ಬೇಲೂರು: ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿರುವ ಫ್ಲೆಕ್ಸ್ಗಳನ್ನು ನಗರ ಪುರಸಭೆ ಆವರಣದ ಉದ್ಯಾನವನದಲ್ಲಿ ಎಲ್ಲೆಂದರಲ್ಲಿ ಬಿಸಾಕಿ ಬಿಟ್ಟ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಇದನ್ನು ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಮಾಡಿದ ಅಗೌರವ ಎಂದು ದಲಿತ ಮುಖಂಡರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ.
ಸಂವಿಧಾನ ಶಿಲ್ಪಿಯಾಗಿರುವ ಡಾ. ಅಂಬೇಡ್ಕರ್ ಅವರ ಜನ್ಮದಿನದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಬಳಸಿದ ಪ್ಲೆಕ್ಸ್ಗಳು, ಕೆಲ ರಾಜಕೀಯ ನಾಯಕರ ಜೊತೆಗಿನ ಭಾವಚಿತ್ರಗಳೊಂದಿಗೆ, ಕಾರ್ಯಕ್ರಮ ಮುಗಿದ ನಂತರ ನಿರ್ಲಕ್ಷ್ಯವಾಗಿ ನೆಲದ ಮೇಲೆ ಬಿಸಾಕಲಾಗಿದ್ದು, ಅದು ಪುರಸಭೆಯ ಉದ್ಯಾನವನದಲ್ಲಿ ಕಸದ ರಾಶಿಯಂತಿದ್ದು, ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಆಕ್ರೋಶ:
“ಅಂಬೇಡ್ಕರ್ ಅವರು ಇಡೀ ವಿಶ್ವದ ಗೌರವಕ್ಕೆ ಪಾತ್ರರಾದ ವ್ಯಕ್ತಿ. ಅವರಿಗೆ ಸಲ್ಲಬೇಕಾದ ಗೌರವವನ್ನು ಕೇವಲ ಕಾರ್ಯಕ್ರಮ ಮುಗಿದ ನಂತರ ನೆಲಕ್ಕೆ ಹಾಕುವ ಕ್ರಮದಿಂದ ಅವಮಾನಿಸಲಾಗಿದೆ,” ಎಂದು ಸ್ಥಳೀಯರು ಆರೋಪಿಸಿದರು.
ದಲಿತ ಮುಖಂಡರ ಎಚ್ಚರಿಕೆ:
“ಬೇಲೂರು ತಾಲ್ಲೂಕಿನಲ್ಲಿ ಸುಮಾರು 65 ಸಾವಿರಕ್ಕೂ ಹೆಚ್ಚು ದಲಿತರು ಹಾಗೂ ಅಲ್ಪಸಂಖ್ಯಾತ ಸಮುದಾಯದವರು ವಾಸಿಸುತ್ತಿದ್ದಾರೆ. ಈ ರೀತಿಯ ವರ್ತನೆ ನಮ್ಮ ಸಮುದಾಯದ ಗೌರವಕ್ಕೆ ಧಕ್ಕೆ ತರಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಎಚ್ಚೆತ್ತು, ಅವಹೇಳನಕಾರಿ ಸ್ಥಿತಿಯಲ್ಲಿ ಇರುವ ಫ್ಲೆಕ್ಸ್ಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಕಠಿಣ ಹೋರಾಟ ನಡೆಸಬೇಕಾಗುತ್ತದೆ,” ಎಂದು ದಲಿತ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತರು ಎಚ್ಚರಿಸಿದ್ದಾರೆ.

ಸಮಾಜದ ಪ್ರತಿಕ್ರಿಯೆ:
ಈ ಘಟನೆ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪುರಸಭೆಯ ನಿರ್ಲಕ್ಷ್ಯ ಮತ್ತು ಅಸಂವೇದನಾಶೀಲತೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
– ನೂರ್ ಅಹಮ್ಮದ್