ಮದ್ದೂರು: ಟ್ರಾಫಿಕ್ ತಪಾಸಣೆಯಲ್ಲಿ ಮೃತಪಟ್ಟ ಮಗು – ಸಚಿವ ಚಲುವರಾಯಸ್ವಾಮಿ ಕುಟುಂಬಕ್ಕೆ ಸಾಂತ್ವನ, ತಪ್ಪಿತಸ್ಥರಿಗೆ ಕ್ರಮ

ಮದ್ದೂರಿ- ಟ್ರಾಫಿಕ್ ಪೊಲೀಸ್ ತಪಾಸಣೆಯ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ 3 ವರ್ಷದ ಮಗುವಿನ ಕುಟುಂಬದ ಮನೆಗೆ ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

ಪೋಷಕರಿಂದ ಘಟನೆ ವಿವರಗಳನ್ನು ಕೇಳಿದ ಸಚಿವರು ಮಾಧ್ಯಮದೊಂದಿಗೆ ಮಾತನಾಡಿ, “ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸುವುದು ಪೊಲೀಸ್ ಕೆಲಸ. ಆದರೆ ತುರ್ತು ಪರಿಸ್ಥಿತಿಯಲ್ಲಿ ಮಾನವೀಯತೆ ಮರೆಯುವುದು ತಪ್ಪು. ಅದೆ ರೀತಿ ವರ್ತಿಸಿದ ಪೊಲೀಸ್ ಸಿಬ್ಬಂದಿಯ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು,” ಎಂದು ಹೇಳಿದ್ದಾರೆ.

ಮೂರು ಪೊಲೀಸ್ ಸಿಬ್ಬಂದಿಗೆ ಅಮಾನತು
ಘಟನೆಗೆ ಕಾರಣರಾದ ಮೂರು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯವರನ್ನು ಅಮಾನತುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಈಗಾಗಲೇ ತನಿಖೆ ಆರಂಭವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಆಂಬುಲೆನ್ಸ್ ವ್ಯವಸ್ಥೆ ಲಭ್ಯವಿತ್ತು
“ಮದ್ದೂರು ಸರ್ಕಾರಿ ಆಸ್ಪತ್ರೆಯಿಂದ ಮಗುವನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಬಹುದಾಗಿತ್ತು. ಆದರೆ ಅದನ್ನು ಉಪಯೋಗಿಸದೇ ತಡವಾಗಿ ಚಿಕಿತ್ಸೆ ದೊರಕಿದ್ದು, ಇದರಿಂದ ಮಗು ಸಾವನ್ನಪ್ಪಿದೆ,” ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿನ ನಿರ್ವಹಣಾ ದುರ್ಬಲತೆ ಕುರಿತು ಮಾಹಿತಿ ದೊರೆತಿರುವುದರಿಂದ ಮದ್ದೂರು ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆಂಬುಲೆನ್ಸ್ ಸೇವೆಯ ಅಗತ್ಯ ಒತ್ತಿ
ಜಿಲ್ಲೆಯ ಪ್ರತಿಯೊಂದು ಹಳ್ಳಿಗೂ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇವೆ ತ್ವರಿತವಾಗಿ ಲಭ್ಯವಾಗಬೇಕೆಂದು ಸಚಿವರು ತಿಳಿಸಿದರು. “24 ಗಂಟೆಗಳ ಆಂಬುಲೆನ್ಸ್ ಸೇವೆ ಲಭ್ಯವಿದ್ದು, ಸಾರ್ವಜನಿಕರು ತುರ್ತು ಪರಿಸ್ಥಿತಿಯಲ್ಲಿ ಇದನ್ನು ಬಳಸಿಕೊಳ್ಳಬೇಕು,” ಎಂದು ಕರೆ ನೀಡಿದರು.

ಸಂಚಾರಿ ಪೊಲೀಸರಿಗೆ ತರಬೇತಿ ಸಭೆ
ಇನ್ನೂ ಕೆಲವೇ ದಿನಗಳಲ್ಲಿ ಸಂಚಾರಿ ಪೊಲೀಸ್ ಸಿಬ್ಬಂದಿಗೆ ನಿಯಮ ಪಾಲನೆ ಮತ್ತು ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಸಹಕಾರ ನೀಡುವ ಬಗ್ಗೆ ವಿಶೇಷ ಸಭೆ ಆಯೋಜಿಸಲಾಗುವುದು ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಪಿ. ರವಿಕುಮಾರ್ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *