ತುಮಕೂರು: ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ,ಪ್ರತಿ ಚುನಾವಣೆಗಳಲ್ಲಿಯೂ ಪಕ್ಷಕ್ಕೆ ಬಲ ತುಂಬಿರುವ ಕಾರ್ಯಕರ್ತರಿಗೆ ಶೀಘ್ರದಲ್ಲಿಯೇ ಒಳ್ಳೆಯ ಸುದ್ದಿ ಬರಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಮಯೂರ ಜಯಕುಮಾರ್ ಭರವಸೆ ನೀಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ನಗರ ವಿಧಾನಸಭಾಕ್ಷೇತ್ರದ ಮುಖಂಡರು, ಕಾರ್ಯಕರ್ತರು ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಅವರ ಪರಿಶ್ರಮದಿಂದಲೇ 2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ 7 ರಲ್ಲಿ ಗೆಲುವು ಸಾಧಿಸಿ,ತುಮಕೂರು ನಗರ ಮತ್ತು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಕೂದಲೆಳೆ ಅಂತರದಲ್ಲಿ ಸೋಲು ಕಂಡಿದ್ದೇವೆ.ಇದರ ಹಿಂದೆ ಭಾರತ್ಜೋಡೋ ಯಾತ್ರೆಯ ಯಶಸ್ಸು ಒಂದೆಡೆಯಾದರೆ, ಕಾರ್ಯಕರ್ತರು ಶ್ರಮವೂ ಮೇಲುಗೈ ಪಡೆದಿದೆ. ಕಡಿಮೆ ಅಂತರದಲ್ಲಿ ಸೋತ ಕ್ಷೇತ್ರಗಳ ಒಂದು ಮತಗಟ್ಟೆಯಲ್ಲಿ 20 ಮತಗಳು ಹೆಚ್ಚಿಗೆಯಾಗಿದ್ದರೂ ನಮ್ಮ ಗೆಲುವು ಸಾಧ್ಯವಿತ್ತು. ಹಾಗಾಗಿ ನಾವುಗಳು ಮತ್ತಷ್ಟು ಶಕ್ತಿಯುತವಾಗಿ ಸಂಘಟಿತರಾಗಿ ಚುನಾವಣೆಗಳನ್ನು ಎದುರಿಸಬೇಕಿದೆ ಎಂದರು.

ಕೇಂದ್ರ ಸರಕಾರದಿಂದ ರಾಜ್ಯಕ್ಕೆ ನಿರಂತರವಾಗಿ ತೆರಿಗೆಯ ಪಾಲು ಹಂಚಿಕೆಯಲ್ಲಿ ತಾರತಮ್ಯ ನಡೆಯುತ್ತಿದೆ.100 ರೂ ತೆರಿಗೆ ನೀಡಿದರೆ ಕೇವಲ 13 ರೂ ಮಾತ್ರ ಕರ್ನಾಟಕಕ್ಕೆ ನೀಡಲಾಗುತ್ತಿದೆ.ಆದರೆ ಉತ್ತರ ಪ್ರದೇಶ, ಬಿಹಾರಗಳಿಗೆ 100 ರೂ ಬದಲಾಗಿದೆ 186 ರೂ ನೀಡಲಾಗುತ್ತಿದೆ.120 ಡಾಲರ್ ಒಂದು ಬ್ಯಾರಲ್ ಕಚ್ಚಾ ತೈಲವಿದ್ದಾಗಲೂ ನಾವು 65 ರೂಗಳಿಗೆ ಒಂದು ಲೀಟರ್ ಪೆಟ್ರೋಲ್ ನೀಡಿದ್ದೇವೆ. ಆದರೆ 40 ಡಾಲರ್ಒಂದು ಬ್ಯಾರಲ್ ಕಚ್ಚಾತೈಲವಿದ್ದಾಗ್ಯೂ ಇಂದು ಇಂಧನ ಬೆಲೆ 100ರ ಗಡಿ ದಾಟಿದೆ ಎಂದರು.

ಮುಖಂಡರಾದ ಇಕ್ಬಾಲ್ಅಹಮದ್ ಮಾತನಾಡಿ, ಹತ್ತಾರು ವರ್ಷಗಳಿಂದ ಬಾವುಟಕಟ್ಟಿ, ಪಕ್ಷದ ಗೆಲುವಿಗೆ ದುಡಿದಕಾರ್ಯಕರ್ತರಿಗೆ, ಪಕ್ಷಅಧಿಕಾರಕ್ಕೆ ಬಂದಾಗಲು ನಿಗಮ ಮಂಡಳಿಗಳಲ್ಲಿ ಅವಕಾಶ ದೊರೆಯದಿರುವುದು ಬೇಸರತಂದಿದೆ. ಇದರ ಬಗ್ಗೆ ಪಕ್ಷ ಗಂಭೀರವಾಗಿ ಪರಿಗಣಿಸಬೇಕೆಂದರು.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ವಹಿಸಿದ್ದರು. ವೇದಿಕೆಯಲ್ಲಿ ಮುಖಂಡರಾದ ಶಶಿ ಹುಲಿಕುಂಟೆ ಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫಯಾಜ್, ನಯಾಜ್,ಜಿಲ್ಲಾ ವಕ್ತಾರರಾದ ಶ್ರೀಮತಿ ಕೆ.ಎಂ.ಸುಜಾತಾ,ತೋವಿನಕೆರೆ ಪುಟ್ಟರಾಜು, ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