ಚಿಕ್ಕಮಗಳೂರು, ಜೂನ್ 03:- ಬೇಸಿಗೆ ರಜೆ ಮುಗಿಸಿಕೊಂಡು ಶಾಲೆಗೆ ಆಗಮಿಸಿದ ಶಾಂತಿ ನಗರದ ಪಿಎಂಶ್ರೀ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶಾಲಾ ಆಡಳಿತ ವರ್ಗ ಸೋಮವಾರ ಪುಷ್ಪಗುಚ್ಚ ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.
ವಿದ್ಯಾರ್ಥಿಗಳು ಆಗಮಿಸುವ ಮುನ್ನವೇ ಶಾಲೆಗಳನ್ನು ತಳಿರುತೋರಣ, ರಂಗೋಲಿಯಿಂದ ಸಿಂಗರಿಸಿ ಬರಮಾಡಿಕೊಂಡರು. ಚಿಣ್ಣರು ಖುಷಿಯಿಂದಲೇ ಶಾಲೆಗಳತ್ತ ಮುಖ ಮಾಡಿದವು. ಸಮವಸ್ತ್ರ, ಧರಿಸಿಕೊಂಡು ಶಾಲಾ ಬ್ಯಾಗ್ನೊಂದಿಗೆ ಬಂದ ಮಕ್ಕಳನ್ನು ಸಂತೋಷದಿಂದ ಕರೆತಂದರು.
ಬಳಿಕ ಶಾಲಾಮಕ್ಕಳು, ಪಾಲಕರು ಹಾಗೂ ಶಾಲಾ ಶಿಕ್ಷಕರು ವಾರ್ಡಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ಮರು ದಾಖಲಿಸುವ ಸಲುವಾಗಿ ಜಾಥಾದ ಮೂಲಕ ಜಾಗೃತಿ ಮೂಡಿಸಿದರು.

ಶಾಲಾ ಮುಖ್ಯೋಪಾಧ್ಯಾಯ ಚಂದ್ರಪ್ಪ ಮಾತನಾಡಿ, ಇಂದಿನಿಂದ ಶಾಲೆಗಳು ಆರಂಭಗೊಂಡು ಮಕ್ಕಳಿಗೆ ಪಾಠಪ್ರವಚನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಸರ್ಕಾರದ ಸವಲತ್ತುಗಳನ್ನು ಶಾಲೆಯ ವಿದ್ಯಾರ್ಥಿಗಳಿಗೆ ಒದಗಿಸಿಕೊಟ್ಟು ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದರು.
ಕಸಬಾ ಹೋಬಳಿ ಶಿಕ್ಷಣ ಸಂಯೋಜಕ ಜಾನಕಮ್ಮ ಮಾತನಾಡಿ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದ್ದನ್ನು ನೋಡುವುದೇ ಒಂದು ಸಂಭ್ರಮ, ಇಂದು ಈ ಶಾಲೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿ ದೆ. ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸಿಸಿ ಶಾಲೆಗೆ ಕೀರ್ತಿ ತರುವುದರ ಜೊತೆಗೆ ಉನ್ನತ ಹುದ್ದೆಗೆ ಹೋಗಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಪೋಷಕರು, ವಿದ್ಯಾರ್ಥಿ ಗಳು ಹಾಜರಿದ್ದರು.
– ಸುರೇಶ್ ಎನ್.