ಕೆ.ಆರ್.ಪೇಟೆ,ಜೂ.04: ತಾಲ್ಲೂಕಿನ ತೆಂಡೇಕೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಳ್ಳೇಕೆರೆ ಸವಿತಾ ಇಂದ್ರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷರಾದ ಮಲ್ಕೋನಹಳ್ಳಿ ಸವಿತಗೋವಿಂದಶೆಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಬಳ್ಳೇಕೆರೆ ಸವಿತಾಇಂದ್ರೇಶ್ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಎಂ.ಮಂಜುನಾಥ್ ಕಾರ್ಯನಿರ್ವಹಿಸಿದರು. ಸಹ ಚುನಾವಣಾಧಿಕಾರಿಯಾಗಿ ತಾ.ಪಂ.ವ್ಯವಸ್ಥಾಪಕ ಅನಿಲ್ಬಾಬು, ಪಿಡಿಓ ಕೆ.ಎಸ್.ಕುಮಾರ್ ಕಾರ್ಯನಿರ್ವಹಣೆ ಮಾಡಿದರು.

ನೂತನ ಅಧ್ಯಕ್ಷೆ ಸವಿತಾ ಇಂದ್ರೇಶ್ ಅವರನ್ನು ಗ್ರಾ.ಪಂ.ಉಪಾಧ್ಯಕ್ಷೆ ನಾಗರತ್ನ, ಸದಸ್ಯರಾದ ಶಿವಲಿಂಗ, ಸೌಭಾಗ್ಯ, ಎ.ಎಂ.ರಾಜು, ಸ್ವಾಮೀಗೌಡ, ಶಿಲ್ಪ, ಜಯಮ್ಮ, ಜಿ.ಶ್ರೀನಿವಾಸ್, ಕೆ.ರವಿಕುಮಾರ್, ಜ್ಯೋತಿ, ಎಂ.ಆರ್.ರಂಗಸ್ವಾಮಿ, ರೋಹಿಣಿ, ಬಂಕ್ ಗುಂಡಣ್ಣ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಕೆ.ಎಸ್.ಕುಮಾರ್ ಹಾಗೂ ಮುಖಂಡರು ಅಭಿನಂದಿಸಿದರು.
ನೂತನ ಅಧ್ಯಕ್ಷೆ ಸವಿತಾ ಇಂದ್ರೇಶ್ ಮಾತನಾಡಿ ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಲಭ್ಯಗಳಾದ ಶುದ್ದ ಕುಡಿಯುವ ನೀರು, ಬೀದಿ ದೀಪ, ಚರಂಡಿ ವ್ಯವಸ್ಥೆ, ನರೇಗಾ ಕಾಮಗಾರಿಗಳನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
– ಶ್ರೀನಿವಾಸ್ ಆರ್.