ಕೆ.ಆರ್.ಪೇಟೆ- ಕಾಲೇಜು ಶಿಕ್ಷಣ ಇಲಾಖೆಯಲ್ಲಿ 37ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ವಯೋನಿವೃತ್ತ ಬಿ. ಎ.ಮಂಜುನಾಥ್ ಆವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ-ಹೇಮಾವತಿ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ

ಕೆ.ಆರ್.ಪೇಟೆ : ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಎ. ಮಂಜುನಾಥ್ ಅವರು ವಯೋ ನಿವೃತ್ತರಾದ ಹಿನ್ನೆಲೆಯಲ್ಲಿ ಕಾಲೇಜಿನ ವತಿಯಿಂದ ಹೃದಯಸ್ಪರ್ಶಿಯಾಗಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಿ ಬೀಳ್ಕೊಡುಗೆ ನೀಡಲಾಯಿತು.

ಕೆ.ಆರ್.ಪೇಟೆ ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ನಿವೇಶನಗಳನ್ನು ಗುರುತಿಸಿ ಎರಡೂ ಕಾಲೇಜುಗಳು ಸ್ವಂತ ಕಟ್ಟಡ ಹೊಂದಲು ಮಂಜುನಾಥ್ ಅವರ ಪರಿಶ್ರಮ ಅಪಾರವಾಗಿದೆ. ಉತ್ತಮವಾದ ಆಡಳಿತಗಾರರಾಗಿದ್ದ ಮಂಜುನಾಥ್ ಅವರು ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಆ ಕೆಲಸವನ್ನು ಸಾಧಿಸುವವರೆಗೆ ಕೈಬಿಡುವ ಜಾಯಮಾನದವರಲ್ಲ.

ಗುಣ ಮಟ್ಟದ ಶಿಕ್ಷಣದ ಅನುಷ್ಠಾನ ಹಾಗೂ ಕಾಲೇಜು ಶಿಕ್ಷಣ ಇಲಾಖೆಯಿಂದ ದೊರಕಬಹುದಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಬಡ ವಿದ್ಯಾರ್ಥಿಗಳಿಗೆ ಕೊಡಿಸಿಕೊಡುವ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದರು. ಹೊಳೆನರಸೀಪುರ ಸರ್ಕಾರಿ ಕಾಲೇಜಿನಲ್ಲಿ ಕೇವಲ ಎರಡೇ ವರ್ಷ ಕೆಲಸ ಮಾಡಿದ್ದರೂ ತಮ್ಮ ಛಾಪನ್ನು ಮಂಜಣ್ಣ ಇಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಸ್ಮರಿಸಿದ ಪ್ರಾಂಶುಪಾಲ ಮೂರ್ತಿ ಮಂಜಣ್ಣ ಅವರ ವಿಶ್ರಾಂತ ಜೀವನವು ಸುಖಮಯವಾಗಿರಲಿ ಎಂದು ಶುಭ ಕೋರಿದರು.

ಕಳೆದ 15 ವರ್ಷಗಳಿಂದ ಕಾಲೇಜು ವಾರ್ಷಿಕ ವಿಶೇಷ ಸಂಚಿಕೆಯನ್ನು ಹೊರ ತರಲಾಗಿರಲಿಲ್ಲ, ಆದರೆ ಈ ಸಾಲಿನಲ್ಲಿ ಮಂಜಣ್ಣ ಅವರ ಮಾರ್ಗದರ್ಶನ ಹಾಗೂ ಹೇಮಾವತಿ ವಾರ್ಷಿಕ ಸಂಚಿಕೆಯ ಸಂಪಾದಕರಾದ ಕನ್ನಡ ಪ್ರಾಧ್ಯಾಪಕಿ ಪೂರ್ಣಿಮಾ ಅವರ ಪರಿಶ್ರಮದ ಫಲವಾಗಿ ಹೇಮಾವತಿ ಸಂಚಿಕೆಯು ವಿಶೇಷವಾಗಿ ಮೂಡಿ ಬಂದಿದೆ ಎಂದು ಮೂರ್ತಿ ಶ್ಲಾಘಿಸಿದರು.

ಮೈಸೂರು ವಿಭಾಗದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಯ ವ್ಯವಸ್ಥಾಪಕ ಅರವಿಂದ್ ಮಾತನಾಡಿ ಮಂಜಣ್ಣ ಅವರು ಸೇವೆ ಸಲ್ಲಿಸಿರುವ ಎಲ್ಲಾ ಕಾಲೇಜುಗಳಲ್ಲಿಯೂ ಉತ್ತಮವಾಗಿ ಕೆಲಸ ಮಾಡುವ ಮೂಲಕ ದಕ್ಷ ಆಡಳಿತಗಾರರಾಗಿ ಹೊರಹೊಮ್ಮವ ಮೂಲಕ ಅಜಾತಶತ್ರು ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿರುವ ಮಂಜಣ್ಣ ಅವರು ವಿಶ್ರಾಂತಿಯ ನಂತರವೂ ಸಮಾಜ ಸೇವಾ ಚಟುವಟಿಕೆಗಳ ಮೂಲಕ ಸದಾ ಕ್ರಿಯಾಶೀಲವಾಗಿರಲಿ ಎಂದು ಅರವಿಂದ್ ಶುಭ ಹಾರೈಸಿದರು.

ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಲಕ್ಷ್ಮಣ್, ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಗಧೀಶ್, ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ದೇವರಾಜ್, ಗ್ರಂಥಪಾಲಕಿ ಪ್ರಮೋದಿನಿ, ದೈಹಿಕ ಶಿಕ್ಷಣ ನಿರ್ದೇಶಕಿ ಗಾಯತ್ರಮ್ಮ, ಸಹಾಯಕ ಪ್ರಾಧ್ಯಪಕರಾದ ಮಂಜುನಾಥ್, ಸರ್ಕಾರಿ ಕಾನೂನು ಕಾಲೇಜಿನ ಪ್ರಾಂ ಶುಪಾಲರಾದ ಭಾಗ್ಯಲಕ್ಷ್ಮಿ, ರಾಗಿಣಿ, ಹಾಸನದ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ಧನಂಜಯ, ಉಧ್ಯಮಿ ,ಗ್ಯಾಸ್ ರಾಜಶೇಖರ್, ಅಕ್ಷಯ್ ಗೌಡ, ಸಿಂಧಘಟ್ಟ ನಾಗೇಶ್, ಚೌಡೇನಹಳ್ಳಿ ಹರೀಶ್, ಹೊಸಹೊಳಲು ಶಂಕರೇಗೌಡ ಸೇರಿದಂತೆ ಮಂಜುನಾಥ್ ಅವರ ನೂರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *