ಬೇಲೂರು: ವಿಶ್ವ ವಿಖ್ಯಾತ ಬೇಲೂರು ಪಟ್ಟಣದಲ್ಲಿ ಬಕ್ರೀದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕೋಟೆ ಜಾಮಿಯ ಮಸೀದಿಯ ನೇತೃತ್ವದಲ್ಲಿ ನಡೆದ ಈ ಹಬ್ಬದ ಸಂದರ್ಭದಲ್ಲಿ, ಪಟ್ಟಣದ ಎಲ್ಲಾ ಮಸೀದಿಗಳ ಭಕ್ತರು ಗೆಂಡೆಹಳ್ಳಿ ರಸ್ತೆಯ ಈದ್ಗಾ ಮೈದಾನದಲ್ಲಿ ಏಕಮಟ್ಟದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು.
ಹಬ್ಬದ ಪ್ರಯುಕ್ತ ಪುಟ್ಟ ಮಕ್ಕಳು, ಹಿರಿಯರು ಹೊಸ ಬಟ್ಟೆ ತೊಟ್ಟು, ಸಿಹಿ ಹಂಚಿ ಪರಸ್ಪರ ಹಾರೈಕೆಗಳ ವಿನಿಮಯ ಮಾಡಿಕೊಂಡರು. ಈ ಸಂದರ್ಭ ಮೌಲಾನಾ ರಿಜ್ವಾನ್ ರಜಾ ಮಾತನಾಡುತ್ತಾ, ಬಕ್ರೀದ್ ಹಬ್ಬವು ಕೇವಲ ಹಬ್ಬವಲ್ಲ, ಅದು ತ್ಯಾಗ, ಶ್ರದ್ಧೆ ಮತ್ತು ನಿಷ್ಠೆಯ ಸಂಕೇತವಾಗಿದ್ದು, ಇಬ್ರಾಹಿಂ (ಅಲೆಹಿಸ್ಸಲಾಮ್) ಅವರ ತ್ಯಾಗದ ಕಥೆಯ ಪವಿತ್ರ ಸ್ಮರಣೆ ಎಂದು ಬಣ್ಣಿಸಿದರು.

ಅವರು ಮುಂದಾಗಿ ಹೇಳಿದರು:
“ಈ ಹಬ್ಬದಲ್ಲಿ ಪ್ರಾಣಿಬಲಿಯೊಂದಿಗೆ, ನಮ್ಮ ಒಳಗಿನ ಅಸಹನೆ, ದ್ವೇಷ, ಬಡವರ ಹಕ್ಕು ಕಿತ್ತುಕೊಳ್ಳುವ ಭಾವನೆಗಳ ಬಲಿಯೂ ಅಗತ್ಯ. ಇದು ನೈತಿಕತೆಯ ಹಬ್ಬ, ಸಹಾನುಭೂತಿಯ ಹಬ್ಬ. ಎಲ್ಲರೂ ಒಂದೇ ಮೌಲ್ಯಗಳಲ್ಲಿ ನಡೆಯೋಣ.” ಎಂದರು.

ಈ ಸಂಧರ್ಭದಲ್ಲಿ ಬೇಲೂರು-ಹಳೇಬೀಡು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ತೋಫಿಕ್, ಕಾಂಗ್ರೆಸ್ ಮುಖಂಡ ಜಾಕಿರ್ ಪಾಷಾ, ನಯಾಜ್, ಗೆಂಡೆಹಳ್ಳಿಯ ಆಸಿಫ್, ಸಿಕಂದರ್, ಫಾಝಿಲ್, ತಬ್ರೆಸ್, ಆರೀಫ್, ಸೈಯದ್ ಜಮೀಲ್ ಹಾಗೂ ಪತ್ರಕರ್ತ ನೂರ್ ಅಹಮದ್ ಉಪಸ್ಥಿತರಿದ್ದರು.

ಶಾಂತಿಯುತ ಆಚರಣೆಗೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಸರ್ಕಲ್ ಇನ್ಸ್ಪೆಕ್ಟರ್ ರೇವಣ್ಣ ಅವರ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಶಿವನಗೌಡ ಪಾಟೀಲ್, ದೇವರಾಜ್, ಚೇತನ್, ನವೀನ್ ಕುಮಾರ್, ದೇವೇಂದ್ರ ಹಾಗೂ ಸಿಬ್ಬಂದಿ ವರ್ಗದವರು ಕರ್ತವ್ಯ ನಿರ್ವಹಿಸಿದರು.
– ನೂರ್ ಅಹಮ್ಮದ್