ಕೊಟ್ಟಿಗೆಹಾರ- 15 ಕಿ.ಮೀ. ರಾಷ್ಟ್ರೀಯ ಹೆದ್ದಾರಿ 173ರಲ್ಲಿ ವರ್ಷಕ್ಕೆ 100 ಅಪಘಾತ, ಇದು ಅಪಘಾತಗಳ ಹೆದ್ದಾರಿ ಎಂದು ಸ್ಥಳಿಯರ ವ್ಯಂಗ್ಯ

ಕೊಟ್ಟಿಗೆಹಾರ.ಜೂ.14: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 173 (ಮಂಗಳೂರು-ವಿಲ್ಲುಪುರಂ) ಅಪಘಾತಗಳ ಹೆದ್ದಾರಿಯಾಗಿ ಪರಿವರ್ತನೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ನಿಂದ ಕೊಟ್ಟಿಗೆಹಾರದವರೆಗಿನ 15 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಲ್ಲ. ಅಪಘಾತಗಳ ಹೆದ್ದಾರಿ ಎಂದು ಸ್ಥಳಿಯರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು   ರಸ್ತೆ ನಿರ್ಮಾಣದ ವೇಳೆ ಸಮಪರ್ಕವಾಗಿ ರಸ್ತೆ ಮಾಡಿಲ್ಲ. ಇದರಿಂದ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು, ಅದರಿಂದಲೇ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸ್ಥಳಿಯರು ಆರೋಪೀಸಿದ್ದಾರೆ. ರಸ್ತೆಯಲ್ಲಿ ಗುಂಡಿ ಇಲ್ಲ. ಇದ್ದರೂ ಕಾಣುವುದಿಲ್ಲ. ರಸ್ತೆ ನಿರ್ಮಾಣದ ಬಳಿಕ ಭಾರೀ ತೂಕಕ್ಕೆ ರಸ್ತೆ ಕುಸಿದಿದೆ. ಇದರಿಂದ ಗುಂಡಿ ಬಿದ್ದಿದ್ದು, ನೀರು ನಿಂತರೆ ಕಾಣುವುದಿಲ್ಲ. ವಾಹನ ಸವಾರರು ವೇಗವಾಗಿ ಹೋಗುವಾಗ ಗಾಡಿಗಳು  ಅಪ್ ಸೆಟ್ ಆಗಿ ಗದ್ದೆ, ನದಿಗೆ ಇಳಿಯುತ್ತವೆ ಅಥವ ಎದುರಿನ ವಾಹನಕ್ಕೆ ಡಿಕ್ಕಿ ಹೊಡೆಯುತ್ತಿವೆ. ಈ ಬಗ್ಗೆ ಹಲವು ಬಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ. ಸಾಲದಕ್ಕೆ 15 ಕಿ.ಮೀ. ವ್ಯಾಪ್ತಿಯಲ್ಲೂ ರಸ್ತೆಯ ಎರಡೂ ಬದಿಯಲ್ಲೂ ಚರಂಡಿಗಳು  ಬ್ಲಾಕ್ ಆಗಿದ್ದು ನೀರು ಚರಂಡಿಗಿಂತ ಹೆಚ್ಚಾಗಿ ರಸ್ತೆಯಲ್ಲೇ ಹರಿಯುತ್ತಿದೆ. ಇಲ್ಲಿನ ಅಪಘಾತಗಳಿಗೆ ಹೆದ್ದಾರಿ ಪ್ರಾಧಿಕಾರವೇ ನೇರಹೊಣೆ ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ.

ಕಳೆದ ಎಂಟತ್ತು ದಿನಗಳ ಹಿಂದಷ್ಟೆ ಇದೇ ಜಾಗದಲ್ಲಿ ಒಂದೇ ದಿನ ಎರಡು ಅಪಘಾತಗಳು ಸಂಭವಿಸಿದ್ದವು. ಎರಡು ಅಪಘಾತದಲ್ಲೂ ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರಾಗಿದ್ದರು. ಆದರೆ, ಕಾರುಗಳು ಹೇಮಾವತಿ ಹಾಗೂ ಹೇಮಾವತಿ ಉಪನದಿಗೆ ಬಿದ್ದು ಬಹುತೇಕ ನಜ್ಜುಗೊಜ್ಜಾಗಿದ್ದವು. ಈ ರಸ್ತೆಯಲ್ಲಿ ವರ್ಷಕ್ಕೆ ಕನಿಷ್ಠ 100-120 ಅಪಘಾತಗಳು ಸಂಭವಿಸುತ್ತಿವೆ. ಆದರೂ, ಅಧಿಕಾರಿಗಳು ಡೋಂಟ್ ಕೇರ್ ಎಂದು ಸ್ಥಳಿಯರು ಕಿಡಿಕಾರಿದ್ದಾರೆ. ಕೇವಲ ಮಳೆಗಾಲ ಮಾತ್ರವಲ್ಲ. ಬೇಸಿಗೆಯಲ್ಲೂ ನೇರ ರಸ್ತೆಯಲ್ಲಿ ಕಾಣದಂತಹಾ ಗುಂಡಿ ಬಿದ್ದ ಜಾಗಕ್ಕೆ ಕಾರು-ಬೈಕಿನ ಟೈರ್ ಇಳಿದು ಸಾಕಷ್ಟು ಅಪಘಾತಗಳು ಸಂಭವಿಸಿವೆ. ಆದರೆ, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳಿಯರು ದೂರಿದ್ದಾರೆ.

ಇಂದು ಕೂಡ ಬಣಕಲ್ ಸಮೀಪದ ರಾಮಣ್ಣನಗಂಡಿ ಬಳಿ ರಸ್ತೆಯಲ್ಲಿನ ಗುಂಡಿಗೆ ಇಳಿದು ಚಾಲಕನ ನಿಯಂತ್ರಣ ತಪ್ಪಿ ಎದುರಿನ ಕಾರಿಗೆ ಡಿಕ್ಕಿಯೊಡೆದಿದೆ. ಇಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿದರೆ ಒಂದು ಗದ್ದೆಗೆ ಬೀಳಬೇಕು. ಇಲ್ಲ ಎದುರಿನ ಗಾಡಿಗೆ ಡಿಕ್ಕಿಯೊಡೆಯಬೇಕು ಅಷ್ಟೆ. ಬೇರೆ‌ ದಾರಿ‌ ಇಲ್ಲ. ಇಂದು ಎರಡು ಕಾರುಗಳು ಡಿಕ್ಕಿಯೊಡೆದಿವೆ. ಅದೃಷ್ಟವಶಾತ್ ಸಾವು-ನೋವು ಸಂಭವಿಸಿಲ್ಲ. ಆದರೆ,  ಅಪಘಾತದ ರಭಸಕ್ಕೆ ಕಾರಿನ ಡೋರ್ ಲಾಕ್, ಸೆಟ್, ಬಾಡಿ ರಬ್ಬರ್ ಗಳು ಕಿತ್ತು ಬಂದಿವೆ. ಸಾವು-ನೋವು ಸಂಭವಿಸಿದರೆ ಅದಕ್ಕೆ ಹೊಣೆಯಾರು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಈ 15 ಕಿ.ಮೀ.ವ್ಯಾಪ್ತಿಯಲ್ಲಿ ವರ್ಷಕ್ಕೆ 100-120 ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಅಪಘಾತದ ಹೆದ್ದಾರಿಯ ಅಪಘಾತಗಳಿಗೆ ಮುಕ್ತಿ ಹಾಡಬೇಕೆಂದು ಸ್ಥಳಿಯರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *