ಹಾಸನ- ಬಾನು ಮುಷ್ತಾಕ್ ಅವರಿಗೆ ನಾಗರಿಕ ಸನ್ಮಾನ- ನಾಡೋಜ ಬರಗೂರು ರಾಮಚಂದ್ರಪ್ಪ ಅವರಿಂದ ಕಾರ್ಯಕ್ರಮ ಉದ್ಘಾಟನೆ

ಹಾಸನ- ಸಾಂಸ್ಕೃತಿಕವಾಗಿ ಹಾಸನ ಜಿಲ್ಲೆ ನಾಡು, ದೇಶಕ್ಕೆ ಎರಡು ಬಹುದೊಡ್ಡ ಕೊಡುಗೆ ನೀಡಿದೆ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಗರದ ಕಲಾಭವನದಲ್ಲಿ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತ್ತಾಕ್ ಅವರಿಗೆ ಹಮ್ಮಿಕೊಂಡಿದ್ದ ನಾಗರಿಕ ಸನ್ಮಾನ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಕನ್ನಡಕ್ಕೆ ಮೊದಲ ಶಿಲಾಶಾಸನ ಕೊಟ್ಟಿದ್ದು, ಎರಡು ಕನ್ನಡಕ್ಕೆ ಮೊದಲ ಬಾರಿಗೆ ಬೂಕರ್ ಪ್ರಶಸ್ತಿ ಬಂದಿರುವುದು ಈ ಜಿಲ್ಲೆಯ ಮೂಲಕ, ಬಾನು ಮುಷ್ತ್ತಾಕ್ ಕನ್ನಡದ ಕೀರ್ತಿಯನ್ನು ಜಗದಗಲಕ್ಕೆ ಬೆಳಗಿದವರು ಎಂದು ಬಣ್ಣಿಸಿದರು.

ಇವತ್ತಿನ ಸಾಮಾಜಿಕ ಸಂದರ್ಭ ಸಿನಿಕತನದಿಂದ ಕೂಡಿದೆ. ಅಂಥವರಿಗೆ ಯಾವುದೂ ರುಚಿಸಲ್ಲ. ಆತ್ಮರತಿ, ಅಹಂಕಾರ ಅರೋಚಿ ಮನೋಧರ್ಮ, ವಕ್ರ ದೃಷ್ಟಿಕೋನ ಹಾಗೂ ಸಾಂಸ್ಕೃತಿಕ ಕ್ಷೇತ್ರ ಯಾವತ್ತೂ ಸಿನಿಕತನಕ್ಕೆ ಬಲಿಯಾಗಬಾರದು ಎಂದು ಎಚ್ಚರಿಸಿದರು.

ಜಾತಿ, ಧರ್ಮ, ಭಾಷೆ ವಿಚಾರದಲ್ಲಿ ಸಮೂಹ ಸನ್ನಿ ಆವರಿಸಿದ್ದು, ವಿವೇಕ ಕಳೆದು ಹೋಗಿದೆ, ನಮಗೆ ಭಾವನೆ ಲೋಕ ಬೇಕೇ ಹೊರತು, ಭಾವೋದ್ವೇಗ ಅಲ್ಲ, ವಿವೇಕ ಮತ್ತು ಸಂವಾದ ಇರದ ಕಡೆ ಪ್ರಜಾಪ್ರಭುತ್ವ, ಸಾಂಸ್ಕೃತಿಕ ಲೋಕದ ಅನನ್ಯತೆ ಇರುವುದಿಲ್ಲ ಎಂದು ನುಡಿದರು.

ಇಂದಿನ ಪ್ರಶಸ್ತಿ, ಕನ್ನಡದ ವಿವೇಕಕ್ಕೆ ಸಿಕ್ಕ ಮನ್ನಣೆ, ಸಾಂಸ್ಕೃತಿಕ ಪರಂಪರೆಗೆ ಸಂದ ಗೌರವ, ಕ್ರಿ.ಶ.850ರಲ್ಲೇ ಕವಿರಾಜ ಮಾರ್ಗಕಾರ ಹೇಳಿದಂತೆ ಅನ್ಯ ವಿಚಾರ ಸಹಿಸೋದು ನಿಜವಾದ ಚಿನ್ನ, ಸಹಿಷ್ಣುತೆ, ಸೌಹಾರ್ದತೆ ಬೇಕು, ಕನ್ನಡಕ್ಕೆ ವಚನಕಾರರು, ಕುಮಾರವ್ಯಾಸ ಕೊಟ್ಟ ಕೊಡುಗೆ ಅಪಾರ, ಕನ್ನಡದ್ದು ದೊಡ್ಡ ಪರಂಪರೆ, ಪ್ರಜಾಸತ್ತಾತ್ಮಕ ಮನೋಧರ್ಮ ಇದ್ದರೆ ಗೌರವಿಸಲು ಸಾಧ್ಯ ಎಂದು ನುಡಿದರು.

ಬಾನು ಅವರು ಕೃತಿ ಬರೆಯದಿದ್ದರೆ ಅನುವಾದ ಆಗುತ್ತಿರಲಿಲ್ಲ, ದೀಪಾ ಭಾಸ್ತಿಯವರು ಅನುವಾದ ಮಾಡದೇ ಇದ್ದರೆ ಪ್ರಶಸ್ತಿ ಬರುತ್ತಿರಲಿಲ್ಲ. ಇದು ಕನ್ನಡದ ವಿವೇಕ ಹಾಗಾಗಿ ಇಬ್ಬರೂ ಇಲ್ಲಿ ಅಭಿನಂದನಾರ್ಹರು ಎಂದರು.

ತಮ್ಮ ಬದುಕಿದ, ಬೆಳೆದ ವಾತಾವರಣದ ತಲ್ಲಣವನ್ನು ಬಾನು ಪರೀಕ್ಷೆಗೊಡ್ಡಿ ಕನ್ನಡಕ್ಕೆ ಹೊಸ ಕಥಾ ಅಭಿವ್ಯಕ್ತಿ ನೀಡಿದರು. ಈ ಕೃತಿಯನ್ನು ಭಾಷಾಂತರ ಅಲ್ಲ, ಭಾವಾಂತರ ಮಾಡಿದ ದೀಪಾ ಅವರ ಕೆಲಸವೂ ಬಹಳ ಮಹತ್ವದ್ದು ಎಂದು ಬಣ್ಣಿಸಿದರು.

ಇದು ಎಲ್ಲ ಚಳವಳಿಗೆ ಸಂದ ಗೌರವ, ಜನ ಚಳವಳಿಗೆ ಸಾಹಿತ್ಯ ಪೂರಕವಾಗಿ, ಸಹಾನುಭೂತಿಯ ಬೆಂಬಲ ನೀಡುತ್ತದೆ. ಚಳವಳಿ ಸಂಗಾತಿಗೆ ಬೂಕರ್ ಪ್ರಶಸ್ತಿ ಬಂದಿ ರುವುದು ಕನ್ನಡ, ರೈತ, ಕಾರ್ಮಿಕ, ಮಹಿಳಾ ಚಳವಳಿಗೆ ಬೇರೆ ದಿಕ್ಕು, ಮನೋಧರ್ಮ ತೋರಿಸಿದೆ ಎಂದು ನುಡಿದರು. ಕೆಲವರು ಕೀರ್ತಿ ಶನಿಯಿಂದ ಎಲ್ಲವನ್ನೂ ಮರೆಯು ತ್ತಾರೆ. ಆದರೆ ಬಾನು ಅವರು ಈ ಸಂದರ್ಭದಲ್ಲೂ ಚಳವಳಿ, ಅದರಲ್ಲೂ ಬಂಡಾಯ ಚಳವಳಿ ಮರೆಯಲಿಲ್ಲ, ನೆನಪಿಟ್ಟುಕೊಂಡಿರುವುದು ಅವರ ದೊಡ್ಡತನ ಎಂದರು.

