ತುಮಕೂರು : ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ.ದಯನಂದ್ ಅವರನ್ನು ನಿರ್ದಾಕ್ಷಿಣ್ಯವಾಗಿ ಅಮಾನತ್ತು ಮಾಡಿರುವ ಸರ್ಕಾರದ ವಿರುದ್ಧ ತುಮಕೂರು ಜಿಲ್ಲಾ ನಾಯಕ ಸಮಾಜದ ಒಕ್ಕೂಟದ ವತಿಯಿಂದ ಇಂದು ತುಮಕೂರು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ನಾಯಕ ಸಾಮಾಜದ ಮುಖಂಡರಾದ ಮಾರಣ್ಣ ಪಾಳೇಗಾರ್ ಮಾತನಾಡಿ ಇತ್ತೀಚಿಗೆ ಬೆಂಗಳೂರು ಆರ್.ಸಿ.ಬಿ ಕ್ರಿಕೆಟ್ ತಂಡವು ಐ.ಪಿ.ಎಲ್. ಮ್ಯಾಚ್ ಗೆದ್ದ ಹಿನ್ನೆಲೆಯಲ್ಲಿ ಸದರಿ ತಂಡಕ್ಕೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಹಾಗೂ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಭಾಗವಹಿಸುವವರ ಪೈಕಿ 11 ಜನ ಯುವಕರು ಕಾಲ್ತುಳಿತಕ್ಕೆ ಒಳಗಾಗಿ ಸಾವಿಗೀಡವಾಗಿರುವುದು ಅತ್ಯಂತ ಅಮಾನವೀಯ ಮತ್ತು ಅಮಾನುಷ ಕೃತ್ಯವಾಗಿರುತ್ತದೆ. ಜೀವನದ ಬಗ್ಗೆ ಉತ್ತಮ ಬದುಕಿನ ಕನಸು ಕಾಣುವ ವಯಸ್ಸಿನಲ್ಲಿ ಸಾವಿಗೀಡಾಗಿರುವ ಬಹುತೇಕರ ವಯಸ್ಸು 18 ರಿಂದ 25 ವರ್ಷ ವಯಸ್ಸುವುಳ್ಳ ಬಿಸಿ ರಕ್ತದ ನವ ಯುವಕರು ಸಾವಿಗೀಡಾಗಿರುವುದು ಈ ದೇಶದ ಪ್ರತಿಯೊಬ್ಬ ನಾಗರೀಕರ ಮನಸ್ಸನ್ನು ಕಲಕಿದೆ. ಇಂತಹ ದುರ್ಘಟನೆಯ ಅವಘಡವನ್ನು ಮರೆಮಾಚಲು ದಕ್ಷ ಹಾಗೂ ಪ್ರಾಮಾಣಿಕ ಹಾಗೂ ಭ್ರಷ್ಟಮುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ದಯಾನಂದರವರನ್ನು ಅಮಾನತ್ತು ಮಾಡಿರುವುದು ಮತ್ತೊಂದು ಖಂಡನೀಯ ವಿಚಾರವಾಗಿದೆ ಎಂದರು.

ಅದರಲ್ಲೂ ವಿಶೇಷವಾಗಿ ಬಿ.ದಯಾನಂದರವರು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ವರ್ಗಾವಣೆಯಾಗಿ ಬಂದ ನಂತರ ಬೆಂಗಳೂರು ನಗರದಲ್ಲಿ ನಾಗರೀಕರು ನೆಮ್ಮದಿಯಿಂದ ಬದುಕನ್ನು ಕಾಣುತ್ತಿದ್ದಾರೆ, ಇತ್ತೀಚೆಗೆ ಯಾವುದೇ ರಾಬರಿ, ದೊಂಬಿ, ಗಲಾಟೆಗಳು ನಡೆದಿಲ್ಲ ಅದರ ಕೀರ್ತಿ ಬಿ.ದಯಾನಂದರವರಿಗೆ ಸಲ್ಲುತ್ತದೆ. ರಾತ್ರಿ ಹಗಲೆನ್ನದೆ ಕೆಲಸ ಮಾಡಿಕೊಂಡು ಬರುತ್ತಿದ್ದ ಬಿ.ದಯಾನಂದ, ರವರು ತಮ್ಮ ಸೇವಾ ಅವಧಿಯಲ್ಲಿ ಒಂದು ರಜೆಯನ್ನು ಕೂಡ ಪಡೆಯದೆ ಕರ್ತವ್ಯ ನಿಷ್ಠೆಯನ್ನು ಮೆರೆದಿದ್ದಾರೆ ಎಂದರು.

ನಾಯಕ ಸಮಾಜದ ಮತ್ತೊಬ್ಬ ಮುಖಂಡರಾದ ಡಿ.ಭಾನುಪ್ರಕಾಶ್ ಮಾತನಾಡಿ ಯುವಕರ ಮಾರಣ ಹೋಮಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು. ಮಾನ್ಯ ಗೌರವಾನ್ವಿತ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಈ ಪಕರಣವನ್ನು ಸಿ.ಬಿ.ಐ ತನಿಖೆಗೆ ಒಪ್ಪಿಸಬೇಕು, ಪ್ರಾಮಾಣಿಕ ದಕ್ಷ ಅಧಿಕಾರಿಯಾಗಿರುವ ಬಿ.ದಯಾನಂದ, ಐ.ಪಿ.ಎಸ್ ಅವರ ಅಮಾನತ್ತನ್ನು ಕೂಡಲೇ ವಾಪಸ್ ಪಡೆಯುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಕ್ತ ಸೂಚನೆ ನೀಡಬೇಕು ಎಂದು ಈ ಮೂಲಕ ಆಗ್ರಹಿಸುತ್ತಿದ್ದೇವೆಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಆರ್.ತಿಮ್ಮರಾಜು,ಮಾರಣ್ಣ ಪಾಳೇಗಾರ್, ಭಾನುಪ್ರಕಾಶ್, ಅಂಜಿನಾಯಕ , ಶಿವುನಾಯಕ, ತಿಮ್ಮರಾಜು, ಶಂಕರ್ ಹಾಗೂ ನಾಯಕ ಸಮಾಜದ ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