ಅರಕಲಗೂಡು, ಜೂನ್ 12: ಅರಕಲಗೂಡು ತಾಲೂಕು ಮಲ್ಲಿಪಟ್ಟಣ ಹೋಬಳಿ ಲಕ್ಷ್ಮಿಪುರದ ಗ್ರಾಮಸ್ಥರು ಸಾಮೂಹಿಕವಾಗಿ ರೈತ ಸಂಘದ ತಾಲೂಕು ಅಧ್ಯಕ್ಷ ಹೊಂಬೆಗೌಡರ ನೇತೃತ್ವದಲ್ಲಿ ಹಾಗೂ ಕಾರ್ಯಧ್ಯಕ್ಷ ಭುವನೇಶ್ ಅವರ ಸಾರಥ್ಯದಲ್ಲಿ ರೈತ ಸಂಘಕ್ಕೆ ಸೇರ್ಪಡೆಯಾದರು.
ಭುವನೇಶ್ ಹೊಸ ಸದಸ್ಯರಿಗೆ ಹಸಿರು ಶಾಲನ್ನು ತೊಡಿಸಿ, ಸಂಘದ ಸ್ವಾಗತ ಕೋರಿ,ಮಾತನಾಡಿ, “ನಮ್ಮ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಲ್ಲಿನ ಕೋರೆಗಳ ವಿರುದ್ಧ ನಾವು ಸಂಘಟಿತ ಹೋರಾಟ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸ್ಪಂದನೆ ಬಂದರೆ ಒಳ್ಳೆಯದು, ಇಲ್ಲವಾದರೆ ನಾವು ಒಗ್ಗಟ್ಟಾಗಿ ಹೋರಾಡಲೇಬೇಕು ಎಂದು ಕರೆ ನೀಡಿದರು.

ಈ ವೇಳೆ ಗ್ರಾಮಸ್ಥರು ಮಾತನಾಡಿ,
” ನಮ್ಮ ಊರಿನ ಭಾಗದಲ್ಲಿ ಹೆಚ್ಚಾಗಿ ಕಲ್ಲಿನ ಕೋರೆಗಳು ಆರಂಭವಾಗಿವೆ ಆದ್ದರಿಂದ ನಮ್ಮ ಗ್ರಾಮದಲ್ಲಿ ಶಬ್ದ ಮಾಲಿನ್ಯ ವಾಯು ಮಾಲಿನ್ಯ ಪರಿಸರ ಮಾಲಿನ್ಯ ಅತಿ ಹೆಚ್ಚಾಗಿ ಕಂಡುಬರುತ್ತದೆ ಇದನ್ನು ಯಾವುದೇ ಜನಪ್ರತಿನಿಧಿಗಳಿಗೆ ಗಮನಕ್ಕೆ ತಂದರು ಕೂಡ ಏನು ಪ್ರಯೋಜನವಾಗುತ್ತಿಲ್ಲ ಆದ್ದರಿಂದ ನಮ್ಮ ಊರಿನ ಎಲ್ಲಾ ಗ್ರಾಮಸ್ಥರು ಸೇರಿ ನಾವು ರೈತರ ಸಂಘಟನೆಗೆ ಬೆಂಬಲ ಕೊಡಬೇಕು ಯಾವುದೇ ರಾಜಕೀಯ ಪಕ್ಷಗಳಿಗೆ ಬೆಂಬಲ ಕೊಡಬಾರದು ನಮ್ಮ ಕಷ್ಟಗಳನ್ನು ನಾವೇ ಪರಿಹರಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ನಾವು ಎಲ್ಲರೂ ಒಗ್ಗಟ್ಟಾಗಿ ರೈತ ಸಂಘಕ್ಕೆ ಸೇರ್ಪಡೆಯಾಗುತ್ತಿದ್ದೇವೆ” ಎಂದರು .

ಈ ಸಂದರ್ಭದಲ್ಲಿ ರೈತ ಸಂಘದ ತತ್ವ-ಸಿದ್ಧಾಂತಗಳನ್ನು ಎಲ್ಲರಿಗೂ ತಿಳಿಸಿ, ಸಂಘದೊಂದಿಗೆ ಕೈಜೋಡಿಸುವ ಪ್ರಮಾಣ ಬೋಧನೆ ಮಾಡಲಾಯಿತು. ನಂತರ ರೈತರು “ರೈತ ಸಂಘಕ್ಕೆ ಜಯವಾಗಲಿ!” ಎಂಬ ಘೋಷವಾಕ್ಯದೊಂದಿಗೆ ಹಸಿರು ಶಾಲುಗಳನ್ನು ಎತ್ತಿ, ಸಂಘವನ್ನು ಗೌರವಪೂರ್ವಕವಾಗಿ ಊರಿಗೆ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಜಗದೀಶ್, ರಾಮೇಗೌಡ, ದಿನೇಶ್, ಹಲಗೆಗೌಡ, ತಾಯಮ್ಮ, ಶಿವಮ್ಮ ಮತ್ತು ಇತರ ಗ್ರಾಮಸ್ಥರು ಉಪಸ್ಥಿತರಿದ್ದರು.
- ಶಶಿಕುಮಾರ ಕೆಲ್ಲೂರು.