ಚಿಕ್ಕಮಗಳೂರು- ನಿಸರ್ಗಮುಖಿ ಬದುಕುವ ಹಂಬಲಕ್ಕೆ ಬೆಂಬಲ ನಿಲ್ಲುವ ಸಂಕಲ್ಪ ನಮ್ಮೆಲ್ಲರದ್ದಾಗಬೇಕು ಎಂದು ಸಾಹಿತಿ-ವಾಗ್ಮಿ-ಚಿಂತಕ ಚಟ್ನಳ್ಳಿಮಹೇಶ್ ನುಡಿದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ನೇತೃತ್ವದಲ್ಲಿ ಶ್ರೀದೇವಿರಮ್ಮ ದೇವಾಲಯ ಅಭಿವೃದ್ಧಿ ಸಮಿತಿ, ಶ್ರೀ ದೇವಿ ಗುರುಕುಲ, ಪಾರ್ವತಿ ಮಹಿಳಾ ಮಂಡಳಿಗಳ ಸಹಯೋಗದೊಂದಿಗೆ ಬಿಂಡಿಗ ಶ್ರೀದೇವಿರಮ್ಮ ದೇವಾಲಯದ ಆವರಣದಲ್ಲಿ ಇಂದು ಆಯೋಜಿಸಿದ್ದ ‘ವಿಶ್ವ ಪರಿಸರ ದಿನಾಚರಣೆ’ಯಲ್ಲಿ ಅವರು ಪರಿಸರ ಜಾಗೃತಿ ಕುರಿತಂತೆ ಮಾತನಾಡಿದರು.
ಆಧುನಿಕತೆ, ನಾಗರಿಕತೆ ಮಿತಿಮೀರಿದ ಭರಾಟೆ ವೇಗದಲ್ಲಿ ಜನಸಮುದಾಯದ ಮನಸ್ಸಿನಷ್ಟೇ ಮಣ್ಣು ಕಲುಷಿತವಾಗುತ್ತಿರುವುದು ವಿಷಾದದ ಸಂಗತಿ. ಪ್ರತಿ ನಿಮಿಷವೂ ಭೂಮಿಯ ಒಡಲನ್ನು ಖನಿಜ, ಇಂಧನ, ಕಲ್ಲಿಗಾಗಿ ಬಗೆಯುತ್ತಿದ್ದೇವೆ. ಕ್ರಿಮಿನಾಶಕ, ಕೀಟನಾಶಕ, ಕಳೆನಾಶಕಗಳನ್ನು ಭೂಮಿಗೆ ಸೇರಿಸುತ್ತಿದ್ದೇವೆ. ಪ್ಲಾಸ್ಟಿಕ್ ಮತ್ತಿತರ ಕರಗದ ರಾಸಾಯನಿಕಗಳನ್ನು ಸೇರಿಸುತ್ತಿರುವುದು ಭವಿಷ್ಯದ ನೆಮ್ಮದಿಯ ಬದುಕಿಗೆ ದೊಡ್ಡಪೆಟ್ಟು ಎಂದರು.

ಇಂದಿನ ಮಕ್ಕಳು ನಾಳೆಯ ಪ್ರಜೆಗಳೆಂಬ ನಾಣ್ನುಡಿ ಇದೆ. ಆದರೆ ವಾಸ್ತವವಾಗಿ ನಾಳಿನ ಪರಾಕ್ರಮಿ, ಪರಿಸರಪ್ರೇಮಿ ಪ್ರಾಮಾಣಿಕ ಪ್ರಜೆಗಳಾಗಿಸುವ ಹೊಣೆ-ಸವಾಲು ನಮ್ಮೆಲ್ಲರ ಮೇಲಿದೆ ಎಂದ ಚಟ್ನಳ್ಳಿಮಹೇಶ್, ಮರ ನೆಟ್ಟರೆ ವರ ನೆಡದಿದ್ದರೆ ಬರ ಎಂಬ ನಿತ್ಯ ಸತ್ಯವನ್ನು ಅರ್ಥ ಮಾಡಿಕೊಂಡು ಬದುಕಬೇಕೆಂದರು.
ನಿಸರ್ಗ ಪ್ರಕೃತಿಯ ಬಗ್ಗೆ ವೈಜ್ಞಾನಿಕ ಶಿಕ್ಷಣ ಇಲ್ಲದಿದ್ದರೂ ನಮ್ಮ ಹಿರಿಯರು ಜೀವಾನುಭವದಿಂದಲೇ ನಿಸರ್ಗ ಉಳಿಸುವ ಬಹುದೊಡ್ಡ ಪ್ರಾಕೃತಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ನಾವೀಗ ‘ಎಲ್ಲ ನನಗೇ ಆಗಬೇಕು’ ಮತ್ತು ‘ನನಗೇನಾಗಬೇಕು’ ಎಂಬ ನೀತಿ ಅನುಸರಿಸುತ್ತಿರುವುದು ಆಘಾತಕಾರಿ. ಎಲ್ಲವೂ ನನಗೇ ಬೇಕು ಎನ್ನುವ ದುರಾಸೆ ಒಂದೆಡೆಯಾದರೆ ಸದಾಚಾರದ ನಿರ್ಲಕ್ಷ್ಯ ಮತ್ತೊಂದೆಡೆ. ನಿಸ್ವಾರ್ಥತತೆ ಹಾಗೂ ಸಮಾಜಮುಖಿ ಚಿಂತನೆ ಅಳವಡಿಸಿಕೊಂಡರೆ ಸಹಜವಾಗಿಯೆ ಪ್ರಕೃತಿ ಸಂರಕ್ಷಣೆಯಾಗುತ್ತದೆ ಎಂದರು.

ನಮ್ಮ ಜನಪದ ಸಾಹಿತ್ಯದ ಜೊತೆಗೆ ಕುವೆಂಪು, ಬೇಂದ್ರೆ, ತೇಜಸ್ವಿ, ಪುತಿನ ಸೇರಿದಂತೆ ನಮ್ಮೆಲ್ಲ ಸಾಹಿತಿಗಳ ಬರಹದ ವಸ್ತುವು ಪ್ರಕೃತಿ ಪೂರಕವಾಗಿದೆ. ಹಕ್ಕಿಗಳ ಹಾರುವುದನ್ನೆ ಕುವೆಂಪು ದೇವರು ಮಾಡಿದ ಋಜುವೆಂದು ಬಣ್ಣಿಸುತ್ತಾರೆ. ‘ನೀ ಸೃಷ್ಟಿಸಲಾಗದ ಹೂ ನಿನಂದೇಕೋ ಅದರ ಸಾವು’ ಎಂಬ ಕವಿವಾಣಿ ಉಲ್ಲೇಖಿಸಿದ ಮಹೇಶ್, ಹಲವಾರು ವರ್ಷ ನೆರಳಾಗಿ ನಿಂತ ಮರ ತೊಲೆಯಾಗಿ ಉಳಿಯಿತು ನೂರುವರ್ಷ. ಅದೇ ನೂರುವರ್ಷ ಆಳಿದ ಅರಸ ಹೆಣವಾಗಿ ಉಳಿಯಲಿಲ್ಲ ಮೂರುದಿನವಸ ಎಂದರು.
ಸಮಾರAಭ ಉದ್ಘಾಟಿಸಿದ ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿ ರಮೇಶ್ಬಾಬು ಸ್ವಚ್ಛ, ಶುಭ್ರ ಪರಿಸರವನ್ನು ಕಾಲಾನುಕಾಲಕ್ಕೆ ಮುಂದಿನಪೀಳಿಗೆಗೆ ಬಳುವಳಿಯಾಗಿ ಉಳಿಸುವ ಜಾಗತೀಕ ಹೊಣೆಗಾರಿಕೆ ನಮ್ಮದಾಗಬೇಕು.

ಪರಿಸರ ಪ್ರಜ್ಞೆ ಸದಾ ಜಾಗೃತವಾಗಬೇಕು. ಮಾಲಿನ್ಯ ನಿಯಂತ್ರಿಸಲು ವಿಶೇಷ ಪ್ರಯತ್ನ ಅಗತ್ಯ. ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳನ್ನು ಅರ್ಥಮಾಡಿಕೊಂಡು ನಿಯಂತ್ರಿಸಲು ಕರ್ಯಪ್ರವೃತ್ತರಾಗಬೇಕು. ದಟ್ಟ ಅರಣ್ಯ ಇದ್ದರೆ ಒಳ್ಳೆಯ ಹವಾಮಾನ, ಆಹ್ಲಾದಕರ ವಾತಾವರಣ ಸೃಷ್ಟಿಯಾಗುತ್ತದೆ. ನಮ್ಮ ಬದುಕು ಹಸನಾಗುತ್ತದೆ ಎಂದರು.
ದೈವದತ್ತವಾದ ಕಾಡು ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ. ವನಸ್ಪತಿ, ಜೈವಿಕ ಕಾಡು ಸೃಷ್ಟಿಯಾದಷ್ಟು ಉಪಯುಕ್ತ. ಅರಣ್ಯ ಇಲಾಖೆಯ ಜೊತೆಗೆ ಸಂಘ ಸಂಸ್ಥೆಗಳು, ನಾಗರಿಕರು ಕೈಜೋಡಿಸಿ ಪರಿಸರ ಸಂರಕ್ಷಣೆಯ ಕರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ರಮೇಶ್ಬಾಬು ಕರೆ ನೀಡಿದರು.

ಪ್ರತಿಜ್ಞಾ ವಿಧಿ: ‘ಸರಳಜೀವನ ಸೂತ್ರವನ್ನು ನಮ್ಮ ಜೀವನಕ್ರಮದಲ್ಲಿ ಅಳವಡಿಸಿಕೊಂಡು ಹಿತ-ಮಿತವಾದ ಬದುಕಿನೊಂದಿಗೆ ನಿಸರ್ಗಕ್ಕೆ ಪೂರಕವಾಗಿ ಬಾಳು ಸವೆಸುತ್ತೇವೆ. ಜೀವಸಂಕುಲಕ್ಕೆ ಆಸರೆ ಮತ್ತು ಪೋಷಣೆ ನೀಡುತ್ತಿರುವ ಈ ಪ್ರಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸುತ್ತೇನೆಂದು ಆತ್ಮಸಾಕ್ಷಿಯಾಗಿ ಸಂಕಲ್ಪಮಾಡಿ ಪ್ರಕೃತಿ ಮಾತೆಗೆ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ವಚನ ನೀಡುತ್ತೇನೆ’ ಎಂಬ ಪ್ರತಿಜ್ಞಾವಿಧಿಯನ್ನು ಶ್ರೀ ದೇವಿ ಗುರುಕುಲದ ಸಂಸ್ಥಾಪಕ ವಿದ್ವಾನ್ ಡಾ.ದಯಾನಂದಮೂರ್ತಿಶಾಸ್ತ್ರೀ ಬೋಧಿಸಿದರು
ಶ್ರೀದೇವಿರಮ್ಮ ದೇವಾಲಯ ಅಭಿವೃದ್ಧಿ ಸಮಿತಿಅಧ್ಯಕ್ಷ ಎಂ.ಎ.ಕುಲಶೇಖರ್ ಸಸ್ಯಾರೋಹಣ ನೆರವೇರಿಸಿ ಶುಭಹಾರೈಸಿದರು. ಮಲ್ಲೇನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಅಧ್ಯಕ್ಷತೆ ವಹಿಸಿದ್ದರು. ಕಡೂರಿನ ಡಾ.ಸುಮಾಉಮೇಶ್ ಮತ್ತು ಬೇಲೂರಿನ ಚಂದನ್ ಅವರಿಂದ ಪರಿಸರ ಗೀತೆಗಳ ಗಾಯನ ಗಮನಸೆಳೆಯಿತು.

ಮಾ.ಸಂ.ಪ್ರ. ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಸಿ ಕಳೆದ 10ವರ್ಷಗಳಿಂದ ನಿರಂತರವಾಗಿ ಪರಿಸರಕ್ಕೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ಪ್ರತಿಷ್ಠಾನ ನಡೆಸಿಕೊಂಡು ಬಂದಿದೆ. ರಂಭಾಪುರಿ ಜಗದ್ಗುರುಗಳವರ ಹಸಿರುಪಾದಯಾತ್ರೆ ಸಸಿವಿತರಣೆ ಪರಿಣಾಮಕಾರಿಯಾಗಿದ್ದು, ನಗರದ ವಿವಿಧೆಡೆ ನೂರಾರು ಮರಗಳು ಸಾಕ್ಷಿಯಾಗಿವೆ ಎಂದರು.
ದೇವಸ್ಥಾನ ಸಮಿತಿ ಸದಸ್ಯ ಎಂ.ಕೆ.ದಿನೇಶ್ ಸ್ವಾಗತಿಸಿ, ಪಿಡಿಓ ಸುಷ್ಮಿತಾ ವಂದಿಸಿದರು.
ಮುಖಂಡರಾದ ಬಸವರಾಜೇಗೌಡ, ದೇವಿರಶೆಟ್ರು, ಬಿಳಿಯಪ್ಪ, ಬಿಂಡಿಗ ನಾಗರಾಜ್, ಕುಮಾರ್ ಮತ್ತಿತರರು ವೇದಿಕೆಯಲ್ಲಿದ್ದರು. ಮಲ್ಲೇನಹಳ್ಳಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ಶ್ರೀ ಪಾರ್ವತಿ ಮಹಿಳಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು. ದೇವಸ್ಥಾನದ ಆವರಣದಲ್ಲಿ ಬಿಲ್ವಪತ್ರೆ ಹಾಗೂ ಹಣ್ಣಿನ ಗಿಡಗಳನ್ನು ನೆಡೆಸಲಾಯಿತು.