ಉಜಿರೆ (ಧರ್ಮಸ್ಥಳ): ನಮಗೆ ಧರ್ಮ ಬೇಕು, ಧರ್ಮಕ್ಕೆ ನಾವಲ್ಲ. ನಾವು ಧರ್ಮವನ್ನು ಕಾಪಾಡಬೇಕು, ಈ ಧರ್ಮಕ್ಷೇತ್ರ ಜನಸೇವೆ, ಸಾಮಾಜಿಕ, ಶೈಕ್ಷಣಿಕ ಸೇವೆ ಮಾಡಿಕೊಂಡು ಬಂದಿದೆ. ಇದಕ್ಕೆ ಸಹಕಾರ ನೀಡಬೇಕಾಗಿರುವುದು ನಮ್ಮ ಕರ್ತವ್ಯ . ಧರ್ಮಸ್ಥಳದ ಬಹುಮುಖಿ ಸೇವೆ, ಸಾಧನೆ ಶ್ಲಾಘನೀಯ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ಉಮಾಮಹೇಶ್ವರ, ಶಿವಪಾರ್ವತಿ ಮತ್ತು ಗೌರೀಶಂಕರ ಎಂಬ 3 ನೂತನ ಕಲ್ಯಾಣ ಮಂಟಪಗಳ ಸಮುಚ್ಚಯವನ್ನು ಉದ್ಘಾಟಿಸಿ ಮಾತನಾಡಿದರು.

ಕಲ್ಯಾಣ ಮಂಟಪ ನಿರ್ಮಾಣ ಪುಣ್ಯದ ಕಾಯಕ.ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ಎಲ್ಲರಿಗೂ ಅವಕಾಶವನ್ನು ಮಾತ್ರ ಕೊಡುತ್ತಾರೆ. ಅದನ್ನು ಸದುಪಯೋಗ ಮಾಡಿ, ಉನ್ನತ ಸಾಧನೆ ಮಾಡುವುದು ನಮ್ಮ ಉದ್ದೇಶವಾಗಿರಬೇಕು ಎಂದು ಹೇಳಿದರು.
ದೇವರಲ್ಲಿ ಶ್ರದ್ಧಾ-ಭಕ್ತಿಯಿಂದ ನಂಬಿಕೆ ಇಟ್ಟು ಪ್ರಾರ್ಥನೆ ಮಾಡಿದಾಗ ನಮ್ಮ ಇಷ್ಟಾರ್ಥಗಳು ಸುಲಲಿತವಾಗಿ ಈಡೇರುತ್ತವೆ. ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ಮನುಷ್ಯತ್ವದಿಂದ ಸಾರ್ಥಕ ಜೀವನ ನಡೆಸಿದಾಗ ಮೋಕ್ಷ ಸಾಧನೆ ಸಾಧ್ಯವಾಗುತ್ತದೆ. ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಮಾತು ಬಿಡ ಮಂಜುನಾಥ ಎಂಬ ಮಾತು ಚಿರಪರಿಚಿತ ಎಂದು ಅವರು ವಿಶೇಷವಾಗಿ ಉಲ್ಲೇಖಿಸಿದರು.

ಪರಿಶುದ್ಧ ಮನಸ್ಸಿನಿಂದ ಪುಣ್ಯಕ್ಷೇತ್ರಗಳ ದರ್ಶನ ಮಾಡಿದಾಗ ನಮಗೆ ದೇವರ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ. ಧರ್ಮಸ್ಥಳದಲ್ಲಿ ನಿತ್ಯವೂ ನಡೆಯುತ್ತಿರುವ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ಎಂಬ ಚತುರ್ದಾನಗಳು ದೇಶದ ಇತಿಹಾಸದಲ್ಲೇ ಸುವರ್ಣಾಕ್ಷರಗಳಿಂದ ಬರೆಯಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಹೆಗ್ಗಡೆಯವರು ಜೈನರು, ಹಿಂದೂ ದೇವಸ್ಥಾನ ಎಂದು ಟೀಕಿಸುವವರನ್ನು ಖಂಡಿಸಿದ ಡಿ.ಕೆ.ಶಿ., ಪೂಜ್ಯ ಹೆಗ್ಗಡೆಯವರು ಇದಕ್ಕೆ ಅಂಜಬೇಕಾಗಿಲ್ಲ, ಅಳುಕಬೇಕಾಗಿಲ್ಲ. ನಿಮ್ಮ ಜತೆ ನಾವಿದ್ದೇವೆ. ತಮ್ಮ ಹಾಗೂ ಕ್ಷೇತ್ರ ರಕ್ಷಣೆಗೆ ನಾವೆಲ್ಲ ಸಿದ್ಧರು, ಬದ್ಧರುʼʼ ಎಂದು ತಿಳಿಸಿದರು. ಟೀಕೆಗಳು ಸಾಯುತ್ತವೆ ನಾವು ಮಾಡುವ ಕಾರ್ಯಗಳು ಶಾಶ್ವತವಾಗಿರುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಬದುಕಿನ 4 ಹಂತಗಳಲ್ಲಿ ಮದುವೆಯೊಂದಿಗೆ ಗೃಹಸ್ಥಾಶ್ರಮ ಸೇರುವುದು ಅತ್ಯಂತ ಪವಿತ್ರ ಕಾರ್ಯ ಹಾಗೂ ಜೀವನದ ಮುಖ್ಯ ಹಂತ ಎಂದು ಹೇಳಿದರು.
ಗೃಹಸ್ಥ ಜೀವನ ಅಮೂಲ್ಯವಾಗಿದ್ದು, ದಂಪತಿ ಪರಸ್ಪರ ಪ್ರೀತಿ-ವಿಶ್ವಾಸದಿಂದ ಸಾರ್ಥಕ ಜೀವನ ನಡೆಸಬೇಕು. ಧರ್ಮಸ್ಥಳದಲ್ಲಿ ಮದುವೆಯಾದರೆ ತಮ್ಮ ಬದುಕು ಸಾರ್ಥಕ ಹಾಗೂ ಸುಖಮಯವಾಗುತ್ತದೆ ಎಂದು ಭಕ್ತರಲ್ಲಿ ನಂಬಿಕೆ ಹಾಗೂ ವಿಶ್ವಾಸವಿದೆ. ಭಕ್ತರ ಅನುಕೂಲಕ್ಕಾಗಿ ಧರ್ಮಸ್ಥಳದಲ್ಲಿ 3 ಕಲ್ಯಾಣ ಮಂಟಪಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಬೆಳ್ತಂಗಡಿ, ಭದ್ರಾವತಿ, ಬೆಂಗಳೂರು, ಬಂಟ್ವಾಳ, ಮೈಸೂರು ಮೊದಲಾದ ಕಡೆಗಳಲ್ಲಿ ಕೂಡಾ ಧರ್ಮಸ್ಥಳದ ವತಿಯಿಂದ ಕಲ್ಯಾಣ ಮಂಟಪಗಳನ್ನು ನಿರ್ಮಿಸಲಾಗಿದೆ” ಎಂದು ತಿಳಿಸಿದರು.

ಕೆರೆಗಳಿಗೆ ಕಾಯಕಲ್ಪ, ಶುದ್ಧ ಕುಡಿಯುವ ನೀರು ಪೂರೈಕೆ, ಸ್ವ-ಸಹಾಯ ಸಂಘಗಳು, ಸಾಮೂಹಿಕ ವಿವಾಹ ಮೊದಲಾದ ಧರ್ಮಸ್ಥಳದ ಸೇವಾಕಾರ್ಯಗಳನ್ನು ಸರ್ಕಾರ ಕೂಡಾ ಮಾದರಿಯಾಗಿ ಸ್ವೀಕರಿಸಿ ಅನುಷ್ಠಾನಗೊಳಿಸಿರುವುದು ಹೆಚ್ಚಿನ ಸಂತೋಷವನ್ನುಂಟು ಮಾಡಿದೆ ಎಂದು ಅವರು ಹೇಳಿದರು.

ಈ ವೇಳೆ ಹೇಮಾವತಿ ವಿ.ಹೆಗ್ಗಡೆ, ಶ್ರದ್ಧಾಅಮಿತ್, ಡಿ.ಸುರೇಂದ್ರ ಕುಮಾರ್, ಅನಿತಾಸುರೇಂದ್ರಕುಮಾರ್, ಡಿ. ಶ್ರೇಯಸ್ಕುಮಾರ್, ಡಿ.ನಿಶ್ಚಲ್ ಕುಮಾರ್, ಡಿ. ಹರ್ಷೇಂದ್ರಕುಮಾರ್, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮಾಜಿ ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ಶಿವರಾಂ ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