ಕೆ.ಆರ್.ಪೇಟೆ,ಜೂ.05: ಬೆಂಗಳೂರಿನಲ್ಲಿ ನಡೆದ ಆರ್.ಸಿ.ಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ ದುರ್ಮರಣ ಹೊಂದಿದ ಕೆ.ಆರ್.ಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದ ಪೂರ್ಣಚಂದ್ರ ಎಂಬಾತನ ಅಂತ್ಯಕ್ರಿಯೆಯು ಪೋಷಕರ ಆಕ್ರಂಧನ ನಡುವೆ ಅಂತ್ಯಕ್ರಿಯೆಯು ಹುಟ್ಟೂರು ರಾಯಸಮುದ್ರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸುಮಾರು 2ಗಂಟೆ ಸಮಯದಲ್ಲಿ ನಡೆಯಿತು.
ಐ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 18ವರ್ಷಗಳ ಬಳಿಕ ಚಾಂಪಿಯನ್ ಆದ ಆರ್.ಸಿ.ಬಿ ತಂಡದ ಆಟಗಾರರನ್ನು ನೋಡಲು ಹಾಗೂ ವಿಜಯೋತ್ಸವ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಹೋಗಿದ್ದ ಕೆ.ಆರ್.ಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದ ಶಿಕ್ಷಕ ಆರ್.ಬಿ.ಚಂದ್ರು ಮತ್ತು ಕಾಂತಾಮಣಿ ದಂಪತಿಗಳ ಪುತ್ರ ಪೂರ್ಣಚಂದ್ರ(26) ಎಂಬಾತನು ಕಾಲ್ತುಳಿತಕ್ಕೆ ಸಿಲುಕಿ ಮೃತ ಪಟ್ಟಿದ್ದನು.

ಆತನ ಶವವನ್ನು ಕ್ರಿಕೆಟ್ ಸಂಸ್ಥೆಯ ವಿಶೇಷ ವಾಹನದಲ್ಲಿ ಗುರವಾರ ಮುಂಜಾನೆ 4ಗಂಟೆಗೆ ರಾಯಸಮುದ್ರ ಗ್ರಾಮಕ್ಕೆ ಪೊಲೀಸ್ ರಕ್ಷಣೆಯಲ್ಲಿ ತರಲಾಯಿತು. ಗುರುವಾರ ಮಧ್ಯಾಹ್ನದವರೆಗೆ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ಹಾಗೂ ಸಂಬಂಧಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಅನಂತರ ಗುರುವಾರ ಮಧ್ಯಾಹ್ನ ಸುಮಾರು 2.30ಗಂಟೆಗೆ ರಾಯಸಮುದ್ರ ಗ್ರಾಮದಲ್ಲಿ ಪೋಷಕರು ಮತ್ತು ಬಂಧುಗಳು ಆಕ್ರಂಧನದ ನಡುವೆ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು.

ಮೃತ ಪೂರ್ಣಚಂದ್ರ ಅವರ ತಂದೆ ಶಿಕ್ಷಕ ಆರ್.ಬಿ.ಚಂದ್ರು ಅವರ ಮಗ ಪೂರ್ಣಚಂದ್ರ ಕ್ರಿಕೆಟ್ ಪ್ರೇಮಿಯಾಗಿದ್ದ, ಐಪಿಎಲ್ ಪಂದ್ಯಾವಳಿಗಳು ಬೆಂಗಳೂರಿನಲ್ಲಿ ನಡೆದ ದಿನದಂದು ಹೋಗಿ ನೋಡಿಕೊಂಡು ಬರುತ್ತಿದ್ದನು. ಅದರಂತೆ ಮೊನ್ನೆ ಅಹಮದಾಬಾದ್ನಲ್ಲಿ ನಡೆದ ಐ.ಪಿ.ಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ 6ರನ್ನುಗಳ ವಿರೋಚಕ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಹೆಚ್ಚು ಸಂತಸ ವ್ಯಕ್ತಪಡಿಸಿ ಗ್ರಾಮದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಮಾಡಿದ್ದನು. ಅಲ್ಲದೆ ಬುಧವಾದ ಸಂಜೆ ಕ್ರಿಕೆಟ್ ತಂಡಕ್ಕೆ ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದದಲ್ಲಿ ಅಭಿನಂದನಾ ಕಾರ್ಯಕ್ರಮ ಇರುವುದನ್ನು ನೋಡಲು ಮೈಸೂರಿನ ಸ್ನೇಹಿತರೊಂದಿಗೆ ಹೋಗಿದ್ದನು. ಅಭಿನಂದನಾ ಸಮಾರಂಭಕ್ಕೂ ಮುನ್ನ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಅಸಂಖ್ಯಾತ ಅಭಿಮಾನಿಗಳು ಸಾಗರೋಪಾದಿಯಲ್ಲಿ ಭಾಗವಹಿಸಿದ್ದ ವೇಳೆ ನಡೆದ ಕಾಲ್ತುಳಿತದಲ್ಲಿ ಈ ಘಟನೆ ನಡೆದಿದೆ.

ಕೃಷಿ ಸಚಿವರಿಂದ ಅಂತಿಮ ದರ್ಶನ: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತ ಪೂರ್ಣಚಂದ್ರ ಮೃತ ದೇಹದ ಅಂತಿಮ ದರ್ಶನ ಪಡೆದು, ಪಾರ್ಥಿವ ಶರೀರವನ್ನು ಸ್ವಗ್ರಾಮ ರಾಯಸಮುದ್ರ ಗ್ರಾಮಕ್ಕೆ ತೆಗೆದುಕೊಂಡು ಹೋಗಲು ವ್ಯವಸ್ಥೆ ಕಲ್ಪಿಸಿಕೊಡಲು ಅಧಿಕಾರಿಗಳ ಜೊತೆ ತಾವೇ ಮುಂದೆ ನಿಂತು ವಿಶೇಷ ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿದರು.

ಮೃತ ಆರ್.ಸಿ.ಬಿ. ಅಭಿಮಾನಿ ಪೂರ್ಣಚಂದ್ರನ ಅಂತ್ಯಸಂಸ್ಕಾರದಲ್ಲಿ ಶಾಸಕ ಹೆಚ್.ಟಿ.ಮಂಜು, ತಹಸೀಲ್ದಾರ್ ಎಸ್.ಯು.ಅಶೋಕ್, ಸಮಾಜ ಸೇವಕರಾದ ಆರ್.ಟಿ.ಓ.ಮಲ್ಲಿಕಾರ್ಜುನ್, ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯ್ರಾಮೇಗೌಡ, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ತಾಲ್ಲೂಕು ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಸುಜೇಂದ್ರಕುಮಾರ್ ಸೇರಿದಂತೆ ಹಲವು ಗಣ್ಯರು ಅಂತ್ಯಸAಸ್ಕಾರದಲ್ಲಿ ಭಾಗವಹಿಸಿ ತಮ್ಮ ಸಂತಾಪ ಸೂಚಿಸಿದರು. ಅಂತ್ಯಸಂಸ್ಕಾರದಲ್ಲಿ ಆರ್.ಸಿ.ಬಿ. ಅಭಿಮಾನಿಗಳು ತಾಲ್ಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಅಂತಿಮ ದರ್ಶನ ಪಡೆದರು.

