ಬೇಲೂರು: ತಾಲ್ಲೂಕಿನ ಗೋವಿನಲ್ಲಿ ಗ್ರಾಮದಲ್ಲಿ ಸುಮಾರು 15 ವರ್ಷಗಳಿಂದ ಒತ್ತುವರಿಗೊಳಗಾಗಿದ್ದ ಸರ್ಕಾರಿ ಶಾಲೆಗೆ ಸೇರಿದ 2 ಎಕರೆ 27 ಕುಂಟೆ ಜಮೀನನ್ನು ತಹಶೀಲ್ದಾರ್ ಮಮತಾ ಎಂ. ರವರು ರಕ್ಷಿಸುವಲ್ಲಿ ಯಶಸ್ವಿಯಾದರು. ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ಈ ಜಮೀನನ್ನು ಕಬಳಿಸಿ ಕೃಷಿ ಚಟುವಟಿಕೆಗೆ ಬಳಸುತ್ತಿದ್ದ ಸಂದರ್ಭದಲ್ಲಿ, ಸ್ಥಳೀಯರು ಹಾಗೂ ದಲಿತ ಮುಖಂಡ ಹೊನ್ನಯ್ಯ ಹೋರಾಟ ನಡೆಸಿದ್ದರು.
ಈ ಜಮೀನು ವಿಚಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದರೂ, ಪ್ರಭಾವಿ ವ್ಯಕ್ತಿಯ ಭೀತಿಯಿಂದ ಯಾವುದೇ ಅಧಿಕಾರಿಯು ಕ್ರಮ ಕೈಗೊಂಡಿರಲಿಲ್ಲ. ಕೇವಲ ನೆಪದ ಪರಿಶೀಲನೆ ಮಾತ್ರ ನಡೆದು, ಕೆಲವೊಮ್ಮೆ ಗ್ರಾಮಸ್ಥರು ಹಾಕಿದ ಗಡಿಕಂಬಗಳನ್ನು ಸಹ ಕಿತ್ತಿಬಿಸಾಕಲಾಗುತ್ತಿತ್ತು.

ಆದರೆ ಡಾ. ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ಸದಸ್ಯರು ಧೈರ್ಯದಿಂದ ಮುಂದೆ ಬಂದು ಬೇಲೂರು ತಹಶೀಲ್ದಾರ್ ಮಮತಾ ಎಂ. ರವರಿಗೆ ಜಮೀನಿನ ದಾಖಲೆ ಸಮೇತ ಎಲ್ಲ ವಿವರಗಳನ್ನು ಸಲ್ಲಿಸಿದರು. ತಹಶೀಲ್ದಾರ್ ಅವರು ಈ ಪ್ರಕರಣವನ್ನು ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಅವರ ಗಮನಕ್ಕೆ ತಂದು, ಪ್ರಭಾವಿ ವ್ಯಕ್ತಿಯಿಂದ ಜಮೀನನ್ನು ಹಿಂಪಡೆಯುವಲ್ಲಿ ಕ್ರಮ ಕೈಗೊಂಡರು.
ಗ್ರಾಮದ ಮುಖಂಡ ರವಿ ಮಾತನಾಡುತ್ತಾ, “ನಮ್ಮ ಮಕ್ಕಳ ಭವಿಷ್ಯದ schooling ಗಾಗಿ ಈ ಜಮೀನು ಉಳಿಸಬೇಕೆಂಬ ಛಲದಿಂದ ಹೋರಾಟ ನಡೆಸಿದ್ದೇವೆ. ಕಾನೂನು ಮುಂದೆ ಎಲ್ಲರೂ ಸಮಾನರು ಎಂಬುದನ್ನು ತಹಶೀಲ್ದಾರ್ ಮಮತಾ ಅವರು ಎತ್ತಿ ತೋರಿಸಿದ್ದಾರೆ.” ಎಂದು ಹೇಳಿದರು.
ಈ ಯಶಸ್ಸಿನ ಸಂದರ್ಭದಲ್ಲಿ ಗ್ರಾಮದ ಅನೇಕ ಹಿರಿಯರು, ಯುವಕರು, ಶಾಲಾ ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪನ್ಯಾಸಕರು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
- ನೂರ್ ಅಹಮ್ಮದ್