ಮೈಸೂರು- ಅಂತರ್ಮುಖಿ ಸದಾ ಸುಖಿ ಬಹಿರ್ಮುಖಿ ಸದಾ ದುಃಖಿ, ಎನ್ನುವ ಹಾಗೆ ನಮ್ಮ ಜೀವನವನ್ನು ದಿವ್ಯ ಮಾಡಿಕೊಳ್ಳಲು ಸಮಯ ಸಂಕಲ್ಪ ಶ್ವಾಸವನ್ನು ಸಫಲ ಮಾಡಿಕೊಳ್ಳಬೇಕಾಗಿದೆ ಎಂದು ಅಹಮದಾಬಾದ್ನ ಅಂಬವಾಡಿಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಂತರಾಷ್ಟ್ರೀಯ ಮನೋಬಲ ತರಬೇತುದಾರರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಾರದಾಜೀ ಅಭಿಪ್ರಾಯಪಟ್ಟರು.

ಅವರು ನಗರದ ಹುಣಸೂರು ರಸ್ತೆಯಲ್ಲಿರುವ ಯೋಗ ಭವನದಲ್ಲಿ ರಾಜಯೋಗ ಶಿಕ್ಷಕಿಯರು ಹಾಗೂ ಸಂಚಾಲಕರುಗಳ ಐದು ದಿನದ ರಾಜಯೋಗ ಧ್ಯಾನ ಜ್ಞಾನ ಅಖಂಡ ಮೌನ ಹಾಗೂ ದಿವ್ಯ ಜೀವನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಆಲೋಚನೆಗಳಲ್ಲಿ ದೃಢ ನಿಶ್ಚಯವಿದ್ದಾಗ ಯಾವುದೇ ಅಡೆ-ತಡೆಗಳಿದ್ದರೂ ಉತ್ತಮ ಕೆಲಸ ಮಾಡುವ ಸ್ವಾಭಾವಿಕ ಪ್ರವೃತ್ತಿ ಇರುತ್ತದೆ. ಅಂತ ವ್ಯಕ್ತಿಯು ತನ್ನ ಗುರಿಯನ್ನು ಸಾಧಿಸುವಲ್ಲಿ ಯಾವುದೇ ಪರಿಸ್ಥಿತಿ ತಡೆಯಲು ಸಾಧ್ಯವಿಲ್ಲ ಆದ್ದರಿಂದ ಬಲವಾದ ಧೃಢ ನಿಶ್ಚಯವನ್ನು ಹೊಂದಿರುವ ವ್ಯಕ್ತಿಗಳು ಸ್ವಾಭಾವಿಕವಾಗಿಯೇ ಸ್ಥಿರವಾದ ಯಶಸ್ಸನ್ನು ಪಡೆಯುತ್ತಾರೆ ಎಂದು ತಿಳಿಸಿದರು.

ಮೈಸೂರು ಉಪವಿಭಾಗದ ಮುಖ್ಯ ಸಂಚಾಲಕಿ ಹಾಗೂ ಕಿತ್ತೂರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ ಮಾತನಾಡಿ ಮಕ್ಕಳಿಗೆ ವಸ್ತುಗಳನ್ನು ಕೊಡಿಸದಿದ್ದರೆ ಸ್ವಲ್ಪ ಹೊತ್ತು ಅಳುತ್ತವೆ ಆದರೆ ಒಳ್ಳೆಯ ಸಂಸ್ಕಾರ ಕಲಿಸದಿದ್ದರೆ ಜೀವನ ಪರ್ಯಂತ ಅಳಬೇಕಾಗುತ್ತದೆ. ಹಾಗೆಯೇ ಮನಸ್ಸು ಬುದ್ದಿಗು ಸಹ ಸಕರಾತ್ಮಕ ಚಿಂತನೆಗಳನ್ನೇ ಕೊಡುವುದರಿಂದ ಜೀವನ ದಿವ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಜಿಲ್ಲಾ ಸಂಚಾಲಕರುಗಳಾದ ಚಾಮರಾಜನಗರದ ರಾಜಯೋಗಿನಿ ಬ್ರಹ್ಮಾಕುಮಾರಿ ಪ್ರಭಾಮಣೀಜೀ, ಮಂಡ್ಯದ ಬಿ ಕೆ ಶಾರದಾಜೀ, ಕೊಡಗಿನ ಗಾಯತ್ರೀಜಿ, ಹಾಸನದ ಮೀನಾಜಿ, ಸ್ವಾಮಿ ವಿವೇಕಾನಂದ ಸದ್ಭಾವನ ರಾಜ್ಯ ಪ್ರಶಸ್ತಿ ಪುರಸ್ಕೃತೆ ಬಿಕೆ ದಾನೇಶ್ವರೀಜೀ, ಯೋಗ ಭವನದ ರಾಜಯೋಗಿನಿ ಬ್ರಹ್ಮಾಕುಮಾರಿ ಶಾರದಾಜೀ ಸೇರಿದಂತೆ ನೂರಕ್ಕೂ ಹೆಚ್ಚು ರಾಜಯೋಗ ಶಿಕ್ಷಕಿಯರು ಭಾಗವಹಿಸಿದ್ದರು.