿ ನಟ ಮಾಸ್ಟರ್ ಆಯುಧ ಬಾನು ಶಾಲಿ, ಕ್ಷೇತ್ರದ ಶಾಸಕರಾದ ಎಚ್.ಕೆ. ಸುರೇಶ್, ಮಾಜಿ ಸಚಿವ ಗಂಡಸಿ ಶಿವರಾಂ, ಉದ್ಯಮಿ ಗ್ರಾನೈಟ್ ರಾಜಶೇಖರ್, ಸಮಾಜ ಸೇವಕ ಬಳ್ಳೂರು ಉಮೇಶ್, ಮಾಜಿ ಶಾಸಕ ಕುಮಾರಸ್ವಾಮಿ, ಚಲವಾದಿ ಮಹಾಸಭಾ ಅಧ್ಯಕ್ಷ ದಾನಿ, ಮಾಜಿ ಪುರಸಭಾ ಸದಸ್ಯ ಮಂಜುನಾಥ್, ಪರ್ವತಯ್ಯ, ನಿಂಗರಾಜ್, ಈಶ್ವರ ಪ್ರಸಾದ್, ಕಾಂಗ್ರೆಸ್ ಮುಖಂಡ ಸಂತೋಷ್, ಅರೇಹಳ್ಳಿ ನಿಂಗರಾಜ್ ಸೇರಿದಂತೆ ಸಾವಿರಾರು ಭೀಮಸೇನಾನಿಗಳು ಭಾಗವಹಿಸಿದ್ದರು.
– ನೂರು ಅಹಮ್ಮದ್