
ಚಿಕ್ಕಮಗಳೂರು:ಕರ್ನಾಟಕದಲ್ಲಿರುವ ಹಲವು ಭಾಷಿಗರು ಕನ್ನಡ ಬಳಸುವ ಮೂಲಕ ಕನ್ನಡಾಭಿಮಾನ ಮೆರೆಯಬೇಕು ಎಂದು ಜಯಕರ್ನಾಟಕ ಸಂಘಟನೆಯ ಮುಖಂಡ ಕೆ.ಆರ್ ಅನೀಲ್ ಕುಮಾರ್ ಹೇಳಿದರು.
ನಗರದ ಅಂಬೇಡ್ಕರ್ ರಸ್ತೆಯ ಜ್ಯೋತಿ ವೃತ್ತದಲ್ಲಿ ಇಂದು ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಎಂಬುದು ಬಹು ಪ್ರಾಚೀನ ಭಾಷೆಯಾಗಿದ್ದು ಇದು ಮಾತನಾಡಲು ಬಹು ಸರಳ ಮತ್ತು ಜೇನಿನಷ್ಟೇ ಸವಿಯಾದುದ್ದು ಎಂದು ಬಣ್ಣಿಸಿದರು.
ದೇಶದ ನೋಟುಗಳಲ್ಲಿ ಮುದ್ರಣಗೊಂಡಿರುವ 14 ಭಾಷೆಗಳ ಪೈಕಿ ಕನ್ನಡಕ್ಕೆ 4ನೇ ಸ್ಥಾನ ನೀಡುವ ಮೂಲಕ ಕನ್ನಡ ಭಾಷೆಗಿರುವ ಪ್ರಾಧಾನ್ಯತೆಯನ್ನು ಎತ್ತಿಹಿಡಿದಿರುವುದು ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿ ಎಂದು ಹೇಳಿದ ಅವರು ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿದರೂ ಮನೆಯಿಂದ ಹೊರಗೆ ಬಂದಾಕ್ಷಣ ಕನ್ನಡ ಮಾತನಾಡುವ ಮೂಲಕ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.

ಸ್ಥಳೀಯ ಮುಖಂಡ ಜಿ.ಶಂಕರ್ ಮಾತನಾಡಿ, ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಿದ ಸಂದರ್ಭಗಳಲ್ಲಿ ಹರಿದು ಹಂಚಿಹೋಗಿದ್ದ ಪ್ರಾಂತ್ಯಗಳನ್ನು ಒಗ್ಗೂಡಿಸುವ ಮೂಲಕ ಕರ್ನಾಟಕವನ್ನು ಏಕೀಕರಣಗೊಳಿಸಿದ ಮಹತ್ ಕಾರ್ಯದಲ್ಲಿ ಹಲವು ಹಿರಿಯರು ಶ್ರಮಿಸಿದ್ದು ಅವರೆಲ್ಲರೂ ಪ್ರಾತಃಸ್ಮರಣೀಯರು ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಯುವಕರಾದ ವಿಜಯಕುಮಾರ್, ಲೋಹಿತ್ಕುಮಾರ್, ಅಶೋಕ್, ಮಣಿ, ಅಪ್ರೋಜ್, ನಾಸೀರ್, ವೆಂಕಟೇಶ್, ಹುಸೇನ್, ಶೇಠ್, ಆನಂದ್ ಸೇರಿದಂತೆ ಹಲವರಿದ್ದರು.