ಚಿಕ್ಕಮಗಳೂರು-ಜಾತೀಯತೆ, ಅಸ್ಪೃಶ್ಯತೆಯನ್ನು ಹೋಗಲಾಡಿದ ಕೀರ್ತಿ ಬಿ.ಕೃಷ್ಣಪ್ಪನವರಿಗೆ ಸಲ್ಲುತ್ತದೆ-ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ

ಚಿಕ್ಕಮಗಳೂರು, ಜೂನ್ 10:- ಜಾತೀಯತೆ, ಅಸ್ಪಶ್ಯತೆ, ಮೇಲು-ಕೀಳು ಎಂಬ ಕತ್ತಲೆಯ ಕೂಪದಲ್ಲಿ ಮುಳುಗಿದ್ದ ಶೋಷಿತರ ವರ್ಗಕ್ಕೆ ಸೂರ್ಯನ ಕಿರಣಗಳಂತೆ ಬೆಳಕಾದವರು ಪ್ರೊ.ಬಿ.ಕೃಷ್ಣಪ್ಪನವರು ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಹೇಳಿದರು.

ನಗರದ ಜಿಲ್ಲಾ ಬಿ.ಎಸ್.ಪಿ. ಕಚೇರಿಯಲ್ಲಿ ಮಂಗಳವಾರ ನಡೆದ ಶೋಷಿತರ ಹರಿಕಾರ ದಿ|| ಪ್ರೊ.ಬಿ. ಕೃಷ್ಣಪ್ಪ ನವರ 87ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಆಶಯವನ್ನು ರಾಜ್ಯದಲ್ಲಿ ಭಿತ್ತುವ ಸಲುವಾಗಿ ಸಂಘಟನೆಯನ್ನು ಸ್ಥಾಪಿಸಿದರು. ಬಳಿಕ ಬಿಎಸ್ಪಿ ಕಾನ್ಸಿರಾಂರನ್ನು ಭೇಟಿ ಮಾಡಿ ಅನೇಕ ಚರ್ಚೆಗಳೊಂದಿಗೆ ರಾಜ್ಯದಲ್ಲಿ 1992 ರಲ್ಲಿ ಬಿಎಸ್ಪಿಗೆ ಸ್ಥಾಪನೆಗೆ ಕಾರಣಕರ್ತರಾಗಿ ಬಹುಜನರಿಗೆ ರಾಜಕೀಯ ಪ್ರಜ್ಞೆ ಹಾಗೂ ಅಧಿಕಾರ ಹಿಡಿಯಲು ಚಳುವಳಿ ರೂಪಿಸಿದ ಮಹಾಚೇತನ ಎಂದು ಬಣ್ಣಿಸಿದರು.

ದೇಶದಲ್ಲಿ ಬಹುಸಂಖ್ಯಾತರು ಅಧಿಕಾರದಿಂದ ವಂಚಿತರಾಗಿ ಮೂರನೇ ಶಕ್ತಿ ಅಧಿಕಾರ ಹಿಡಿಯಿತು. ಆದರೆ ರಾಜಕೀಯ ಪಕ್ಷಗಳು ಬಹುಜನರ ಮತವನ್ನು ಪಡೆದು ಪರಿವರ್ತನೆಗೊಳಿಸದೇ ಮೋಸವೆಸಗಿತ್ತು. ಅಲ್ಲದೇ ಕೃಷ್ಣಪ್ಪನವರು ಕೋಲಾರದಲ್ಲಿ ಚುನಾವಣಾ ಅಖಾಡಕ್ಕೆ ದುಮುಕಿದಾಗ ಕುತಂತ್ರದಿಂದ ಸೋಲುಣಿಸಿದರು ಎಂದು ಹೇಳಿದರು.

ಅಂಬೇಡ್ಕರ್ ಸಂವಿಧಾನದಿಂದ ದೇಶವು ಸ್ವಾತಂತ್ರ್ಯಗೊಂಡರೂ ಅಸಮಾನತೆ, ಜಾತೀಯತೆ ಇಂದಿಗೂ ಕೆಲವೆಡೆ ತಾಂಡವವಾಡುತ್ತಿವೆ. ಆ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಅಧಿಕಾರ ಗದ್ದುಗೆ ಹಿಡಿದ ಬಿಎಸ್ಪಿ, ಸಂವಿಧಾನ ಜಾರಿಗೊಳಿಸಿ ಬಹುಜನರಿಗೆ ಅಭಿವೃದ್ದಿಗೆ ಸಹಕಾರ ನೀಡಿತು. ಇಂದಿಗೂ ಎಲ್ಲರೊಡನೆ ಮುಖಾ ಮುಖಿ ಮಾತನಾಡಲು ಧೈರ್ಯ ತುಂಬಿದವರು ಕೃಷ್ಣಪ್ಪನವರ ಹೋರಾಟವೇ ಕಾರಣ ಎಂದರು.

ಕೃಷ್ಣಪ್ಪನವರು ಸೊರಬ ತಾಲ್ಲೂಕಿನಲ್ಲಿ ಚಂದ್ರಗುತ್ತಿಯಲ್ಲಿ ಮಹಿಳೆಯರ ಬೆತ್ತಲೆ ಸೇವೆಯ ಅನಿಷ್ಟ ಪದ್ಧತಿ ನಿಷೇಧಿಸಲು ನಿರಂತರ ಹೋರಾಡಿ ಮಹಿಳೆಯರ ಮರ್ಯಾದೆ, ಸ್ವಾಭಿಮಾನ ಉಳಿಸಿದ ಕೀರ್ತಿ ಅವರ ಪಾಲಿಗಿದೆ. ಹೀಗೆಯೇ ರಾಜ್ಯಾದ್ಯಂತ ಸಂಘಟನೆಯಲ್ಲಿ ತೊಡಗಿ ಮೂಡನಂಬಿಕೆ, ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಹಾಕಿದರು ಎಂದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ವಿದ್ಯಾರ್ಥಿದೆಸೆಯಿಂದಲೇ ಪ್ರೊ.ಬಿ.ಕೃಷ್ಣಪ್ಪನವ ರಿಗೆ ಚಿಪ್ಪಿನಲ್ಲಿ ಟೀ ಕೊಡುವುದು, ತಾಯಿಗೆ ದೇವಾಲಯದ ಒಳಪ್ರವೇಶ ಅಡ್ಡಿಪಡಿಸುವುದನ್ನು ವಿರೋಧಿಸಿದ್ದರು. ಬಾಲ್ಯದಿಂದಲೇ ಜಾಗೃತರಾಗಿ ಪುರೋಹಿತ ಶಾಹಿ ವಿರುದ್ಧ ಹೋರಾಡಿದ ಬಳಿಕ ಜ್ಞಾನದ ಹಣತೆ ಹಂಚಿದ್ದು ಇಂದಿನ ಸಮಾಜ ಆ ಬೆಳಕನ್ನು ಆರದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕಿದೆ ಎಂದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅಂಭೇಡ್ಕರ್ ಹಾಗೂ ಪ್ರೊ.ಬಿ. ಕೃಷ್ಣಪ್ಪನವರ ಹೆಸರಿನಲ್ಲಿ ಉಗಮಿಸಿರುವ ಕೆಲವು ಸಂಘಟನೆಗಳು ಆಶಯಕ್ಕೆ ಕೊಡಲಿಪೆಟ್ಟು ಹಾಕುತ್ತಿವೆ. ಸ್ವಾರ್ಥ ಹಾಗೂ ಹೊಟ್ಟೆಪಾಡಿಗಾಗಿ ಸಂಘಟನೆ ಹೆಸರನ್ನು ಬಳಸಿಕೊಂಡು ಅಂಭೇಡ್ಕರ್ ಚಿಂತನೆಗಳಿಗೆ ದ್ರೋಹ ವೆಸಗುತ್ತಿದೆ ಎಂದು ದೂರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿ ಆರ್.ವಸಂತ್ ವಹಿಸಿ ಮಾತನಾಡಿ ದರು. ಈ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರದ ಸಂಯೋಜಕ ಕೆ.ಆರ್.ಗಂಗಾಧರ್, ನಗರಾಧ್ಯಕ್ಷ ಡಿ.ಹೆಚ್. ವಿಜಯಕುಮಾರ್, ಹಿರಿಯ ಮುಖಂಡರುಗಳಾದ ಮಲ್ಲೇಶ್, ಚೆನ್ನಯ್ಯ, ತರೀಕೆರೆ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *