ಕೆ.ಆರ್.ಪೇಟೆ-ಆರ್.ಸಿ.ಬಿ ವಿಜಯೋತ್ಸವ ನಡೆದ ಕಾಲ್ತುಳಿತದಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದ ಪೂರ್ಣಚಂದ್ರ ದುರ್ಮರಣ

ಕೆ.ಆರ್.ಪೇಟೆ : ಐ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 18ವರ್ಷಗಳ ಬಳಿಕ ಚಾಂಪಿಯನ್ ಆದ ಆರ್.ಸಿ.ಬಿ ತಂಡದ ಆಟಗಾರರನ್ನು ನೋಡಲು ಹಾಗೂ ವಿಜಯೋತ್ಸವ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಹೋಗಿದ್ದ ಕೆ.ಆರ್.ಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದ ಯುವಕನೊಬ್ಬ ಕಾಲ್ತುಳಿತಕ್ಕೆ ಸಿಲುಕಿ ಮೃತ ಪಟ್ಟಿರುವ ಬಗ್ಗೆ ವರದಿಯಾಗಿದೆ.

ರಾಯಸಮುದ್ರ ಗ್ರಾಮದ ಶಿಕ್ಷಕ ಆರ್.ಬಿ.ಚಂದ್ರ ಮತ್ತು ಕಾಂತಾಮಣಿ ದಂಪತಿಗಳ ಪುತ್ರ ಪೂರ್ಣಚಂದ್ರ(25) ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ ಯುವಕ ಎಂದು ತಿಳಿದು ಬಂದಿದೆ.‌

ಘಟನೆ ವಿವರ: ಅಹಮದಾಬಾದ್‌ನಲ್ಲಿ ನಡೆದ ಐ.ಪಿ.ಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ 6ರನ್ನುಗಳ ವಿರೋಚಕ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕ್ರಿಕೆಟ್ ತಂಡಕ್ಕೆ ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದದಲ್ಲಿ ಅಭಿನಂದನೆ ಸಲ್ಲಿಸುವುದಕ್ಕೂ ಮುನ್ನ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಅಸಂಖ್ಯಾತ ಅಭಿಮಾನಿಗಳು ಸಾಗರೋಪಾದಿಯಲ್ಲಿ ಭಗವಹಿಸಿದ್ದರು. ಇದೇ ವಿಜಯೋತ್ಸವ ಕಾರ್ಯಕ್ರಮ ನೋಡಲು ಕೆ.ಆರ್.ಪೇಟೆ ತಾಲ್ಲೂಕಿನ ಶಿಕ್ಷಕರಾದ ಆರ್.ಬಿ.ಚಂದ್ರು ಅವರ ಮಗ ಪೂರ್ಣಚಂದ್ರ ಎಂಬಾತನು ಸಹ ಹೋಗಿದ್ದನು.

ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ರಾಯಸಮುದ್ರ ಗ್ರಾಮದ ಯುವಕ ಪೂರ್ಣಚಂದ್ರ ಕಾಲ್ತುಳಿತಕ್ಕೆ ಸಿಲುಕಿ ಧಾರುಣವಾಗಿ ಸಾವನ್ನಪ್ಪಿರುತ್ತಾನೆ. ಆರ್.ಸಿ.ಬಿ.ಗೆಲುವಿನ ಸಂಭ್ರಮಕ್ಕೆ ಮುನ್ನವೇ ಮುಗ್ಧ ಜೀವ ನಷ್ಟವಾಗಿರುವುದು ಅತೀವ ದುಃಖ ತಂದಿದೆ ಎಂದು ಶಾಸಕ ಹೆಚ್.ಟಿ.ಮಂಜು ತಮ್ಮ ಸಂತಾಪ ಸೂಚಿಸಿದ್ದಾರೆ.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *