ಬೇಲೂರು: ಡೆಂಗ್ಯು ಸೋಂಕಿತ ಇಡಿ ಸೊಳ್ಳೆಯಿಂದ ಹರಡುತ್ತದೆ; ಇದು ಸ್ವಚ್ಛ ನೀರಿನಲ್ಲಿ ಸಂತಾನವೃದ್ಧಿ ಮಾಡುತ್ತದೆ ಹಾಗೂ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ ಎಂದು ಶಾಸಕ ಸುರೇಶ್ ಹೆಚ್. ಮಾಹಿತಿ ನೀಡಿದರು.
ಅವರು ರಾಷ್ಟ್ರೀಯ ಡೆಂಗ್ಯು ದಿನದ ಅಂಗವಾಗಿ, ಬೇಲೂರು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆಯು ಪಟ್ಟಣದ ವಿವಿಧ ಬೀದಿಗಳಲ್ಲಿ ಡೆಂಗ್ಯು ಬಗ್ಗೆ ಜಾಗೃತಿ ಮೂಡಿಸಲು ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಡೆಂಗ್ಯು ಮಾರಣಾಂತಿಕ ಕಾಯಿಲೆಯಾಗಿದ್ದು, ಮಳೆಗಾಲದಲ್ಲಿ ಸೊಳ್ಳೆಗಳ ಪತ್ತನೆ ತೀವ್ರವಾಗಿರುವುದರಿಂದ ಸಾರ್ವಜನಿಕರು ತಮ್ಮ ಮನೆಗಳ ಒಳ ಮತ್ತು ಹೊರಾಂಗಣದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಸೊಳ್ಳೆಗಳ ಉತ್ಪತ್ತಿ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯ್ ಅವರು, ಡೆಂಗಿ ಜ್ವರದ ಲಕ್ಷಣಗಳಾದ ತೀವ್ರ ಜ್ವರ, ತಲೆನೋವು, ಮೈಕೈ ನೋವು, ಮಾಂಸಖಂಡ ನೋವುಗಳ ಬಗ್ಗೆ ಎಚ್ಚರಿಕೆ ನೀಡಿದರು. ಈ ಲಕ್ಷಣಗಳು ಕಂಡುಬಂದಾಗ ತಕ್ಷಣ ಚಿಕಿತ್ಸೆ ಪಡೆಯುವಂತೆ ಸಾರ್ವಜನಿಕರಿಗೆ ಸೂಚಿಸಿದರು. ಸೊಳ್ಳೆ ಕಚ್ಚುವಿಕೆಯಿಂದ ಪಾರಾಗಲು ಸೊಳ್ಳೆ ಪರದೆ ಬಳಕೆ, ಮೈ ಮುಚ್ಚುವ ಬಟ್ಟೆ ಧರಿಸುವದನ್ನು ಸಲಹೆ ನೀಡಿದರು.

ಈ ಜಾಥಾ ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಸುಧಾ, ಡಾ. ಮಹಾಂತೇಶ್ (ಆರ್.ಬಿ.ಎಸ್.ಕೆ), ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಉಷಾ, ಹಿರಿಯ ನಿರೀಕ್ಷಣಾಧಿಕಾರಿ ದಯಾನಂದ, ಆರೋಗ್ಯ ನಿರೀಕ್ಷಣಾಧಿಕಾರಿ ಮೋಹನ್, ಆಶಾ ಮೇಲ್ವಿಚಾರಕಿ ವಂದನ, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
- ನೂರ್ ಅಹಮದ್