ಹೆಬ್ಬಾಳು, ಜೂನ್ 5, 2025: ವಿಶ್ವ ಪರಿಸರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದ ಹೆಬ್ಬಾಳು ಸರ್ಕಾರಿ ಪ್ರೌಢಶಾಲೆ ಹಾಗೂ ಗ್ರೀನರಿ ಟ್ರಸ್ಟ್ ಬೇಲೂರು, ಪರಿಸರ ಸಂರಕ್ಷಣೆಯ ಪ್ರತೀಕವಾಗಿ ಹತ್ತಾರು ಗಿಡಗಳನ್ನು ನೆಡುವ ಮೂಲಕ ಈ ದಿನದ ಮಹತ್ವವನ್ನು ಒತ್ತಿಹೇಳಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಧ್ರುವಕುಮಾರಿ ಅವರು ನೆರವೇರಿಸಿದರು. ಗಿಡ ನೆಡುವ ಕಾರ್ಯಕ್ರಮಕ್ಕೆ ಗ್ರೀನರಿ ಟ್ರಸ್ಟ್ ಅಧ್ಯಕ್ಷ ಶ್ರೀ ಯುವರಾಜ್ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಪರಿಸರ ಅರಿವಿನ ವಿಸ್ತರಣೆ
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ರಾಜೇಗೌಡ ಅವರು ಪರಿಸರ ಸಂರಕ್ಷಣೆ, ಓಜೋನ್ ಪದರದ ಶಿಥಿಲತೆ, ಪ್ಲಾಸ್ಟಿಕ್ನ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧನಾತ್ಮಕ ಮಾತನಾಡಿ, ಶಾಲೆಯ ಪರಿಸರ ಶುದ್ಧತೆಗಾಗಿ ಪ್ರತಿಯೊಬ್ಬರೂ ಜವಾಬ್ದಾರಿಯನ್ನು ಹೊರುತ್ತಾ ಬದುಕಬೇಕೆಂದು ತಿಳಿಸಿದರು.
ವಲಯ ಅರಣ್ಯಾಧಿಕಾರಿ ಶೈಲಾ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅರಣ್ಯಗಳ ಮಹತ್ವ ಮತ್ತು ಪರಿಸರ ಉಳಿವಿನಲ್ಲಿ ಅದಕ್ಕಿರುವ ಪಾತ್ರದ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.

ಪ್ಲಾಸ್ಟಿಕ್ ವಿರುದ್ಧ ಘೋಷಣೆ
ಗ್ರೀನರಿ ಟ್ರಸ್ಟ್ ಕಾರ್ಯದರ್ಶಿ ಶ್ರೀ ಜ್ಞಾನಚಂದ್ರ ಅವರು ವಿಶ್ವ ಪರಿಸರ ದಿನದ ಇತಿಹಾಸದ ಜೊತೆಗೆ ಪ್ಲಾಸ್ಟಿಕ್ನಿಂದ ಉಂಟಾಗುವ ಅನಾಹುತಗಳ ಬಗ್ಗೆ ಚರ್ಚಿಸಿ, ಪರಿಸರ ಸಂರಕ್ಷಣೆ ಅಂದ್ರೆ ಒಂದೇ ದಿನದ ಕಾರ್ಯಕ್ರಮವಲ್ಲ; ಪ್ರತಿದಿನವೂ ಅದನ್ನು ಪಾಲಿಸಿ ನಿರ್ವಹಿಸಬೇಕೆಂದು ಹೇಳಿದರು. ಶೂನ್ಯ ಪ್ಲಾಸ್ಟಿಕ್ ಬಳಕೆ ಘೋಷಣೆಯೊಂದಿಗೆ ಸಭಿಕರಲ್ಲಿ ಅರ್ಥಪೂರ್ಣ ಸಂದೇಶವನ್ನು ಹರಡಿದರು.

ಕಾರ್ಯಕ್ರಮದ ಯಶಸ್ಸಿಗೆ ಸಹಕಾರ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಶಿಕ್ಷಕ ಕೆ.ಆರ್. ಉದಯಕುಮಾರ್ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಎಸ್ಡಿಎಂಸಿ ಅಧ್ಯಕ್ಷ ಶ್ರೀ ಸುಂದರೇಶ್, ಗ್ರೀನರಿ ಟ್ರಸ್ಟ್ನ ಉಪಾಧ್ಯಕ್ಷ ವೆಂಕಟೇಶ್, ವ್ಯವಸ್ಥಾಪಕ ಅಧ್ಯಕ್ಷ ಚಂದ್ರಶೇಖರಯ್ಯ, ಹಾಗೂ ಸದಸ್ಯರು ಪ್ರದೀಪ್, ಪರಮೇಶ್, ರಿಜ್ವಾನ್ ಪಾಷಾ ಮತ್ತಿತರರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಶಾಲೆಯ ಶಿಕ್ಷಕರಾದ ಶೋಭಾ, ಧನಂಜಯ ಮೂರ್ತಿ, ವಸಂತ, ಶೀಲಾ, ಕುಸುಮ, ಬಿ.ಎಂ. ನಾಗರಾಜು (ನಿರೂಪಣೆ), ಶಂಕರ್ ಗಾಜಿ (ಸ್ವಾಗತ) ಮತ್ತು ಧರ್ಮಪ್ಪ (ವಂದನೆ) ಈ ಕಾರ್ಯಾಚರಣೆಗೆ ಬೆನ್ನೆಲುಬಾದಂತೆ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳು ಪರಿಸರ ಗೀತೆಗಳನ್ನು ಹಾಡುವ ಮೂಲಕ ಪರಿಸರದ ಕುರಿತ ಜಾಗೃತಿಗೆ ಶಕ್ತಿ ನೀಡಿದರು.

ಈ ಕಾರ್ಯಕ್ರಮವು ಮಕ್ಕಳು, ಶಿಕ್ಷಕರು ಹಾಗೂ ಸಮುದಾಯಕ್ಕೆ ಪರಿಸರ ಸಂರಕ್ಷಣೆ ಬಗ್ಗೆ ನವಚೇತನ ನೀಡಿದ್ದು, ಶುದ್ಧ ಹಾಗೂ ಹಸಿರಾದ ಭೂಮಿಯೊಡನೆ ಭವಿಷ್ಯದ ಪೀಳಿಗೆಗೆ ಹತ್ತಿರವಾಗುವ ಒಂದು ಮಹತ್ವದ ಹೆಜ್ಜೆಯಾಗಿದೆ.
– ನೂರ್ ಅಹಮ್ಮದ್ .