ಅರಕಲಗೂಡು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಾಗಿ ಖರೀದಿ ಕೇಂದ್ರಗಳು ದಲ್ಲಾಳಿಗಳ ಕಮಿಷನ್ ಗಳಿಕೆಯ ಅಡ್ಡೆಯಾಗಿ ಮಾರ್ಪಟ್ಟಿವೆ ಎಂಬ ಆರೋಪವನ್ನು ರೈತ ಸಂಘದ ಭುವನೇಶ್ ಅವರು ತಿಳಿಸಿ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, “ಅರಕಲಗೂಡು ತಾಲೂಕಿನ ಎಪಿಎಂಸಿ ಆವರಣ ಹಾಗೂ ರಾಮನಾಥಪುರದಲ್ಲಿ ಸ್ಥಾಪಿತವಾಗಿರುವ ಖರೀದಿ ಕೇಂದ್ರಗಳು ರೈತರಿಗೆ ನ್ಯಾಯ ಒದಗಿಸುವ ಬದಲು ಮಧ್ಯವರ್ತಿಗಳ ಲಾಭಕ್ಕಾಗಿ ಕಾರ್ಯನಿರ್ವಹಿಸುತ್ತಿವೆ. ಎಪಿಎಂಸಿ ಆವರಣದಲ್ಲಿನ ಕೇಂದ್ರದಲ್ಲಿ ದಲ್ಲಾಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಹಾರ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಇವರ ಜೊತೆ ಸೇರಿ ಅಕ್ರಮವಾಗಿ ಕೆಲಸ ಮಾಡುತ್ತಿದ್ದಾರೆ,” ಎಂದು ಆರೋಪಿಸಿದರು.

“ಇಲ್ಲಿ ಫೇಕ್ ಎಫ್ಐಡಿ ಬಳಸಿ ಕೆಲವರು ರೈತರಿಂದ ಕಡಿಮೆ ದರದಲ್ಲಿ ಗುಣಮಟ್ಟವಲ್ಲದ ರಾಗಿ ಖರೀದಿಸಿ, ಸರ್ಕಾರದ ಬೆಂಬಲ ಬೆಲೆಯಾದ ರೂ. 4300ಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಲಾಭವಿಲ್ಲದೆ, ದಲ್ಲಾಳಿಗಳು ಹಾಗೂ ಕೆಲವು ಅಧಿಕಾರಿಗಳು ಮಾತ್ರ ಲಾಭ ಪಡೆಯುತ್ತಿದ್ದಾರೆ. ಇಂತಹ ಅಕ್ರಮಗಳಿಂದಾಗಿ ಸರ್ಕಾರದ ಖಜಾನೆಗೆ ಕೋಟಿ ಕೋಟಿ ನಷ್ಟ ಉಂಟಾಗುತ್ತಿದ್ದು, ಖರೀದಿ ಕೇಂದ್ರಗಳು ಭ್ರಷ್ಟಾಚಾರದ ಗೂಡುಗಳಾಗಿ ಪರಿವರ್ತನೆಗೊಂಡಿವೆ. “ಈ ಕೇಂದ್ರಗಳ ಮೇಲೆ ಸೂಕ್ತ ತನಿಖೆ ನಡೆದು, ಸಂಬಂಧಿತ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನಮ್ಮ ಶಾಸಕ ಎ. ಮಂಜು ಅವರ ಮೂಲಕ ಈ ಭ್ರಷ್ಟಾಚಾರಕ್ಕೆ ತಡೆ ನೀಡಬೇಕೆಂಬುದು ನಮ್ಮ ಒತ್ತಾಯ,” ಎಂದು ಹೇಳಿದರು.

ರೈತ ಸಂಘದ ಪ್ರಕಾರ, ಇದೊಂದು ಸಂಘಟಿತ ಅವ್ಯವಹಾರದ ರೂಪವನ್ನು ಪಡೆದಿದ್ದು, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕೂಡಲೇ ಕ್ರಮಕೈಗೊಳ್ಳದಿದ್ದರೆ, ರೈತರು ಸ್ವತಂತ್ರ ಹೋರಾಟಕ್ಕೆ ಮುಂದಾಗುವ ಎಚ್ಚರಿಕೆ ನೀಡಿದ್ದಾರೆ.
-ಶಶಿಕುಮಾರ್