ಅರಕಲಗೂಡು- ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ: ತೀವ್ರ ಜನಸಾಮಾನ್ಯ ಅಸಮಾಧಾನ

ಅರಕಲಗೂಡು: ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಯದೇ ಇರುವ ಸ್ಥಿತಿ ನಿರ್ಮಾಣವಾಗಿದೆ. ಇದು ಗ್ರಾಮೀಣ ಪ್ರಜಾಪ್ರಭುತ್ವದ ಮೂಲ ತತ್ವಗಳ ವಿರುದ್ಧವಾದ ವರ್ತನೆ ಎಂಬ ಆತಂಕ ಜೋರಾಗಿದೆ.

ಸಂವಿಧಾನದ ಅನುಚ್ಛೇದ 243E ಪ್ರಕಾರ, ಪ್ರತಿ ಪಂಚಾಯತ್‌ಗೆ ಐದು ವರ್ಷಗಳ ಅವಧಿ ನಿಶ್ಚಿತವಾಗಿದ್ದು, ಅವಧಿ ಮುಗಿಯುವುದಕ್ಕೆ ಮುನ್ನವೇ ಚುನಾವಣೆಗಳು ನಡೆಯಬೇಕು. ಆದರೆ ಈ ನಿಯಮವನ್ನು ಲಂಗಘಿಸುವ ಮೂಲಕ ಪ್ರಥಮವಾಗಿ ಬಿಜೆಪಿ ನೇತೃತ್ವದ ಸರ್ಕಾರ ಮತ್ತು ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಗಳು ಚುನಾವಣೆಯ ನಿರ್ಧಾರವನ್ನು ನಿರಂತರವಾಗಿ ಮುಂದೂಡುತ್ತಲೇ ಬಂದಿವೆ.

ಈ ತಟಸ್ಥತೆಗೂ ಮೊದಲು ಬಿಜೆಪಿ ಸರ್ಕಾರವು 1993ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ತರಲು ಮುಂದಾಗಿತ್ತು. ಕ್ಷೇತ್ರ ವಿಂಗಡನೆ ಅಯೋಗ ರಚನೆಯೊಂದಿಗೆ ಚುನಾವಣೆಯನ್ನು ಮುಂದೂಡಲಾಯಿತು. ಇದಕ್ಕೆ ಕಾಂಗ್ರೇಸಿನ ಸಭಾತ್ಯಾಗ ಸಹಕಾರಿಯಾಗಿತ್ತು ಎಂಬ ಆರೋಪವೂ ಇದೆ.

ಅದಾದ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕೂಡ ಚುನಾವಣೆ ನಡೆಸುವ ಬದಲು ವಿವಿಧ ಕಾರಣಗಳನ್ನು ಹುಟ್ಟುಹಾಕುತ್ತಾ ಮುಂದೂಡುತ್ತಿದೆ. ರಾಜ್ಯ ಚುನಾವಣಾ ಆಯೋಗ ಕೂಡ ಚುನಾವಣೆಗೆ ಅವಕಾಶ ಕೋರಿ ನೇರವಾಗಿ ಉಚ್ಚನ್ಯಾಯಾಲಯದ ಮೆಟ್ಟಿಲೇರಿದೆ ಎಂಬುದು ದೇಶದ ರಾಜಕೀಯ ಇತಿಹಾಸದಲ್ಲಿ ಅಪರೂಪ. ನ್ಯಾಯಾಲಯವು ಸ್ಪಷ್ಟ ಆದೇಶ ನೀಡಿದರೂ ರಾಜ್ಯ ಸರ್ಕಾರ ಅದನ್ನು ಪಾಲಿಸಿಲ್ಲ. ಮೇ 30ರಂದು ಮೀಸಲಾತಿ ಪಟ್ಟಿ ಪ್ರಕಟವಾಗುವುದು ಎಂದು ರಾಜ್ಯ ಸರ್ಕಾರ ನೀಡಿದ್ದ ಭರವಸೆ ಖಾಲಿ ಮಾತಾಗಿರುವಂತಾಗಿದೆ.

ಇದರ ಪರಿಣಾಮವಾಗಿ, ವರ್ಷಗಳಿಂದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸ್ಪರ್ಧಿಸಲು ಕಾಯುತ್ತಿದ್ದ ಹಲವು ಅಭ್ಯರ್ಥಿಗಳ ನಿರೀಕ್ಷೆ ಭಂಗವಾಗಿದೆ. ಇದರಿಂದಾಗಿ “ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ” ಎಂಬ ಹಳೇ ಮಾತು ಈ ಚುನಾವಣಾ ಸ್ಥಗಿತದ ಹಿನ್ನೆಲೆಯಲ್ಲಿಯೂ ಅನ್ವಯವಾಗುತ್ತಿದೆ.

ಪಂಚಾಯತ್ ರಾಜ್ ವ್ಯವಸ್ಥೆಯ ಮುಖ್ಯ ತತ್ವವೇ ಮಹಿಳೆ, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದು. ಇದು ರಾಜಕೀಯದ ಮೂಲಕ ಸಮಾಜ ಬದಲಾವಣೆಯ ಕ್ರಾಂತಿಕಾರಿ ಯಂತ್ರ. ಆದರೆ ಈವರೆಗೆ ಅದನ್ನು ನಿರ್ಲಕ್ಷಿಸಿರುವುದು ಸಾಮಾಜಿಕ ನ್ಯಾಯದ ಧಕ್ಕೆಯಾಗಿರುವಂತಾಗಿದೆ.

“ಸಂವಿಧಾನದ ಉಳಿವುಗಾಗಿ ಹೋರಾಟ” ಎಂಬ ಘೋಷಣೆಯೊಂದಿಗೆ ವೇದಿಕೆಗಳನ್ನು ಹರಿದಾಡುವ ರಾಜಕೀಯ ನಾಯಕರು ಈ ತತ್ವಗಳನ್ನು ಮರೆತಿದೆಯೆ ಎಂಬ ಪ್ರಶ್ನೆಗಳು ಉತ್ಥಾಪವಾಗುತ್ತಿವೆ. ಈ ಹಿನ್ನಲೆಯಲ್ಲಿ, ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ ಗ್ರಾಮಸ್ವರಾಜ್ಯದ ಕನಸು ತೊಡೆಯಲಾಗುತ್ತಿರುವುದು ವಿಷಾದಕರ.

ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ರಾಜಕಾರಣ ಆರಂಭಿಸಿ ಮುಖ್ಯಮಂತ್ರಿ ಪಟ್ಟವರೆಗೆ ಏರಿದ ಸಿದ್ದರಾಮಯ್ಯನವರು ಕೂಡ ಈ ವಿಚಾರದಲ್ಲಿ ಮೌನ ವಹಿಸಿರುವುದು ಆಶ್ಚರ್ಯ ಹುಟ್ಟುಮಾಡುತ್ತಿದೆ. ಇತರ ಪಕ್ಷಗಳ ಶಾಸಕರು ಕೂಡ ಧ್ವನಿ ಎತ್ತದೇ ಉಳಿದಿರುವುದು, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕೆಳಮಟ್ಟದ ನಾಯಕರಿಗೆ ಅಧಿಕಾರ ಹಂಚಿಕೊಳ್ಳುವ ಆಸಕ್ತಿ ಕೊರತೆ ಎಂಬುದನ್ನು ತೋರಿಸುತ್ತದೆ. ಇದರಿಂದಾಗಿ ಈ ವ್ಯವಸ್ಥೆ ಅಧಿಕಾರಿಗಳ ಕೈಗೆ ಸೀಮಿತವಾಗಿ ಬದಲಾಗುತ್ತಿದೆ.

ಚುನಾವಣೆಗಳನ್ನು ಶೀಘ್ರವೇ ಘೋಷಿಸಿ ಜನರ ಕೈಗೆ ಮತ್ತೆ ಅಧಿಕಾರ ಹಸ್ತಾಂತರಿಸುವುದು, ಪ್ರಜಾಪ್ರಭುತ್ವದ ಪುನರ್‌ಜಾಗೃತಿ ಹಾಗೂ ಸಂವಿಧಾನದ ಗೌರವ ಉಳಿಸುವ ದಾರಿ ಎಂಬುದು ಎಲ್ಲರ ತಿಳಿವಿಗೆ ಬರಬೇಕು.

— ವರದಿ: ಕೆಲ್ಲೂರು ಶಶಿಕುಮಾರ್, ಅರಕಲಗೂಡು

Leave a Reply

Your email address will not be published. Required fields are marked *