ನನಗೆ ಒಬ್ಬನೇ ಮಗ ಇದ್ದಿದ್ದು. ನನ್ನ ಮಗನ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದೆ. ನನ್ನ ಕನಸು ಎಲ್ಲಾ ನನ್ನ ಮಗ ಬಿಟ್ಟು ಹೋಗ್ಬಿಟ್ಟ. ಅವನಿಗೆ ಮದುವೆ ಮಾಡಲು ಹುಡುಗಿ ನೋಡ್ತಾ ಇದ್ದೋ. ನಿನ್ನೆ ಕೂಡ ಹುಡುಗಿ ನೋಡಿಕೊಂಡು ಬೆಂಗಳೂರಿಗೆ ಹೋಗಿದ್ದಾನೆ. ಸದ್ಯದಲ್ಲಿಯೇ ಅವನಿಗೆ ಮದುವೆ ನಿಶ್ಚಿಯ ಮಾಡ್ತಾ ಇದ್ದೋ, ಅಕ್ಷತೆ ಹಾಕಿ ಹರಸಬೇಕಿದ್ದ ಬಂಧುಗಳು ಮತ್ತು ಸ್ನೇಹಿತರು ವಿಧಿಯಾಟದ ಕಾರಣದಿಂದ ಆತನಿಗೆ ಎಲ್ಲರೂ ಅವನಿಗೆ ಹಾರ ಹಾಕುವಂತಾಗಿದೆ ಎಂದು ನೋವಿನ ನುಡಿಗಳನ್ನಾಡಿದರು. ನನ್ನ ಮಗನ ಸೇರಿದಂತೆ 11ಮಂದಿ ಕ್ರಿಕೆಟ್ ಪ್ರೇಮಿಗಳ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ. ಏಕೆಂದರೆ ಪೂರ್ವ ತಯಾರಿ ಇಲ್ಲದೆ ಕ್ರಿಕೆಟ್ ತಂಡಕ್ಕೆ ಅಭಿನಂದನಾ ಸಮಾರಂಭ ಆಯೋಜಿಸಿದ್ದು ಘಟನೆಗೆ ಪ್ರಮುಖ ಕಾರಣವಾಗಿದೆ. ಘಟನೆಯಲ್ಲಿ ಶ್ರೀಮಂತರ ಮಕ್ಕಳು ಯಾರೂ ಸತ್ತಿಲ್ಲ. ಎಲ್ಲಾ ಸತ್ತಿರೋದು ಬಡವರ ಮಕ್ಕಳಾಗಿದ್ದಾರೆ.ದೊಡ್ಡೋರ ಮಕ್ಕಳನ್ನು ಸೆಕ್ಯುರಿಟಿ ಮಾಡಿಕೊಂಡು ಕರೆದುಕೊಂಡು ಹೋಗಿದ್ದಾರೆ. ಬಡವರ ಮಕ್ಕಳಿಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸದೇ ಸಾವನ್ನಪ್ಪಲು ಕಾರಣರಾಗಿದ್ದಾರೆ.
-ಆರ್.ಬಿ.ಚಂದ್ರು ಮೃತ ಪೂರ್ಣಚಂದ್ರ ತಂದೆ

ಸರ್ಕಾರವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವಿಜಯೋತ್ಸವಕ್ಕೆ ಒಂದೆರಡು ದಿನಗಳ ನಂತರ ಅವಕಾಶ ನೀಡಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ. 18ವರ್ಷಗಳಿಂದ ಜಾತಕ ಪಕ್ಷಿಗಳಂತೆ ಆರ್.ಸಿ.ಬಿ ಗೆಲುವಿಗೆ ಕಾಯುತ್ತಿದ್ದ ಲಕ್ಷಾಂತರ ಅಭಿಮಾನಿಗಳು ಒಮ್ಮೆಗೆ ಕನಿಷ್ಠ 10ಲಕ್ಷ ಜನ ಒಂದೆಡೆ ಸೇರಿದ ಕಾರಣ ಈ ಕಾಲ್ತುಳಿತ ಉಂಟಾಗಿ 11ಮಂದಿ ಅಮಾಯಕ ಆರ್.ಸಿ.ಬಿ ಕ್ರಿಕೆಟ್ ಪ್ರೇಮಿಗಳು ಸಾವನ್ನಪ್ಪುವಂತಾಗಿದೆ ಇದರ ಸಂಪೂರ್ಣ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು.
- ಮಡುವಿನಕೋಡಿ ಉಮೇಶ್, ಕೆ.ಆರ್.ಪೇಟೆ.
– ಶ್ರೀನಿವಾಸ್ ಆರ್.