ರಾಮನಾಥಪುರ, ಜೂನ್ 5, 2025: ಅರಕಲಗೂಡು ತಾಲೂಕು ರಾಮನಾಥಪುರದ ಪ್ರಸಿದ್ಧ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ತಹಶೀಲ್ದಾರ್ ಕೆ.ಸಿ. ಸೌಮ್ಯ ಅವರು ಭೇಟಿ ನೀಡಿ, ದೇವಸ್ಥಾನದ ಪರಿಸರ ಹಾಗೂ ಇತ್ತೀಚಿನ ಮಳೆಹಾನಿಯ ವಿವರಗಳನ್ನು ಪರಿಶೀಲಿಸಿದರು.
ತಾಲೂಕಿನ ಹಲವಾರು ಹೊಯ್ಸಳ ಶಿಲ್ಪಕಲೆಯ ದೇವಾಲಯಗಳಲ್ಲಿ ರಾಮನಾಥಪುರವು ವಿಶೇಷವಾಗಿ ಪ್ರಸಿದ್ಧಿ ಪಡೆದ ಯಾತ್ರಾ ಕ್ಷೇತ್ರವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಕಾವೇರಿ ನದಿಯ ದಂಡೆಯಲ್ಲಿರುವ ಈ ಪವಿತ್ರ ಸ್ಥಳದಲ್ಲಿ ಹತ್ತಾರು ದೇವಾಲಯಗಳಿದ್ದು, ವರ್ಷಂಪ್ರತಿ ಭಕ್ತರ ನಂಬಿಕೆಗೆ ತೊಡಗಿವೆ.

ರಾಜಗೋಪುರದ ಮಳೆಹಾನಿಗೆ ಶೀಘ್ರ ಪರಿಹಾರ
ಇತ್ತೀಚಿನ ಭಾರಿ ಮಳೆಯಿಂದ ರಾಮನಾಥಪುರ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ರಾಜಗೋಪುರದ ಕೆಲವು ಗೊಂಬೆಗಳು ಶಿಥಿಲವಾಗಿ ಬಿದ್ದು ಹೋಗಿದ್ದರಿಂದ, ಸಂಬಂಧಿಸಿದ ಇಲಾಖೆಗೆ ತ್ವರಿತ ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರದ ಶಾಸಕರಾದ ಎ. ಮಂಜು ಅವರು ಮೈಸೂರಿನ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಿದ್ದು, ಶಿಥಿಲ ಗೊಂಬೆಗಳನ್ನು ಪುನರ್ ನಿರ್ಮಾಣ ಮಾಡುವ ಸಲುವಾಗಿ ಅಂದಾಜು ಪಟ್ಟಿ ಸಿದ್ಧಪಡಿಸಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗಿದೆ.
ಈ ಕುರಿತು ತಹಶೀಲ್ದಾರ್ ಸೌಮ್ಯ ಅವರು ಮಾತನಾಡುತ್ತಾ, “ಗೋಪುರದ ಉಳಿದ ಶಿಥಿಲಗೊಂಡ ಭಾಗಗಳ ಪರಿಶೀಲನೆ ನಡೆದು, ಮುಂಜಾಗೃತ ಕ್ರಮವಾಗಿ ಗಿಡಗಂಟೆಗಳನ್ನು ತೆಗೆಸುವ ಕಾರ್ಯವೂ ಕೈಗೊಂಡಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಈ ಕುರಿತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ,” ಎಂದರು.

ಶ್ರೀಮಠದ ಅಭಿವೃದ್ಧಿಗೆ ಸಲಹೆ, ಸಹಕಾರ
ಶ್ರೀ ರಾಘವೇಂದ್ರಸ್ವಾಮಿ ಮಠದ ಪ್ರವೇಶ ಪಡೆದು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಹಶೀಲ್ದಾರ್ ಸೌಮ್ಯ ಅವರು, ಮಠದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಭೋಜನ ಶಾಲೆ ಹಾಗೂ ರೂಮುಗಳ ಅಭಿವೃದ್ಧಿಗೆ ಅಗತ್ಯ ಸಲಹೆ ಹಾಗೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಠದ ಪೀಠಾಧಿಪತಿ ವಿ. ಕನಕಾಚಾರ್ಯರು ಪೂಜಾ ಕೈಂಕರ್ಯ ನೆರವೇರಿಸಿದರು.