ಅರಕಲಗೂಡು – ತಾಲೂಕು ರಾಮನಾಥಪುರ ಹೋಬಳಿಯಲ್ಲಿ ಸರ್ಕಾರದ ಆದೇಶದಂತೆ ಪೌತಿ ಖಾತಾ ಆಂದೋಲನ ಕಾರ್ಯಕ್ರಮವನ್ನು ತಾಲೂಕು ಆಡಳಿತ ವತಿಯಿಂದ ರಾಮನಾಥಪುರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಎ. ಮಂಜು ಅವರು ಮಾತನಾಡಿ, “ಸರ್ಕಾರದಿಂದ ಪ್ರಾರಂಭಿಸಿರುವ ಪೌತಿ ಖಾತಾ ಆಂದೋಲನದ ಅಡಿಯಲ್ಲಿ, ಈವರೆಗೆ ಖಾತೆ ಮಾಡಿಸದೇ ಇರುವ ರೈತರು ವಂಶವೃಕ್ಷ, ಮರಣಧೃಢೀಕರಣ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಹೆಸರಿನಲ್ಲಿ ಖಾತೆ ಮಾಡಿಸಿಕೊಳ್ಳಬೇಕು,” ಎಂದು ತಿಳಿಸಿದರು. ಅವರು ತಮ್ಮ ಗ್ರಾಮದಲ್ಲಿ ಎಲ್ಲರಿಗೂ ಈ ಮಾಹಿತಿಯನ್ನು ನೀಡಬೇಕೆಂದು ರೈತರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರರಾದ ಕೆ. ಸಿ. ಸೌಮ್ಯ ಅವರು, “ತಾಲೂಕು ಕಚೇರಿಯಲ್ಲಿ ಯಾವುದೇ ವಿಳಂಬವಾಗದಂತೆ ಕೆಲಸ ಮಾಡಲಾಗುವುದು. ಯಾವುದೇ ವಿಳಂಬ ಕಂಡುಬಂದರೆ ರೈತರು ಹಾಗೂ ಸಾರ್ವಜನಿಕರು ನೇರವಾಗಿ ಅಥವಾ ದೂರವಾಣಿ ಮೂಲಕ ದೂರು ನೀಡಬಹುದು. ಸಂಬಂಧಪಟ್ಟ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಎ. ಮಂಜು ಅವರು 94ಸಿ ಅಡಿಯಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದರು. ಜೊತೆಗೆ ವಿವಿಧ ಪಿಂಚಣಿ ಯೋಜನೆಗಳ ಆದೇಶ ಪ್ರತಿಗಳನ್ನು ಹಂಚಲಾಯಿತು.

ಕಾರ್ಯಕ್ರಮದಲ್ಲಿ ಗ್ರೇಡ್–2 ತಹಸೀಲ್ದಾರ್ ಸಿ. ಸ್ವಾಮಿ, ಶಿರಸ್ತೆದಾರ ಡಿ. ಸೋಮಶೇಖರ್, ಉಪ ತಹಸೀಲ್ದಾರ್ ರವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವನ್ ಕುಮಾರಿ, ಸದಸ್ಯರು ಸುನಿಲ್, ಪುಷ್ಪ, ರಾಜಸ್ವ ನಿರೀಕ್ಷಕರು ಭಾಸ್ಕರ್, ಬಲರಾಮ್, ವಸಂತ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ, ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಹಲವಾರು ರೈತರು ಭಾಗವಹಿಸಿದ್ದರು.
– ಕೆಲ್ಲೂರು ಶಶಿಕುಮಾರ್