ಚಿಕ್ಕಮಗಳೂರು-ತಾಲೂಕಿನಲ್ಲಿ ಮಳೆ ನಿಂತರೂ ಚೇತರಿಸಿಕೊಳ್ಳಲಾಗದ ಸ್ಥಿತಿ-ಜಿಲ್ಲಾಡಳಿತವಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಸೂಕ್ತ ರೀತಿ ಸ್ಪಂದಿಸುತ್ತಿಲ್ಲ-ಸಾಮಾಜಿಕ ಕಾರ್ಯಕರ್ತ ಹೊಲದಗದ್ದೆ ಗಿರೀಶ್ ಆರೋಪ

ಚಿಕ್ಕಮಗಳೂರು: ಮುಂಗಾರು ಪೂರ್ವದಲ್ಲಿ ಸುರಿದ ಕೇವಲ ಒಂದು ವಾರದ ಮಳೆಗೆ ಮಲೆನಾಡು ತತ್ತರಿಸಿದ್ದು, ಮಳೆ ನಿಂತರೂ ಚೇತರಿಸಿಕೊಳ್ಳಲಾಗದ ಸ್ಥಿತಿ ಇದ್ದರೂ ಜಿಲ್ಲಾಡಳಿತವಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಸೂಕ್ತ ರೀತಿ ಸ್ಪಂದಿಸುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಹೊಲದಗದ್ದೆ ಗಿರೀಶ್ ಆರೋಪಿಸಿದ್ದಾರೆ.

ಭಾರೀ ಮಳೆ, ಬಿರುಗಾಳಿಯಿಂದಾಗಿ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರಿಳಿವೆ, ಹಲವಾರು ಮರಗಳು ಉರುಳಿಬಿದ್ದು ವಿದ್ಯುತ್ ಲೈನ್‌ಗೆ ಭಾರೀ ಹಾನಿ ಸಂಭವಿಸಿದೆ. ಇದರ ಪರಿಣಾಮ ಮಳೆ ನಿಂತು ವಾರ ಕಳೆಯುತ್ತಾ ಬಂದರೂ ಮಲೆನಾಡಿನ ಬಹುತೇಕ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಮುಳುಗುವಂತಾಗಿದೆ.

ಮೆಸ್ಕಾA ಸಿಬ್ಬಂದಿಗಳು ತಕ್ಷಣ ಸ್ಪಂದಿಸಿ ಕಂಬಗಳನ್ನು ಮರುಸ್ಥಾಪಿಸಿ, ಲೈನ್‌ಗಳನ್ನು ದುರಸ್ಥಿಪಡಿಸಲು ಹಗಲು ರಾತ್ರಿ ಹರಸಾಹಸ ಪಡುತ್ತಿದ್ದರೂ ಮಲೆನಾಡು, ಪಶ್ಚಿಮಘಟ್ಟದ ತೋಟಗಳು, ಹಳ್ಳ ಕೊಳ್ಳಗಳನ್ನು ದಾಟಿ ಪರಿಹಾರ ಕಾರ್ಯಕೈಗೊಳ್ಳುವುದಕ್ಕೆ ತೊಡಕಾಗುತ್ತಿದೆ. ಬಹಳಷ್ಟು ಕಡೆ ಅವರ ಶ್ರಮಕ್ಕೆ ಸೂಕ್ತ ಫಲ ಸಿಗುತ್ತಿಲ್ಲ ಎಂದಿದ್ದಾರೆ.

ಇದು ಕೇವಲ ಈ ವರ್ಷದ ಮಳೆಗಾಲದ ಸಮಸ್ಯೆಯಲ್ಲ ತಲೆಮಾರುಗಳಿಂದ ಇರುವಂತಹದ್ದು, ಮುಂದೆಯೂ ಎದುರಾಗುವಂತಹದ್ದೇ ಈ ಕಾರಣಕ್ಕೆ ಇದಕ್ಕೊಂದು ಶಾಶ್ವತ ಪರಿಹಾರ ಕ್ರಮವನ್ನು ಸರ್ಕಾರ ಮತ್ತು ಇಂಧನ ಇಲಾಖೆ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಂಬಗಳ ಮೂಲಕ ವಿದ್ಯುತ್ ಲೈನ್ ಕೊಂಡೊಯ್ಯುವುದಕ್ಕೆ ಇತಿಶ್ರೀ ಹಾಡಿ ಭೂಮಿಯೊಳಗಿನಿಂದ ವಿದ್ಯುತ್ ಕೇಬಲ್‌ಗಳನ್ನು ಅಳವಡಿಸುವ ಕಾರ್ಯ ಇನ್ನಾದರೂ ಆಗಬೇಕಿದೆ. ಇದರಿಂದ ವಿದ್ಯುತ್ ಕಡಿತ, ಕಂಬಗಳಿಗೆ ಹಾನಿ, ವಿದ್ಯುತ್ ಶಾಕ್‌ನಿಂದ್ ಸಂಭವಿಸುವ ಸಾವು-ನೋವುಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಸಲಹೆ ಮಾಡಿದ್ದಾರೆ.

