ಕೆ.ಅರ್ .ಪೇಟೆ – ದಲಿತ ರೈತನ ಜೀವಂತ ದಹನ ಪ್ರಕರಣ-ಕತ್ತರಘಟ್ಟ ಗ್ರಾಮಕ್ಕೆ ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಭೇಟಿ-ಮೃತ ರೈತನ ಪತ್ನಿಗೆ ಸಾಂತ್ವನ ಹೇಳಿ ಆತ್ಮವಿಶ್ವಾಸ ತುಂಬಿದ ಸಮಿತಿ ಅಧ್ಯಕ್ಷ ನರೇಂದ್ರ ಸ್ವಾಮಿ

ಕೆ.ಅರ್ .ಪೇಟೆ : ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರ ನೇತೃತ್ವದಲ್ಲಿ ಇಂದು ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮಕ್ಕೆ ಭೇಟಿ ನೀಡಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ದಲಿತ ರೈತ ಜಯಕುಮಾರ್ ಮನೆ ಹಾಗೂ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮೃತ ರೈತನ ಪತ್ನಿ ಲಕ್ಷ್ಮಿ ಅವರಿಗೆ ಸಾಂತ್ವನ ಹೇಳಿದರು.

ಕಳೆದ 10ದಿನಗಳ ಹಿಂದೆ ಕತ್ತರಘಟ್ಟ ಗ್ರಾಮದಲ್ಲಿ ಹುಲ್ಲಿನ ಮೆದೆಯೊಳಗೆ ಸುಟ್ಟು ಅರೆಬೆಂದ ಸ್ಥಿತಿಯಲ್ಲಿ ದಲಿತ ರೈತ ಜಯಕುಮಾರ್ ಮೃತದೇಹ ಪತ್ತೆಯಾಗಿತ್ತು. ದೃಶ್ಯ ಮಾಧ್ಯಮಗಳು, ಸಾಮಾಜಿಕ ಜಾಲ ತಾಣ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು ಮೃತ ರೈತ ಜಯಕುಮಾರ್ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಜಾಗೃತವಾದ ಪೊಲೀಸರು ಹಾಗೂ ಪ್ರಗತಿಪರ ಸಂಘಟನೆಗಳು ಗ್ರಾಮದಲ್ಲಿ ಪುಂಡಾಟಿಕೆ ನಡೆಸುತ್ತಿದ್ದ ರೌಡಿ ಶೀಟರ್ ಅನಿಲ್ ಕುಮಾರ್ ದಲಿತ ಯುವ ರೈತನ ಕೊಲೆ ಮಾಡಿ ಹುಲ್ಲಿನ ಮೆದೆ ಯೊಳಕ್ಕೆ ತಳ್ಳಿ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ನೀಡುವಂತೆ ಹಾಗೂ ದಲಿತ ರೈತ ಜಯಕುಮಾರ್ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿದ್ದವು.

ಇಂದು ಕೆ.ಆರ್.ಪೇಟೆ ಪಟ್ಟಣಕ್ಕೆ ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಸದಸ್ಯರು ಹಾಗೂ ಶಾಸಕರಾದ ಪ್ರಸಾದ್ ಅಬ್ಬಯ್ಯ, ಡಾ.ತಿಮ್ಮಯ್ಯ, ಅಭಯ್ ಪಾಟೀಲ್, ರಾಜ್ಯ ಭೋವಿ ನಿಗಮದ ಅಧ್ಯಕ್ಷ ಚಂದ್ರಪ್ಪ, ಶಾಸಕ ಹೆಚ್.ಟಿ.ಮಂಜು, ಮೈಸೂರಿನ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ರಾಜ್ಯ ಪೊಲೀಸ್ ಮಹಾನಿರ್ದೇಶಕ ರಾದ ಅರುಣ್ ಚಕ್ರವರ್ತಿ, ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಅವರ ತಂಡದೊಂದಿಗೆ ಕತ್ತರಘಟ್ಟ ಗ್ರಾಮಕ್ಕೆ ಭೇಟಿ ನೀಡಿದ ಸಮಿತಿಯ ಅಧ್ಯಕ್ಷ ನರೇಂದ್ರ ಸ್ವಾಮಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರು ಹಾಗೂ ಮೃತ ರೈತನ ಪತ್ನಿಯೊಂದಿಗೆ ಮಾತನಾಡಿ ನಿಮ್ಮೊಂದಿಗೆ ನಾವಿದ್ದೇವೆ, ಸರ್ಕಾರ ನಿಮ್ಮೊಂದಿಗಿದೆ ಹೆದರಬೇಡಿ, ನಿಮ್ಮ ಪತಿಯ ಸಾವಿಗೆ ನ್ಯಾಯ ದೊರಕಿಸಿಕೊಡುತ್ತೇನೆ ಧೈರ್ಯವಾಗಿರಿ ಎಂದು ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಎಚ್.ಟಿ.ಮಂಜು, ರಾಜ್ಯ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್, ಮುಖಂಡರಾದ ವಿಜಯ್ ರಾಮೇಗೌಡ, ಬಿ.ಎಲ್. ದೇವರಾಜು, ಆರ್.ಟಿ.ಓ. ಮಲ್ಲಿಕಾರ್ಜುನ್ , ಅಪರ ಪೊಲೀಸ್ ವರಿಷ್ಟಾಧಿಕಾರಿ ತಿಮ್ಮಯ್ಯ, ಡಿವೈಎಸ್ ಪಿ ಚಲುವರಾಜು, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಡಾ.ಅಶೋಕ್, ದಲಿತ ಮುಖಂಡರಾದ ಡಿ. ಪ್ರೇಮಕುಮಾರ್, ಸೋಮಸುಂದರ್, ರಾಜಯ್ಯ, ಬಸ್ತಿ ರಂಗಪ್ಪ, ಮಾಂಬಳ್ಳಿ ಜಯರಾಂ, ಕಿಕ್ಕೇರಿ ರಾಜಣ್ಣ, ಸಿಂಧುಘಟ್ಟ ಸೋಮಸುಂದರ್, ಎನ್.ಜೆ.ಮಂಜು, ಕಮಲಾಕ್ಷಿ ನಾಗರಾಜು, ಚೌಡೇನಹಳ್ಳಿ ದೇವರಾಜು, ಕತ್ತರಘಟ್ಟ ರಾಜೇಶ್, ಲಕ್ಷ್ಮೀಪುರ ರಂಗಸ್ವಾಮಿ, ಊಚನಹಳ್ಳಿ ನಟರಾಜ್, ತೆಂಡೇಕೆರೆ ನಿಂಗಯ್ಯ, ಬಂಡಿಹೊಳೆ ರಮೇಶ್, ವೆಂಕಟಗಿರಿ, ಹರಿಹರಪುರ ನರಸಿಂಹ, ಚೆಲುವರಾಜು, ವಿವೇಕ್, ಗಿರೀಶ್, ಶಂಭಯ್ಯ, ಸೇರಿದಂತೆ ವಿವಿಧ ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ತಪ್ಪಿತಸ್ಥರಿಗೆ ಶಿಕ್ಷೆ ಖಚಿತ: ತನಿಖೆಗೆ ಬೆಂಗಳೂರು ಎಸ್.ಪಿ.ನೇಮಕ: ನರೇಂದ್ರ ಸ್ವಾಮಿ.
ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಕತ್ತರಘಟ್ಟ ಘಟನೆಯ ಬಗ್ಗೆ ಮಾಹಿತಿ ಪಡೆದ ಸಮಿತಿಯು ಘಟನೆಯ ಕತ್ತರಘಟ್ಟ ಜಯಕುಮಾರ್ ದಹನ ಪ್ರಕರಣದಲ್ಲಿ ಹಲವು ಅನುಮಾನುಗಳು ಕಂಡು ಬರುತ್ತಿದೆ.

ಹಾಗಾಗಿ ಪಾರದರ್ಶಕ ತನಿಖೆಗೆ ಆದೇಶ ನೀಡಲಾಗಿದೆ. ತಪ್ಪಿತಸ್ಥರು ಯಾರೇ ಆಗಲಿ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ನಮ್ಮ ದಲಿತ ಸಂಘಟನೆಗಳು ಯಾವುದೇ ಅನುಮಾನ ಬೇಡ. ಪ್ರಿಂಟ್ ಮಿಡಿಯಾ ಪತ್ರಿಕಾ ವರದಿಗಳು ಸಮಿತಿಯ ಕಣ್ಣನ್ನು ತೆರೆಸಿವೆ. ವರದಿಯ ಆಧಾರದ ಮೇಲೆ ದಲಿತ ರೈತ ಜಯಕುಮಾರ್ ಸಾವು ಆತ್ಮಹತ್ಯೆಯಲ್ಲ. ಆತನ ಸಾವು ಅನುಮಾನಸ್ಪದ ಎಂಬುದು ಖಚಿತವಾಗಿದೆ. ದಲಿತ ರೈತ ಜಯಕುಮಾರ್ ಹುಲ್ಲಿನ ಮೆದೆಯ ವಿಚಾರವಾಗಿ ಗ್ರಾಮದಲ್ಲಿ ಪುಂಡಾಟಿಕೆ ನಡೆಸುತ್ತಿದ್ದ ರೌಡಿಶೀಟರ್ ವಿರುದ್ದ ಮೇ.16ರಂದೆ ಪೋಲೀಸರು ಪ್ರಕರಣ ದಾಖಲಿಸಿದ್ದರೆ ಜಯಕುಮಾರ್ ಗೆ ರಕ್ಷಣೆ ನೀಡಿ ಆರೋಪಿ ಅನಿಲ್ ಕುಮಾರ್ ಗೆ ಎಚ್ಚರಿಕೆ ನೀಡಿದ್ದರೆ ಅಮಾಯಕ ರೈತ ಜಯಕುಮಾರ್ ಸಾಯುತ್ತಲೇ ಇರಲಿಲ್ಲ‌.

ಸದನ ಸಮಿತಿಯು ಈಗ ಮಧ್ಯ ಪ್ರವೇಶಿಸಿ ನಿಷ್ಪಕ್ಷಪಾತ ತನಿಖೆ ನಡೆಸಲು ಬೆಂಗಳೂರು ಪೋಲೀಸ್ ವರಿಷ್ಠಾಧಿಕಾರಿ ಧರಣಿದೇವಿ ಮಾಲಗತ್ತಿ ಅವರನ್ನು ನೇಮಿಸಿದೆ. ಎಫ್.ಎಸ್.ಎಲ್. ವರದಿ ಸೇರಿದಂತೆ, ತನಿಖೆಯು ಪ್ರಗತಿಯಲ್ಲಿರುವುದರಿಂದ ಬಹಿರಂಗವಾಗಿ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ನಾವು ಬಂದಿರುವುದು ಅಮಾಯಕ ದಲಿತ ಕುಟುಂಬಕ್ಕೆ ನ್ಯಾಯ ಕೊಡಿಸಲು ಹೊರತು ಅನ್ಯಾಯ ಮಾಡಲು ಅಲ್ಲಾ, ದಿನಪತ್ರಿಕೆಗಳ ಪತ್ರಿಕಾ ವರದಿಗಳು ಅನ್ಯಾಯಕ್ಕೊಳಗಾದ ಒಂದು ದಲಿತ ಕುಟುಂಬಕ್ಕೆ ನ್ಯಾಯ ಸಿಗುವಂತಾಗಿದೆ ಎಂದು ಪತ್ರಕರ್ತರಿಗೆ ನರೇಂದ್ರಸ್ವಾಮಿ ಹೇಳಿದರು.

-‌ ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *