ಬೇಲೂರು– ಪತ್ರಕರ್ತನಿಗೆ ಬೆದರಿಕೆ ನೀಡಿದ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಘಟಕ ಕಠಿಣ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಪತ್ರಕರ್ತರ ಮೇಲಿನ ಕಿರುಕುಳವನ್ನು ಖಂಡಿಸಿ ಸಂಘದ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಪಟ್ಟಣದ ನೆಹರುನಗರ ವೃತ್ತದ ಬಳಿ ಕಳೆದ ಗುರುವಾರ ನಡೆದ ಬೈಕ್ ಮತ್ತು ಆಟೋ ನಡುವಿನ ಅಪಘಾತ ಕುರಿತು ವರದಿ ಮಾಡಿದ ವಾರ್ತಾ ಭಾರತಿ ಪತ್ರಿಕೆಯ ವರದಿಗಾರ ಮಹಮದ್ ಅಬ್ರರ್ ಅವರಿಗೆ ಬೇಲೂರು ವೃತ್ತ ನಿರೀಕ್ಷಕ ರೇವಣ್ಣ ಅವರು ಬೆದರಿಕೆ ಒಡ್ಡಿದ್ದು, ಈ ಮೂಲಕ ಪತ್ರಕರ್ತನಿಗೆ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಜಿ. ಎಂ. ರಾಜಶೇಖರ್ ಅವರ ನೇತೃತ್ವದಲ್ಲಿ ಬುಧವಾರ ಪತ್ರಕರ್ತರ ನಿಯೋಗವು ಅರಸೀಕೆರೆ ಉಪವಿಭಾಗದ ಪೊಲೀಸ್ ಅಧಿಕಾರಿ ಡಿವೈಎಸ್ಪಿ ಗೋಪಿ ಅವರಿಗೆ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರು, “ಪತ್ರಕರ್ತರು ಮತ್ತು ಪೊಲೀಸ್ ಇಲಾಖೆ ನಡುವೆ ನಿಕಟ ಸಂಬಂಧವಿದೆ. ಇಂತಹ ಘಟನೆಗಳು ಪತ್ರಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತವೆ. ಆದ್ದರಿಂದ ಅಪಮಾನಕಾರಿ ವರ್ತನೆ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.
ಡಿವೈಎಸ್ಪಿ ಗೋಪಿ ಅವರು ಮನವಿಯನ್ನು ಸ್ವೀಕರಿಸಿ, ಘಟನೆ ಬಗ್ಗೆ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಎಚ್.ಡಿ. ರಮೇಶ್, ಬಸವರಾಜು, ಅರುಣ್ ರಜಪೂತ್, ಮಹಮದ್ ಅಬ್ರರ್, ವಿನೋದ್ ಕುಮಾರ್, ಚೇತನ್, ನೂರ್ ಅಹಮದ್, ಸ್ವಾಮಿ, ಮತ್ತು ಸುನಿಲ್ ಉಪಸ್ಥಿತರಿದ್ದರು.
- ನೂರ್ ಅಹಮ್ಮದ್