ಚಿಕ್ಕಮಗಳೂರು- ಮೆಡಿಕಲ್ ಕಾಲೇಜು: 3.5 ಕೋಟಿ ರೂ.ವೆಚ್ಚದಲ್ಲಿ ಮಳೆ ನೀರಿನ ಕೊಯ್ಲು ಯೋಜನೆ-ಸಚಿವರ ಭರವಸೆ

ಚಿಕ್ಕಮಗಳೂರು, ಜೂ.11 : ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನೀರಿನ ಸಮಸ್ಯೆ ಬಗೆಹರಿಸಲು ಮಳೆ ನೀರಿನ ಕೊಯ್ಲು ಯೋಜನೆಯನ್ನು 3.5 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಅವರು ತಿಳಿಸಿದರು.

ಇಂದು ಮಧ್ಯಾಹ್ನ ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿ ವೀಕ್ಷಣೆ ಮಾಡಿದ ಬಳಿಕ ಅವರು ಮಾತನಾಡಿ, ಇಲ್ಲಿನ ನೀರಿನ ಸಮಸ್ಯೆ ಬಗ್ಗೆ ಈಗಾಗಲೇ ಕ್ಷೇತ್ರದ ಶಾಸಕರಾದ ಹೆಚ್.ಡಿ.ತಮ್ಮಯ್ಯ ಅವರು ಹಾಗೂ ಸಂಸ್ಥೆಯ ನಿರ್ದೇಶಕರು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ತಾವು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಗತಿ ವೀಕ್ಷಣೆ ಸಲುವಾಗಿ ಆಗಮಿಸಿದ್ದಾಗಿ ತಿಳಿಸಿದ ಅವರು, ಈಗಾಗಲೇ ಸಂಸ್ಥೆಯ ಕಾಮಗಾರಿ ಶೇ.98 ರಷ್ಟು ಪೂರ್ಣಗೊಂಡಿದೆ ಎಂದರು. ಹಾಗೆಯೇ ಬಹು ನಿರೀಕ್ಷಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ತಾಯಿ-ಮಗುವಿನ ಆರೈಕೆ ಕೇಂದ್ರದ ಕಾಮಗಾರಿ ಕೂಡ ಶೇ.75 ರಷ್ಟು ಪೂರ್ಣಗೊಂಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರುಗಳಾದ ಹೆಚ್.ಡಿ.ತಮ್ಮಯ್ಯ, ಜಿ.ಹೆಚ್.ಶ್ರೀನಿವಾಸ್, ಶಿವಮೊಗ್ಗ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಡೀನ್ ಡಾ.ಹರೀಶ್, ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *