ಬೇಲೂರು: ಸುಜಯ್ ಕುಮಾರ್ ವರ್ಗಾವಣೆ, ಆಡಳಿತದ ವಿರುದ್ಧ ಅಕ್ರಮ-ಅವ್ಯವಹಾರಗಳ ಆರೋಪ

ಬೇಲೂರು- ಪುರಸಭೆಯಲ್ಲಿ ಹಲವು ವರ್ಷಗಳಿಂದ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸುಜಯ್ ಕುಮಾರ್ ಅವರನ್ನು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಗೆ ವರ್ಗಾವಣೆ ಮಾಡಲಾಗಿದೆ. ಅವರ ಆಡಳಿತದ ಅವಧಿಯಲ್ಲಿ ಹಲವಾರು ಅಕ್ರಮಗಳು ಹಾಗೂ ಆಡಳಿತ ದೌರ್ಬಲ್ಯಗಳ ಆರೋಪಗಳು ಕೇಳಿಬಂದಿರುವ ಹಿನ್ನಲೆಯಲ್ಲಿ ಈ ವರ್ಗಾವಣೆ ಚರ್ಚೆಗೆ ಕಾರಣವಾಗಿದೆ.

ಸುಜಯ್ ಕುಮಾರ್ ಅವರು ಪುರಸಭೆಯ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಗೊಂದಲ ಉಂಟುಮಾಡಿ ಮೂಲ ಮಾಲೀಕರೊಂದಿಗೆ ಶಾಮೀಲಾಗಿ ಅಕ್ರಮ ಮಾಡಿದ್ದಾರೆ ಎಂದು ಪುರಸಭೆ ಸದಸ್ಯ ಶಾಂತಕುಮಾರ್ ಹಲವಾರು ಸಭೆಗಳಲ್ಲಿ ಆರೋಪಿಸಿದ್ದರು. ಇದೇ ರೀತಿ, ಮಾಜಿ ಅಧ್ಯಕ್ಷ ಅಶೋಕ್ ಅವರೊಂದಿಗೆ ಸೇರಿ ಕೋಟ್ಯಂತರ ರೂ.ಗಳ ಲೆಕ್ಕವಿಲ್ಲದ ವ್ಯವಹಾರಗಳ ಆರೋಪಗಳು ಎದುರಾಗಿವೆ.‌

ಇತ್ತೀಚೆಗೆ, ನೆಹರುನಗರದ ಗಣಪತಿ ದೇವಾಲಯದ ಜಾಗವನ್ನು ಬೇರೆ ವ್ಯಕ್ತಿಗೆ ಖಾತೆ ಮಾಡಲಾಗಿದೆ ಎಂಬ ಆರೋಪದ ನಂತರ ಸಾರ್ವಜನಿಕರು ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ, ಅವಿಶ್ವಾಸ ನಿರ್ಣಯದ ಸಮಯದಲ್ಲಿ ಸುಜಯ್ ಕುಮಾರ್ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರಿಂದ ಸದಸ್ಯರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು.

ಇದಾದ ಬಳಿಕ, ಪುರಸಭೆಗೆ ನೂತನ ಮುಖ್ಯಾಧಿಕಾರಿಯಾಗಿ ಅರಕಲಗೂಡು ಪಟ್ಟಣ ಪಂಚಾಯತಿಯಿಂದ ಬಸವರಾಜ ಟಾಕಪ್ಪ ಸಿಗ್ಯಾವಿ ನೇಮಕಗೊಂಡಿದ್ದಾರೆ. ಇವರ ನೇಮಕಾತಿಯಿಂದ ಪುರಸಭೆಯಲ್ಲಿ ಜಾರಿಯಾದ ಅಕ್ರಮ ಹಾಗೂ ಆಡಳಿತದ ದೌರ್ಬಲ್ಯಗಳ ತನಿಖೆಗೆ ದಾರಿ ಒದಗಬಹುದು ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ.

  • ನೂರ್‌ ಅಹಮ್ಮದ್

Leave a Reply

Your email address will not be published. Required fields are marked *