ಬಾನುಮುಸ್ತಾಕ್ ಅವರನ್ನು ಕುರಿತು ಮಾತನಾಡಿದ ಖ್ಯಾತ ಸಾಹಿತಿ ಎಚ್.ಎಸ್.ಅನುಪಮಾ, ಬಾನು ಅಕ್ಕ ಮತ್ತು ದೀಪಾಭಾಸ್ತಿ ಇಬ್ಬರ ಮೂಲಕ ಅದೂ ಅಕ್ಷರ ಸಂಭ್ರಮವನ್ನು ಸಂಭ್ರಮಿಸುವ ಘಳಿಗೆ ನಮಗೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಪ್ರತಿಷ್ಠಿತ ಪ್ರಶಸ್ತಿ ಕೇವಲ ಶುದ್ದ ಸಾಹಿತಿಗೆ ಬಂದಿಲ್ಲ, ಒಬ್ಬ ಹೋರಾಟ ಗಾರ್ತಿ, ಮಸ್ಲಿಂ ಮಹಿಳೆಯಾಗಿ ಹುಟ್ಟಿ, ಕನ್ನಡ ಭಾಷೆಯಲ್ಲಿ ಬರೆದ, ಇಂಗ್ಲಿಷ್ ಅನುವಾದದ ಮೂಲಕ ಗಡಿ ದಾಟಿದ ಕೃತಿಗೆ ಸಿಕ್ಕಿದೆ. ನಿಜಕ್ಕೂ ರೋಚಕ ಕ್ಷಣ ಎಂದರು.

ಒAದು ಕುಟುಂಬದಲ್ಲಿ ಹಲವು ಕುಟುಂಬ ಇರುವಂತೆ, ಒಂದರಲ್ಲಿ ಹಲವು ಬಹುತ್ವ ಇರುವಂತೆ ಇಂದು ಸಮಾಜದ ಕಣ್‌ಕಟ್ಟಿ ಕೇಂದ್ರಭಾಗವನ್ನಷ್ಟೇ ತೋರಿಸಿ ಅಂಚಿನವರನ್ನು ಕಡೆಗಣಿಸಿ ದೇಶ ಪ್ರಕಾಶಿಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಅಂಚಿನವರು ಕಾಣುತ್ತಿಲ್ಲ. ಅಂಚಿಗೆ ಸರಿಸಿದ ಹಲವು ಸಮುದಾಯಗಳ ಜೊತೆಗೆ ಮುಸ್ಲಿಂ ಸಮುದಾಯವು ಸಹ ಸೇರಿದೆ, ದೇಶದಲ್ಲಿ ಇಸ್ಲಾಂ ಫೋಬಿಯಾ ಸದ್ದು ಮಾಡುತ್ತಿರುವ ಈ ಕಾಲಘಟ್ಟದಲ್ಲಿ ಬೂಕರ್ ಪ್ರಶಸ್ತಿ ಬಹಳ ಮುಖ್ಯ ಎಂದು ಪ್ರತಿಪಾದಿಸಿದರು.

ನಗರಪಾಲಿಕೆ ಮಹಾಪೌರ ಎಂ.ಚಂದ್ರೇಗೌಡ ಮಾತನಾಡಿ, ಹಾಸನ ಮಹಾನಗರದ ಕೀರ್ತಿಯನ್ನು ಬಾನೆತ್ತರಕ್ಕೆ ಬೆಳಗಿಸಿದ ಬಾನು ಮುಸ್ತಾಕ್ ಅವರಿಗೆ ಸಮಸ್ತ ಜನತೆ ಪರವಾಗಿ ಧನ್ಯವಾದ ಹೇಳಿದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿ ಇದು ನಾವೆಲ್ಲರೂ ಹೆಮ್ಮೆ ಪಡುವ ವಿಷಯ. ಕನ್ನಡದ ಕಂಪು ಜಾಗತಿಕ ಮಟ್ಟದಲ್ಲಿ ಪಸರಿಸಿದೆ. ಶೀಘ್ರವೇ ಜಿಲ್ಲಾಡಳಿತದಿಂದಲೂ ಸನ್ಮಾನ ಮಾಡಲಾಗುವುದು ಎಂದರು.

ಎಸ್ಪಿ ಮೊಹಮದ್ ಸುಜೀತಾ ಮಾತನಾಡಿ, ಇದು ಎಲ್ಲ ಮಹಿಳೆಯರಿಗೆ ಸಂದ ಗೌರವ, ಹಾಟ್‌ಲ್ಯಾಂಪ್ ಪುಸ್ತಕವನ್ನು ಎಲ್ಲ ಶಾಲೆಗಳಲ್ಲಿ ಓದುವಂತಾಗಬೇಕು.ಮಹಿಳಾ ಸಬಲೀಕರಣ ಧೈರ್ಯ ಈ ಪುಸ್ತಕದಿಂದ ಸಿಗಲಿದೆ ಎಂದು ಅಭಿನಂದಿಸಿದರು.

ಜಿಪ ಸಿಇಒ ಪೂರ್ಣಿಮ ಮಾತನಾಡಿ, ಬಾನು ಮುಷ್ತಾಕ್ ಅವರ ಮೇಲೆ ಗೌರವ ಇರುವ ಎಲ್ಲರೂ ಎದೆಯಹಣತೆ ಪುಸ್ತಕ ಓದಬೇಕು. ಈ ಕೃತಿ ಓದುತ್ತಲೇ ಕಣ್ಣೀರು ತಾನಾಗಿಯೇ ಸುರಿಯಲಿದೆ. ಇದು ಎಲ್ಲ ಗ್ರಂಥಾಲಯಗಳಲ್ಲಿ ಸಿಗಬೇಕು. ಪದವಿಗೆ ಪಠ್ಯ ಆಗಬೇಕು ಎಂದು ಆಶಿಸಿದರು.

ನಾಗರಿಕ ಸಮಿತಿಯ ಧರ್ಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಸನ, ಕನ್ನಡ, ಕರ್ನಾಟಕ ಬೆಳಗಿರುವುದು ಖುಷಿಯ ಸಂಗತಿ.

ಅದೂ ಚಳವಳಿ ಒಡನಾಡಿಗೆ ಅತ್ಯುನ್ನತ ಗೌರವ ಸಂದಿರುವುದು ಸಂತಸ ತಂದಿದೆ. ನಾಗರಿಕ ಸನ್ಮಾನಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದರು.

ನಾರಾಯಣ ದಾಸ್, ಡಾ.ಹೆಚ್.ಎಲ್.ಮಲ್ಲೇಶಗೌಡ, ರೂಪಾ ಹಾಸನ್, ರವಿ ನಾಕಲಗೂಡು, ಪೃಥ್ವಿ ಮೊದಲಾದವರಿದ್ದರು. ಇದಕ್ಕೂ ಮುನ್ನ ಡಿಸಿ ಕಚೇರಿ ಯಿಂದ ಕಲಾಭವನದ ವರೆಗೆ ಅರ್ಥಪೂರ್ಣ ಮೆರವಣಿಗೆ ನಡೆಯಿತು.

ನಮ್ಮೂರಿನ ತಾಯಿಗೆ ಬೂಕರ್ ಪ್ರಶಸ್ತಿ ಸಂದಿರುವುದು ಹೆಮ್ಮೆಯ ವಿಷಯ. ಅದೂ ನಾನು ಸಂಸದನಾಗಿರುವ ಅವಧಿಯಲ್ಲೇ ನನ್ನ ತಾಯಿ ಸಮಾನರಿಗೆ ಪ್ರಶಸ್ತಿ ಸಿಕ್ಕಿರುವುದು ಸಂತಸ ಇಮ್ಮಡಿಗೊಳಿಸಿದೆ. ಸಾಹಿತ್ಯ ಜೊತೆಗೆ ಬಹು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಬಾನು ಮೇಡಂ ಅವರತ್ತ ಜಗತ್ತು ನೋಡುತ್ತಿದೆ. ನಿಜಕ್ಕೂ ಇದು ಸಂತಸದ ಕ್ಷಣ.

  • ಶ್ರೇಯಸ್ ಪಟೇಲ್, ಸಂಸದ

ಬಾನು ಮುಷ್ಕಾಕ್ ಅವರ ಎದೆಯಹಣತೆ ಕೃತಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವುದು ಜಿಲ್ಲೆಗೆ, ರಾಜ್ಯಕ್ಕೆ ಹೆಮ್ಮೆ ವಿಷಯ. ಜಿಲ್ಲೆಯಲ್ಲಿ ಎಸ್. ಕೆ. ಕರೀಂಖಾನ್ ಅವರ ನಂತರ ಬಾನು ಮೇಡಂ ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಚಾರ. ಅವರ ಸಹಕಾರ, ಒಡನಾಟವನ್ನು ನಮ್ಮ ಕುಟುಂಬ ಮರೆಯದು.

  • ಸ್ವರೂಪ್ ಪ್ರಕಾಶ್, ಶಾಸಕ

  • ಮಾಲಾ, ಹಾಸನ.

Leave a Reply

Your email address will not be published. Required fields are marked *