ಇತ್ತೀಚೆಗೆ ಮಲೆನಾಡಿನ ಎಲ್ಲೆಡೆ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ ಭೂಮಿಯೊಳಗೆ ಕೇಬಲ್ ಅಳವಡಿಸುವುದು ದುಬಾರಿಯೂ ಆಗುವುದಿಲ್ಲ. ಕಷ್ಟಸಾಧ್ಯವೂ ಅಲ್ಲ. ಇದನ್ನು ಕಾರ್ಯಗತಗೊಳಿಸಿದಲ್ಲಿ ಮರಗಳು ಬಿದ್ದು ಲೈನ್‌ಗೆ ಹಾನಿ ಸಂಭವಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ. ಎಷ್ಟೇ ಮಳೆ ಸುರಿದರೂ ಯಾವ ಕುಗ್ರಾಮಕ್ಕೂ ವಿದ್ಯುತ್ ಕಡಿತಗೊಳ್ಳುವುದಿಲ್ಲ ಎಂದಿದ್ದಾರೆ.
ಪ್ರತಿ ವರ್ಷ ಮಳೆಗಾಲದಲ್ಲಿ ಹಾನಿಯಾಗುವ ವಿದ್ಯುತ್ ಕಂಬಗಳು ಮತ್ತು ಲೈನ್‌ಗಳ ದುರಸ್ಥಿಗೆ ವೆಚ್ಚಮಾಡುವ ಹಣವನ್ನು ಕೇವಲ ಭೂಮಿಯೊಳಗೆ ಕೇಬಲ್ ಅಳವಡಿಸಲು ವೆಚ್ಚ ಮಾಡಿದರೇ ಪ್ರತಿವರ್ಷ ಕಾಡುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಸರ್ಕಾರಕ್ಕೆ ಹಣ ಉಳಿತಾಯವಾಗುತ್ತದೆ. ಹಾನಿ, ನಷ್ಟವೂ ತಪ್ಪುತ್ತದೆ ಎಂದಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ಭೂ ಮಾರ್ಗದಲ್ಲಿ ವಿದ್ಯುತ್ ಕೇಬಲ್ ಅಳವಡಿಸುವ ಯೋಜನೆಯನ್ನು ಸದಸನದಲ್ಲಿ ಪ್ರಸ್ತಾಪಿಸಿದ್ದರು. ಇದೀಗ ಅವರದ್ದೇ ಸರ್ಕಾರವೂ ಇದೆ ಆದರೆ ಈಗೇಕೆ ಮೌನ ವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಸಾಲದ್ದಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರೇ ಈ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಮಲೆನಾಡಿನಲ್ಲೇ ಕಾಫಿ ತೋಟ ಮಾಡಿಕೊಂಡಿದ್ದಾರೆ. ಆದರೆ ಅವರು ತಮ್ಮ ಇಲಾಖೆ ಸಮಸ್ಯೆಯನ್ನೇ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಇನ್ನು ಚರಂಡಿ, ರಸ್ತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವೇ ಇದ್ದಂತಿಲ್ಲ ಎಂದು ದೂರಿದ್ದಾರೆ.

ಸಚಿವರ ತೋಟದಲ್ಲಿ ನಿರಂತರ ಬಳಸುವಷ್ಟು ವಿದ್ಯುತ್ ಉತ್ಪಾದಿಸಬುದಾದ ಸಾಮರ್ಥ್ಯದ ಜನರೇಟರ್‌ಗಳಿವೆ. ಅಷ್ಟೊಂದು ಆರ್ಥಿಕ ಶಕ್ತಿ ಅವರ ಬಳಿ ಇದೆ. ಆದರೆ ಮಲೆನಾಡಿನ ಸಾಮಾನ್ಯ ಜನರು ಮಾತ್ರ ಹತ್ತಾರು ದಿನಗಳಿಂದ ದೀಪದ ಬೆಳಕಿನಲ್ಲಿ ಕಾಲ ದೂಡಬೇಕಾಗಿದೆ. ನೇರವಾಗಿ ಹೆಲಿಕಾಪ್ಟರ್‌ನಲ್ಲಿ ಬಂದು ತಮ್ಮ ತೋಟಕ್ಕೆ ಬಂದಿಳಿದು ಮತ್ತೆ ಹೆಲಿಕಾಪ್ಟರ್ ಏರಿ ಹೊರುಟುಹೋಗುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಮಾನ್ಯ ಜನರು ಗೋಳು ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಮಳೆಯಿಂದ ಗುಡ್ಡಗಳು ಜರಿದು, ಭೂ ಕುಸಿತ ಉಂಟಾಗಿ ಹಾನಿಯಾಗಿದ್ದ ರಸ್ತೆಗಳೇ ಇನ್ನೂ ದುರಸ್ಥಿ ಆಗದೆ, ಸೂಕ್ತ ಸಂಪರ್ಕ ವ್ಯವಸ್ಥೆ ಇಲ್ಲದೆ ಈಗಲೂ ಜನರು ಪರದಾಡುತ್ತಿದ್ದಾರೆ ಇದೀಗ ಮುಂಗಾರು ಪೂರ್ವ ಮಳೆಯಿಂದಾಗಿ ಒಂದಷ್ಟು ರಸ್ತೆಗಳು ಹಾಳಾಗಿವೆ. ಇದೆಲ್ಲವನ್ನೂ ದುರಸ್ಥಿ ಪಡಿಸುವುದು ಯಾವಾಗ ಎಂದು ಪ್ರಶ್ನಿಸಿರುವ ಅವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಡಳಿತಗಳು ಇನ್ನಾದರೂ ಜಡತ್ವ ಬಿಟ್ಟು ಕ್ಷಿಪ್ರಗತಿಯಲ್ಲಿ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *