ಕೊರಟಗೆರೆ :– ಪೌರಕಾರ್ಮಿಕರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಸರ್ಕಾರ ಮತ್ತು ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದ ಸಂಘ ಸಂಸ್ಥೆಗಳಿಗೆ ಅಭಿನಂದಿಸಿ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತ ಪಡಿಸಿದ ಕೊರಟಗೆರೆ ಪ.ಪಂ. ಪೌರಕಾರ್ಮಿಕರು.
ಪೌರಕರ್ಮಿಕರು ಮತ್ತು ನೀರು ಸರಬರಾಜು ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಪೌರ ನೌಕರರ ಕೇಂದ್ರ ಸಂಘದ ಆದೇಶದ ಮೇರೆಗೆ ಕಳೆದ ಮೇ 27 ರಿಂದ ರಾಜ್ಯಾದಾದ್ಯಂತ ಅನಿರ್ದಿಷ್ಟಾವದಿ ಮುಷ್ಕರಕ್ಕೆ ಬೆಂಬಲಿಸಿ ಕೊರಟಗೆರೆ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಮತ್ತು ನೀರು ಸರಬರಾಜು ನೌಕರರು ಪಟ್ಟಣ ಪಂಚಾಯತಿ ಮುಂಭಾಗ ಪ್ರತಿಭಟನೆ ನಡೆಸಿದ್ದು ಪೌರನೌಕರರ ಪ್ರತಿಭಟನೆಗೆ ರಾಜ್ಯ ಸರ್ಕಾರ ಸ್ಪಂದಿಸಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸು ಭರವಸೆ ನೀಡಿದ ಹಿನ್ನಲೆಯಲ್ಲಿ ಕೊರಟಗೆರೆ ಪ.ಪಂ. ಪೌರನೌಕರರು ಪ್ರತಿಭಟನೆಯನ್ನು ಕೈಬಿಟ್ಟು ಸರ್ಕಾರದ ಭರವಸೆಗೆ ಸಂತೋಷ ವ್ಯಕ್ತಪಡಿಸಿ ಪಟ್ಟಣ ಪಂಚಾಯಿತಿ ಮುಂಭಾಗ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ವ್ಯಕ್ತ ಪಡಿಸಿದರು.

ಸಂಭ್ರಮದ ನಂತರ ಮಾತನಾಡಿದ ತಾಲೂಕು ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನರಸಿಂಹಯ್ಯ ಪೌರಕಾರ್ಮಿಕರ ಕಷ್ಟ ಅರಿತ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಕ್ಷೇತ್ರದ ಶಾಸಕರು ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರು ಪೌರಕಾರ್ಮಿಕರ ಕಷ್ಟ ಅರಿತು ಸರ್ಕಾರದಲ್ಲಿ ಚರ್ಚಿಸಿ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದು ಅವರಿಗೆ ಮತ್ತು ರಾಜ್ಯಾಧ್ಯಕ್ಷರ ಕರೆಗೆ ಎಲ್ಲಾ ಪೌರ ನೌಕರರು ತಮ್ಮ ಕರ್ತವ್ಯಕ್ಕೆ ಗೈರಾಗಿ ಮುಷ್ಕರಕ್ಕೆ ಕೈ ಜೋಡಿಸಿದ ಹಾಗೂ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ ಕೊರಟಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಸದಸ್ಯರು, ಮುಖ್ಯಾಧಿಕಾರಿಗಳು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಸಂಘದ ಅಧ್ಯಕ್ಷರು ಪದಾದಿಕಾರಿಗಳು ಮತ್ತು ಎಲ್ಲಾ ಪತ್ರಕರ್ತರು ಸೇರಿದಂತೆ ಬೆಂಬಲ ವ್ಯಕ್ತಪಡಿಸಿದ ಎಲ್ಲಾ ಸಂಘ ಸಂಸ್ಥೆಗಳ ಪದಾದಿಕಾರಿಗಳಿಗೆ ಅಭಿನಂದಿಸಿದರು.

ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿ ಪಟ್ಟಣದ ಜನತೆ ಆರೋಗ್ಯದಿಂದ ಇರಬೇಕಾದರೆ ಪಟ್ಟಣದ ಬೀದಿಗಳು ಸ್ವಚ್ಚತೆಯೇ ಕಾರಣ ಸ್ವಚ್ಚತೆಯ ಕೆಲಸವನ್ನು ಪ್ರತಿ ನಿತ್ಯ ಮಾಡುವ ಪೌರಕಾರ್ಮಿಕರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿ ಈಡೇರಿಸು ಭರವಸೆ ನೀಡಿದ್ದು ಅತಿ ಶೀಘ್ರವಾಗಿ ಅವರ ಬೇಡಿಕಗಳು ಈಡೇರಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷ ಅನಿತಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ, ಸದಸ್ಯರಾದ ಎ,ಡಿ.ಬಲರಾಮಯ್ಯ, ಕೆ.ಎನ್.ಲಕ್ಷ್ಮಿನಾರಾಯಣ್, ಕೆ.ಆರ್.ಓಬಳರಾಜು, ನಟರಾಜು, ನಂದೀಶ್, ಗಣೇಶ್, ಪ.ಪಂ.ಮುಖ್ಯಾಧಿಕಾರಿ ಉಮೇಶ್, ಪೌರ ನೌಕರರ ಸಂಘದ ಉಪಾಧ್ಯಕ್ಷ ಮುನಿಗೋಪಾಲ್, ಖಜಾಂಚಿ ನಾಗರತ್ನಮ್ಮ, ಆರ್.ಐ.ವೇಣುಗೋಪಾಲ್, ಆರೋಗ್ಯಾಧಿಕಾರಿ ಮಹಮದ್ಹುಸೇನ್, ಶೈಲೇಂದ್ರ, ರೇಣುಕಾ, ಸಾವಿತ್ರಮ್ಮ, ಗಜಲಕ್ಷ್ಮೀ, ಹರೀಶ್, ನಾಗೇಶ್, ಡ್ರೈವರ್, ಮಂಜುನಾಥ್, ಜಯಮ್ಮ ಚೆನ್ನಪ್ಪ, ನಂದ, ನೀರು ಸರಬರಾಜು ನೌಕರ ರಾಮಕೃಷ್ಣ, ವೇಣು, ಭೀಮರಾಜು, ಲಿಂಗರಾಜು, ತಿಮ್ಮರಾಜು, ದೇವರಾಜ್, ಇಮ್ರಾನ್ ಸೇರಿದಂತೆ ಇತರರು ಇದ್ದರು.
- ಶ್ರೀನಿವಾಸ್ ಟಿ. ಕೊರಟಗೆರೆ.