ಚಿಕ್ಕಮಗಳೂರು, ಮೇ.17:- ಭೂಮಿ ಮತ್ತು ವಸತಿಯ ಹಕ್ಕುಪತ್ರ ನೀಡಿ ಕಡುಬಡವರಾದ ದಲಿತರಿಗೆ ಸರ್ಕಾರಿ ಸವಲತ್ತು ಒದಗಿಸಿಕೊಡಬೇಕು ಎಂದು ದಸಂಸ ಮುಖಂಡರು ಶನಿವಾರ ಜಿಲ್ಲಾ ಉಸ್ತುವಾರಿ ಸಚಿ ವ ಕೆ.ಜೆ.ಜಾರ್ಜ್ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು ಕಳಸ ತಾಲ್ಲೂಕಿನ ತನೂ ಡಿ ಗ್ರಾಮದ 170 ಕುಟುಂಬಗಳು ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಕಾಫಿ, ಮೆಣಸು, ಬಾಳೆ, ತೆಂಗು, ಸಿಲ್ವರ್ ಬೆಳೆಗಳನ್ನು ಸಾಗುವಳಿ ಮಾಡಿಕೊಂಡು ಸ್ವಾಧೀನಾಭವದಲ್ಲಿದ್ದಾರೆ ಎಂದರು.

ಜಿಲ್ಲೆಯ ಬಹುತೇಕ ದಲಿತರಿಗೆ ಅಕ್ರಮ-ಸಕ್ರಮದಡಿ ಭೂ ಮಂಜೂರು ಮಾಡದೇ ದಲಿತ ಕುಟುಂಬಗಳು ಭೂ ವಂಚಿತರಾಗಿವೆ. ಭೂಮಿಯನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳಿಗೆ ಇದುವರೆಗೂ ನಮೂನೆ 53ರಡಿ ಅಕ್ರಮ-ಸಕ್ರಮದಡಿ ಮಂಜೂರಾತಿ ಮಾಡಿಕೊಟ್ಟಿರುವುದಿಲ್ಲ ಎಂದು ಹೇಳಿದರು.
ಮಂಜೂರಾತಿಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಭಾರಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಬೂಬು ಉತ್ತರ ನೀಡಿ ಕಾಲಹರಣ ಮಾಡುತ್ತಿವೆ. ದಲಿತರೊಂದಿಗೆ ಅರ್ಜಿ ಹಾಕಿರುವ ಇತರೆ ಜನಾಂಗದವರಿಗೆ ಭೂಮಿ ಮಂಜೂರು ಮಾಡಿದ್ದು ಕೇವಲ ದಲಿತರಿಗೆ ಭೂ ಮಂಜೂರು ಮಾಡದೇ ತಡೆಹಿಡಿಯಲಾಗಿದೆ ಎಂದರು.

ನಮೂನೆ 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದವರು ಹಾಗೂ ದಲಿತರು ವಾಸದ ಮನೆಗಳಿಗೂ ಹಕ್ಕುಪತ್ರ ಇದುವರೆಗೂ ನೀಡಿಲ್ಲ. ಇ-ಸ್ವತ್ತು ಆಗದೇ ಯಾವುದೇ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ. ಕೂಡಲೇ ಈ ಎಲ್ಲಾ ಅಂಶಗಳನ್ನು ಗಮನಿಸಿ ಕಡುಬಡವರಾದ ದಲಿತರಿಗೆ ಭೂ ಮಂಜೂರಾತಿ, ಸರ್ಕಾರಿ ಸೌಲಭ್ಯ ಹಾಗೂ ವಾಸದ ಮನೆಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಯೋಗೀಶ್, ಸತೀಶ್, ತಾಲ್ಲೂಕು ಸಂಚಾಲಕ ವಸಂತ್, ಮುಖಂಡರುಗಳಾದ ಶ್ರೀನಿವಾಸ್, ರಾಜೇಶ್, ರಘು, ಸೀನಾ ಮತ್ತಿತರರಿದ್ದರು.
- ಸುರೇಶ್ ಎನ್.