ಅರಕಲಗೂಡು – ತಾಲ್ಲೂಕಿನ ಹನ್ಯಾಳು ಸರ್ಕಾರಿ ಶಾಲೆಯಲ್ಲಿ ಉಚಿತ, ಗುಣಾತ್ಮಕ ಶಿಕ್ಷಣ-LKG ಯಿಂದ ಹತ್ತನೇ ತರಗತಿವರೆಗೆ ಒಂದೇ ಕ್ಯಾಂಪಸ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳು

ರಾಮನಾಥಪುರ: ರಾಮನಾಥಪುರ ಹೋಬಳಿ, ಹನ್ಯಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪ್ರಸ್ತುತ ಗ್ರಾಮೀಣ ಶಿಕ್ಷಣ ಕ್ಷೇತ್ರಕ್ಕೆ ಮಾದರಿಯಾಗಿದೆ. ಎಲ್.ಕೆ.ಜಿ ರಿಂದ ಹತ್ತನೇ ತರಗತಿವರೆಗೆ ಒಂದೇ ಕಡೆ ಶಿಕ್ಷಣ ಪಡೆಯಲು ಸಾಧ್ಯವಾಗಿರುವ ಸೌಲಭ್ಯಗಳನ್ನು ಶಾಲೆಯ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪ್ರಮುಖ ವ್ಯಕ್ತಿಗಳ ಸಹಕಾರದಿಂದ ಕಲ್ಪಿಸಲಾಗಿದೆ.

ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನ ಮತ್ತು ಮಾಜಿ ಸಚಿವ ಎ. ಮಂಜು ರವರ ಪ್ರೋತ್ಸಾಹದಿಂದ, ಈ ಶಾಲೆಗಳು ಖಾಸಗಿ ಶಾಲೆಗಳಿಗೆ ಟಕ್ಕರಿಯ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿವೆ. ಪ್ರತಿಭಾವಂತ ಶಿಕ್ಷಕರಿಂದ ನಲಿವಿನ ದೆಸೆಯಲ್ಲಿ ಕಲಿಕೆಯನ್ನು ಅನುಭವಿಸುತ್ತಿರುವ ಈ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಅನೇಕ ಅವಕಾಶಗಳು ಒದಗಿಸಲಾಗುತ್ತಿವೆ.

ಶಾಲೆಯಲ್ಲಿ ಭಾನುವಾರದ ತರಗತಿಗಳು, ವಿಶೇಷ ತರಗತಿಗಳು, ಗುಂಪು ಅಧ್ಯಾಯನ, ತಿಂಗಳ ಗುರಿ-5, ಕ್ವಿಜ್ ಸ್ಪರ್ಧೆಗಳು ನಡೆಯುತ್ತಿದ್ದು, ಕಲಿಕೆಗೆ ಬೇಕಾದ ಎಲ್ಲಾ ಬೋಧನಾ ಸಾಮಗ್ರಿಗಳು, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ಸಿಸಿಟಿವಿ, ಸ್ಮಾರ್ಟ್ ಬೋರ್ಡ್, ವಾಲ್ ಆಫ್ ಫೇಮ್ ಮುಂತಾದ ಸೌಲಭ್ಯಗಳಿವೆ. ವಿದ್ಯಾರ್ಥಿಗಳ ನಿತ್ಯ ಅಧ್ಯಯನಕ್ಕಾಗಿ ಕಲ್ಲು ಬೆಂಚುಗಳ ಸೌಲಭ್ಯವಿದೆ.

ಹಿರಿಯ ವಿದ್ಯಾರ್ಥಿಗಳು ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಆಟದ ಮೈದಾನ, ಒಳಾಂಗಣ ಕ್ರೀಡಾಂಗಣ ಮುಂತಾದ ಮೂಲಸೌಕರ್ಯಗಳನ್ನು ಒದಗಿಸಿದ್ದು, ಆರ್ ಟಿಓ ದೀಪಕ್ ರವರು ಬ್ಯಾಡ್ಮಿಂಟನ್ ಹಾಲ್ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಜೊತೆಗೆ MRPL ವತಿಯಿಂದ 12 ಲಕ್ಷ ರೂ. ವೆಚ್ಚದಲ್ಲಿ ಹೊಸ ತರಗತಿ ಕೊಠಡಿ ನಿರ್ಮಿಸಲಾಗಿದೆ.

ಕೇವಲ ಶಾಲಾ ತರಗತಿಗಳಲ್ಲದೇ, ಮಕ್ಕಳ ಮನೆ ಯೋಜನೆಯಡಿ ಪೂರ್ವ ಪ್ರಾಥಮಿಕ ಶಿಕ್ಷಣವೂ ಸಹ ಹನ್ಯಾಳು ಸೇರಿದಂತೆ ತಾಲ್ಲೂಕಿನ ಹಲವೆಡೆ ಅತಿ ಕಡಿಮೆ ಶುಲ್ಕದಲ್ಲಿ ದೊರೆಯುತ್ತಿದೆ. ಇದರ ಸದುಪಯೋಗವನ್ನು ಪೋಷಕರು ಪಡೆದುಕೊಳ್ಳಬೇಕೆಂಬುದು ಶಾಲಾ ಅಧಿಕಾರಿಗಳ ಆಶಯವಾಗಿದೆ.

ಯೋಗ, ಸಂಗೀತ, ಸ್ಪೋಕನ್ ಇಂಗ್ಲಿಷ್ ತರಗತಿಗಳ ಮೂಲಕ ಹಾಗೂ NMMS ಪರೀಕ್ಷೆಗಾಗಿ ವಿಶೇಷ ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯೆ ಜೊತೆಗೆ ಜೀವನ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಶಾಲಾ ವಾಹನದ ವ್ಯವಸ್ಥೆಯೂ ಸಹ ಮಕ್ಕಳಿಗೆ ಅನುಕೂಲವಾಗುವಂತೆ ಕಲ್ಪಿಸಲಾಗಿದೆ.

ಹನ್ಯಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಉತ್ತಮ ವಿದ್ಯಾದಾನ ಮತ್ತು ಆಧುನಿಕ ಸೌಲಭ್ಯಗಳಿಂದ ಶ್ಲಾಘನೀಯ ರೀತಿಯಲ್ಲಿ ಅಭಿವೃದ್ಧಿ ಹೊಂದಿದ್ದು, ಇದಕ್ಕಾಗಿರುವ ಪ್ರಮುಖ ಕಾರಣವೆಂದರೆ ಸಮರ್ಪಿತ ನಾಯಕತ್ವ ಮತ್ತು ಶ್ರದ್ಧಾವಂತ ಶಿಕ್ಷಕರ ತಂಡ.

ಈ ಎಲ್ಲ ಶೈಕ್ಷಣಿಕ ಬೆಳವಣಿಗೆ, ಮೂಲಸೌಕರ್ಯಗಳ ಸುಧಾರಣೆ ಹಾಗೂ ಮಕ್ಕಳ ಒಳಿತಿಗಾಗಿ ಕೆಲಸಮಾಡಿರುವ ಪ್ರಮುಖರು:

  • ಎ. ಮಂಜು, ಮಾನ್ಯ ಶಾಸಕರು, ಅರಕಲಗೂಡು: ಶಾಲೆಯ ಪ್ರಗತಿಗೆ ನಿರಂತರ ಪ್ರೋತ್ಸಾಹ, ಸೌಲಭ್ಯ ಅಭಿವೃದ್ಧಿಗೆ ಸಕ್ರೀಯ ಹಸ್ತಕ್ಷೇಪ.
  • ಡಾ. ಅಶೋಕ ಹೆಚ್.ಈ., ಲೆಕ್ಕ ಪರಿಶೋಧನಾ ಇಲಾಖೆಯ ಹಿರಿಯ ಉಪನಿರ್ದೇಶಕರು- ಶೈಕ್ಷಣಿಕ ದೃಷ್ಟಿಕೋನದಲ್ಲಿ ಮಾರ್ಗದರ್ಶನ.
  • ಈರಪ್ಪ ಹೆಚ್.ಪಿ., ನಿವೃತ್ತ ಜಂಟಿ ಅಬಕಾರಿ ಆಯುಕ್ತರು- ಶಾಲೆಗೆ ಭೂಮಿ ದಾನ ಮಾಡಿ ಶೈಕ್ಷಣಿಕ ಸೇವೆಗೆ ಶ್ರೇಷ್ಠ ಉದಾಹರಣೆ.
  • ರವಿಕುಮಾರ ಕೆ.ಎನ್., ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ಪ್ರಸ್ತುತ ಮುಖ್ಯಶಿಕ್ಷಕರು– ನೈಜ ಶ್ರದ್ಧೆ ಮತ್ತು ಸೇವಾಭಾವದಿಂದ ಶಾಲೆಯ ಸುದೀರ್ಘ ಬೆಳವಣಿಗೆಗೆ ಪ್ರಮುಖ ದಾರಿ ತೋರಿಸಿರುವ ಶಿಕ್ಷಣ ತಜ್ಞರು.

ದಾಖಲೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

  • ಮಕ್ಕಳ ಮನೆ: ಮಂಜುಳಾ – 📞 82961 46422
  • ಪ್ರೌಢಶಾಲೆ: ರವಿಕುಮಾರ ಕೆ.ಎನ್. – 📞 99643 61962

ವರದಿ: ಕೆಲ್ಲೂರು ಶಶಿಕುಮಾರ್

Leave a Reply

Your email address will not be published. Required fields are marked *