ಕೊರಟಗೆರೆ :- ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಎರಡು ಕರಡಿಗಳು ಪ್ರತ್ಯೇಕವಾಗಿ ಕೊರಟಗೆರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾದಂತಾಗಿದೆ.
ಕೊರಟಗೆರೆ ಪಟ್ಟಣದ ಪ್ರಮುಖ ರಾಜ್ಯ ರಸ್ತೆ ಮಧುಗಿರಿ – ತುಮಕೂರು ಪ್ರಮುಖ ರಸ್ತೆಯಲ್ಲಿ ಒಂದು ಕರಡಿ ಕಾಣಿಸಿಕೊಂಡರೆ ಕಾಳಿದಾಸ ಪ್ರೌಢಶಾಲೆಯ ಹಿಂಬಾಗದ ರಸ್ತೆಯಲ್ಲಿ ಮತ್ತೊಂದು ಕರಡಿ ಕಾಣಿಸಿಕೊಂಡಿದ್ದು ರಾತ್ರಿ ವೇಳೆ ಸಾರ್ವಜನಿಕರು ಓಡಾಡಲು ಭಯ ಮೂಡಿದಂತಾಗಿದೆ.
ಕಾಡಮೃಗಗಳು ಇತ್ತೀಚಿಗೆ ಆಹಾರ ಅರಸಿ ನಾಡಿನತ್ತ ದಾವಿಸುತ್ತಿದ್ದು, ಇತ್ತೀಚಿಗೆ ಚಿರತೆ ಎರಡು ಮೂರು ಕಡೆ ದಾಳಿ ನಡೆಸಿದ್ದು, ಸೋಮವಾರ ರಾತ್ರಿ ಕೊರಟಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎರಡು ಕಡೆ ಕರಡಿ ಪ್ರತ್ಯಕ್ಷವಾಗಿರುವುದು ರಾತ್ರಿ ವೇಳೆ ಸಾರ್ವಜನಿಕರು ಪ್ರಯಾಣ ಬೆಳೆಸಲು ಚಿಂತಿಸುವಂತಾಗಿದೆ.

ವನ್ಯಜೀವಿಗಳು ನಾಡಿನತ್ತ ಬರಲು ಮೂಲ ಕಾರಣ ಗಣಿಗಾರಿಕೆ ಎನ್ನಲಾಗುತ್ತಿದ್ದು, ಇತ್ತೀಚಿಗೆ ಸತತವಾಗಿ ಕಾಡುಪ್ರಾಣಿಗಳು ಗ್ರಾಮಗಳತ್ತ ಸಾಗುತ್ತಿದ್ದು, ಕಾಡು ಸೇರಿದಂತೆ ಗುಡ್ಡಗಾಡು ಪ್ರದೇಶಗಳು ಗಣಿಗಾರಿಕೆಯಿಂದ ನಶಿಸುತ್ತಿದ್ದು, ನೀರು ಹಾಗೂ ಆಹಾರ ಅರಸಿ ಅನಿವಾರ್ಯವಾಗಿ ಗ್ರಾಮಗಳತ್ತ ಧಾವಿಸುತ್ತಿರುವುದು ವಿಪರ್ಯಾಸವೇ ಸರಿ ಎನ್ನಲಾಗಿದೆ.

ಕೊರಟಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎರಡು ಕಡೆ ಪ್ರತ್ಯೇಕವಾಗಿ ರಾತ್ರಿ ವೇಳೆ ಕರಡಿಗಳು ರಾಜ ಗಾಂಭೀರ್ಯವಾಗಿ ನಡೆದಾಡುತ್ತಿರುವುದು ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಯಾವುದೇ ಭಯವಿಲ್ಲದೆ ರಸ್ತೆಯಲ್ಲಿ ಬೀದಿ ದೀಪಗಳ ನಡುವೆ ನಡೆದಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದಂತಾಗಿದೆ.
– ಶ್ರೀನಿವಾಸ್ , ಕೊರಟಗೆರೆ.