ಹಾಸನ- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತ ನಿಜಕ್ಕೂ ದುಃಖದ ಸಂಗತಿ ಯಾಗಿದೆ. ಸರ್ಕಾರದ ತಪ್ಪು ನಿರ್ಧಾರಗಳು ಮತ್ತು ಆಯೋಜನೆಯಲ್ಲಿನ ಮುನ್ನೆಚ್ಚರಿಕೆ ಕೊರತೆ ಕಾರಣ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಮಾಣಿಕ ಪೋಲಿಸ್ ಅಧಿಕಾರಿ, ಬೆಂಗಳೂರು ಕಮಿಷನರ್ ಆಗಿದ್ದ ದಯಾನಂದ್ ಅವರನ್ನು ಅಮಾನತು ಮಾಡಿರುವುದು ಸರ್ಕಾರದ ತಪ್ಪು ನಿರ್ಧಾರವಾಗಿದೆ. ಅವರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ. ಈ ಅಮಾನತು ನನಗೆ ತೀವ್ರ ನೋವು ತಂದಿದೆ ಎಂದರು.

ಘಟನೆಯ ದಿನದ ಬೆಳಗಿನ ಜಾವ 3-4 ಗಂಟೆಯವರೆಗೆ ಪಟಾಕಿಗಳನ್ನು ಸಿಡಿಸಲಾಗುತ್ತಿತ್ತು ಸಂಭ್ರಮಾಚರಣೆ ನಡೆಯುತ್ತಿತ್ತು ಪೋಲಿಸರ ಇಡೀ ರಾತ್ರಿ ಮಲಗಿಲ್ಲ. ಇಂತಹ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಏಕೆ ಆಯೋಜಿಸಿದರು? ಸರ್ಕಾರ ಒಂದೇ ದಿನದಲ್ಲಿ ಎಲ್ಲವನ್ನೂ ಮಾಡಬೇಕೆಂದು ಏಕೆ ತೀರ್ಮಾನಿಸಿತು? ಎಂದು ಪ್ರಶ್ನಿಸಿದರು. ದುರಂತದಲ್ಲಿ ಮಕ್ಕಳನ್ನ ಕಳೆದುಕೊಂಡ ಕುಟುಂಬಗಳ ಕಷ್ಟವನ್ನು ಅರಿಯಬೇಕು, ಮಕ್ಕಳ ನೆನಪು ಬಂದರೆ ಆ ಪೋಷಕರು ಹೇಗೆ ತಡೆದುಕೊಳ್ಳುತ್ತಾರೆ? 25 ಲಕ್ಷ ಕೊಟ್ಟು ಜೀವ ತಂದುಕೊಡಲು ಸಾಧ್ಯವೇ? ಸರ್ಕಾರ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ರೇವಣ್ಣ, ಆರ್ಬಿಸಿಯವರು 25 ಲಕ್ಷ ರೂ. ಮತ್ತು ಕೆಎಸ್ಸಿಎ ಸಂಸ್ಥೆ 25 ಲಕ್ಷ ರೂ. ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಈ ದುರಂತದ ಬಗ್ಗೆ ತನಿಖೆ ನಡೆಸಿ, ಜವಾಬ್ದಾರರನ್ನು ಗುರುತಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆಗೆ ಶಾಸಕರಾದ ಸ್ವರೂಪ್ ಪ್ರಕಾಶ್, ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್ ಇದ್ದರು.
– ಮಾಲಾ, ಹಾಸನ.